ಜುಲೈ 15, 2010

ಅಪೂರ್ವ ಸೊಬಗಿನ ಕಟ್ಟಿಗೆ ರಥ

ಉಡುಪಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಶ್ರೀಕೃಷ್ಣ ಮಠ, ಅಷ್ಟ ಮಠಗಳು. ಮಠದೊಳಗಿನ ಸೊಬಗು, ಕೃಪಾಸಾಗರ ಆಚಾರ್ಯ ಮಧ್ವ ಪ್ರತಿಷ್ಠಾಪಿತ, ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಮೂರ್ತಿ. ಬಾಯಿ ನೀರೂರಿಸುವ ಘಮಘಮಿಸುವ ಊಟ!
ಇವಿಷ್ಟೇ ಅಲ್ಲ. ಉಡುಪಿಯಲ್ಲಿ ಇನ್ನೂ ಇದೆ. ಚತುರ್ದಶ ಭುವನದೊಡೆಯನ ಸಂಭ್ರಮಕ್ಕಾಗಿ ಚಿನ್ನ- ಬೆಳ್ಳಿ ರಥಗಳ ಹೊರತಾಗಿಯೂ ಮೂರು ತೇರುಗಳಿವೆ. ಇವೆಲ್ಲವೂ ಕೃಷ್ಣಮೂರ್ತಿಯನ್ನಿಟ್ಟು ಉತ್ಸವವನ್ನಾಚರಿಸಿ ಸಂಭ್ರಮಿಸಲು. ಆದರೆ, ಉಡುಪಿಯಲ್ಲಿ ಇನ್ನೂ ಒಂದು ರಥವಿದೆ. ಅದೇ ಕಟ್ಟಿಗೆ ರಥ!
ಅನ್ನಬ್ರಹ್ಮ ಎಂದೇ ಕರೆಯಲ್ಪಡುವ ಕೃಷ್ಣ ಸನ್ನಿಧಿಗೆ ಬರುವ ಲಕ್ಷಾಂತರ ಮಂದಿ ಭಕ್ತರ ಅಶನ ಸಮಸ್ಯೆಯನ್ನು ತಣಿಸಿ, ಘಡ್ರಸೋಪೇತವಾದ ಭೋಜನ ನಿರಾತಂಕವಾಗಿ ನಡೆಸಲು ಪೂರಕವಾದ ಉರುವಲು ವ್ಯವಸ್ಥೆಗೆ ಸುಗಮವನ್ನಾಗಿಸಲು ಈ ರಥ! ಸಣ್ಣ ವಿಚಾರವಾದರೂ ಆ ಕುರಿತು ಚಿಂತಿಸಿ, ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಷ ನೀಡಿದ ಆ ಮಹೋದಯನಿಗೆ ನಮೋ ನಮ: ಎನ್ನೋಣವೇ?
ಕೃಷ್ಣಮಠದೆದುರಿನ ಮಧ್ವಸರೋವರದ ಪಾರ್ಶ್ವಭಾಗದಲ್ಲಿ ಕಟ್ಟಿಗೆ ರಥದ ಶಾಶ್ವತ ಸ್ಥಾನ. ಅಲ್ಲಿಯೇ ಸಮೀಪ ಅನ್ನಬ್ರಹ್ಮನ ನೈವೇದ್ಯ ಸಿದ್ಧಗೊಳ್ಳುವ ಪಾಕಶಾಲೆ. ಅದಕ್ಕೆ ಹೊಂದಿಕೊಂಡಂತೆ ಕಟ್ಟಿಗೆ ರಥಕ್ಕೊಂದು ನೆಲೆಯನ್ನು ಒದಗಿಸಲಾಗಿದೆ. ನಿರಂತರ ಅನ್ನದಾನಕ್ಕೆ ಉರುವಲು ಸಮಸ್ಯೆಯಾಗದಿರಲಿ ಎಂಬ ಸದಾಶಯದಿಂದ ಕಟ್ಟಿಗೆ ರಥ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು, ಅದನ್ನು ಪರ್ಯಾಯಪೂರ್ವ ವಿಧಿಗಳಲ್ಲಿ ಒಂದಾಗಿಸಿದ್ದಾರೆ. ಈ ಕ್ರಮವನ್ನು ಜಾರಿಗೆ ತಂದವರು ಪ್ರಾಯಶ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ನಾಡಹಬ್ಬದ ರೂಪಕೊಟ್ಟ ವಾದಿರಾಜ ಸಾರ್ವಭೌಮರೇ ಇರಬೇಕು.
ಪರ್ಯಾಯ ವಹಿಸಿ ಕೃಷ್ಣಪೂಜಾ ದೀಕ್ಷೆ ವಹಿಸಿಕೊಳ್ಳುವ ಅಷ್ಟಮಠಗಳ ಯತಿಗಳು ಕಟ್ಟಿಗೆ ಮುಹೂರ್ತ ಅಂದರೆ, ಕಟ್ಟಿಗೆ ಒಟ್ಟುವ ಕಾರ್ಯವನ್ನು ಮಾಡಲೇಬೇಕು. ಪರ್ಯಾಯಪೂರ್ವ ವಿಧಿಗಳಲ್ಲಿ ಬಾಳೆ ಮುಹೂರ್ತ (ಬಾಳೆಗಿಡ ನೆಡುವುದು) ಪ್ರಥಮದ್ದಾದರೆ, ಕಟ್ಟಿಗೆ ಮುಹೂರ್ತ ಎರಡನೆಯದು. ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಯವರು ತಮ್ಮ ಮುಂದಿನ 2 ವರ್ಷಗಳಿಗೆ ಬೇಕಾಗುವಷ್ಟು ಉರುವಲನ್ನು ಸಂಗ್ರಹಿಸಿ, ರಥದ ಮಾದರಿಯಲ್ಲಿ ಒಟ್ಟುಮಾಡುತ್ತಾರೆ. ತಮ್ಮ ಪರ್ಯಾಯ ಕಾಲದಲ್ಲಿ ಒಟ್ಟಿಟ್ಟಿರುವ ಆ ಕಟ್ಟಿಗೆಯನ್ನು ಬಳಸಬಹದು. ಮುಂದಿನ ರಥ ನಿಮರ್ಾಣ ಭಾವೀ ಪರ್ಯಾಯ ಶ್ರೀಗಳಿದ್ದು. ಈ ಚಕ್ರ ಮುಂದುವರಿಯುತ್ತಲೇ ಇರುತ್ತದೆ. ಇದುವರೆಗೆ ಅನೂಚಾನವಾಗಿ ನಡೆದುಬಂದಿದೆ.
ಈಗ ಅನಿಲಾಧಾರಿತ ಅಡುಗೆ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕಟ್ಟಿಗೆ ಮುಹೂರ್ತ ಕೈಬಿಟ್ಟಿಲ್ಲ. ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕೃಷ್ಣಮಠ ಪ್ರಾಂಗಣ ಪರಿಸರದಲ್ಲಿ ಕಟ್ಟಿಗೆ ರಥಕ್ಕೊಂದು ಶೋಭೆ ಇದೆ.

(ಸಂಯುಕ್ತ ಕರ್ನಾಟಕ: ನ. 9, 2008)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ