ತಮ್ಮ ಪರ್ಯಾಯಪೂರ್ವ ಸಂಚಾರವನ್ನು ಯಶಸ್ವಿಯಾಗಿ ಪೂರೈಸಿದ ಅಪರಾಹ್ನ ಶೀರೂರಿನಲ್ಲಿನ ತಮ್ಮ ಮೂಲಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಡಿಯಾಳಿ ಮಹಿಷಮರ್ದಿನಿ ದೇವಳದಲ್ಲಿ ವಿಶೇಷ ಪೂಜೆ ನಡೆಸಿದರು. ಬಳಿಕ ಸಂಜೆ ಸುಮಾರು 5.30ಕ್ಕೆ ಕುಂಜಿಬೆಟ್ಟು ಶಾರದಾ ಮಂಟಪ ವೃತ್ತ ಸಮೀಪದ ಲಕ್ಷ್ಮೀನರಸಿಂಹ ಕಟ್ಟಡ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಶ್ವೇತವರ್ಣದ ಕುದುರೆ ಸಾರೋಟಿನಲ್ಲಿ ಸಾಗಿಬಂತು.
ಕಡಿಯಾಳಿ, ಕಲ್ಸಂಕ, ಸಿಟಿಬಸ್ ನಿಲ್ದಾಣ, ಹೋಟೆಲ್ ಕಿದಿಯೂರ್, ಸರ್ವಿಸ್ ಬಸ್ ನಿಲ್ದಾಣ, ತ್ರಿವೇಣಿ ವೃತ್ತ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆ ಮೂಲಕ ರಥಬೀದಿ ಪ್ರವೇಶಿಸಿತು. ಸ್ವರ್ಣಪಲ್ಲಕಿಯಲ್ಲಿ ಮಠದ ಪಟ್ಟದ ದೇವರ ಸಹಿತ ಆಗಮಿಸಿದ ಬೃಹತ್ ಮೆರವಣಿಗೆಯಲ್ಲಿ ಮಕರ ತೋರಣ, ಬಾಜಾಭಜಂತ್ರಿ, ವಿವಿಧ ನೃತ್ಯವೈವಿಧ್ಯಗಳು, ಭಜನಾ ತಂಡಗಳು, ವೇದಘೋಷ, ಜನಪದ ನೃತ್ಯ ಮೊದಲಾದವುಗಳು ಮೆರವಣಿಗೆಯಲ್ಲಿ ಸಾಗಿಬಂದವು.
ಅದಕ್ಕೂ ಮುನ್ನ ಮೂಲಮಠದಲ್ಲಿ ಶಾಸಕ ರಘುಪತಿ ಭಟ್ ಸ್ವಾಮೀಜಿಯವರನ್ನು ಸನ್ಮಾನಿಸಿದರು. ಕಡಿಯಾಳಿ ದೇವಸ್ಥಾನದಲ್ಲಿ ಸ್ವಾಮೀಜಿಯವರನ್ನು ಸನ್ಮಾನಿಸಲಾಯಿತು.
ರಥಬೀದಿ ಪ್ರವೇಶಿಸಿದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಅನಂತೇಶ್ವರ, ಚಂದ್ರೇಶ್ವರ ದೇವರ ದರ್ಶನ ಮಾಡಿ, ಕನಕನ ಕಿಂಡಿ ಮೂಲಕ ಕೃಷ್ಣನನ್ನು ನೋಡಿದರು. ಬಳಿಕ ಕೃಷ್ಣ ಮಠ ಪ್ರವೇಶಿಸಿದ ಶೀರೂರು ಸ್ವಾಮೀಜಿಯವರನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹಸ್ತಲಾಘವದೊಂದಿಗೆ ಸ್ವಾಗತಿಸಿ, ಕೃಷ್ಣದರ್ಶನ ಮಾಡಿಸಿದರು.
(ಸಂಯುಕ್ತ ಕರ್ನಾಟಕ: 01-01-2010)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ