ಶಕ್ತಿ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿ ದಿನಗಳಲ್ಲಿ ಉಡುಪಿ ಕೃಷ್ಣನನ್ನು ಕಾಣುವುದೇ ಕಣ್ಣಿಗೆ ಹಬ್ಬ. ಶಾಲಗ್ರಾಮ ಶಿಲೆಯ ಕೃಷ್ಣಮೂರ್ತಿ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಸ್ತ್ರೀವೇಷಧಾರಿ! ಈ ದಿನಗಳಲ್ಲಿ ಕೃಷ್ಣನಿಗೆ ಹೆಣ್ಣುರೂಪದ ಅಲಂಕಾರ ಮಾಡಲಾಗುತ್ತದೆ. ಶಕ್ತಿಗೆ ಸ್ಪೂರ್ತಿಯ ಸೆಲೆಯಾದ ಪುರುಷರೂಪಿ ಭಗವಂತನಿಗೆ ದೇವಿ ಅಲಂಕಾರ ಮಾಡಲಾಗುತ್ತದೆ ಎಂದು ವಿದ್ವಾಂಸ ಗೋಪಾಲಾಚಾರ್ ಅಭಿಪ್ರಾಯಪಡುತ್ತಾರೆ. ಈ ತೆರನ ಪದ್ಧತಿ ಬಲು ಹಿಂದಿನಿಂದಲೂ ಉಡುಪಿ ಕೃಷ್ಣಮಠದಲ್ಲಿ ಜಾರಿಗೆ ಬಂದಿದೆ. ಭಗವತಿ, ಕೃಷ್ಣನ ತಂಗಿ ಎಂದೇ ವೈಷ್ಣವರು ನಂಬುತ್ತಾರೆ. ಮಾತ್ರವಲ್ಲದೇ ಕಳೆದ ಆಷಾಢ ಏಕಾದಶಿಯಿಂದ ಮುಂದಿನ ಉತ್ಥಾನ ದ್ವಾದಶಿ ವರೆಗೆ ಶಯನದಲ್ಲಿರುವ ಮಹಾವಿಷ್ಣು ಲಕ್ಷ್ಮೀ ಅಂತರ್ಗತನಾಗಿರುತ್ತಾನೆ ಎಂಬ ನಂಬಿಕೆಯೂ ಇದೆ. ಜಗನ್ನಿಯಾಮಕ ಭಗವಂತನನ್ನು ನಿದ್ರೆಯಿಂದೆಬ್ಬಿಸಲು ಲಕ್ಷ್ಮೀ ಒಲುಮೆ ಗಳಿಸಿಕೊಳ್ಳುವುದು ಅಗತ್ಯ. ಹಾಗಾಗಿ ರಮಾಂತರ್ಗತ ರಮಾರಮಣ ಶ್ರೀಕೃಷ್ಣನಿಗೆ ಹೆಣ್ಣುರೂಪ. ದೇವಿ, ಕೃಷ್ಣನ ಅನುಜೆ ಎಂದು ತಿಳಿಹೇಳಲೂ ಈ ರೂಪ. ಕೃಷ್ಣನ ವಿಶೇಷ ಸನ್ನಿಧಾನದಲ್ಲಿ ಭಾಮೆಯನ್ನು ಕಂಡು ಪುಳಕಗೊಳ್ಳಲು ಇದು ಸುಸಂದರ್ಭ. ಪರಶುರಾಮ ಸೃಷ್ಟಿಯಲ್ಲಿ ಶಕ್ತಿ ಆರಾಧನೆ ವಿಶೇಷವಾಗಿರುವ ಹಿನ್ನೆಲೆಯೂ ಕೃಷ್ಣನ ಸ್ತ್ರೀವೇಷಕ್ಕೆ ಪೂರಕ.
ಮಾತ್ರವಲ್ಲದೇ ಕೃಷ್ಣ ತ್ರಿಗುಣ ಸ್ವರೂಪಿ. ಸತ್ವ, ರಜ ಮತ್ತು ತಮೋಗುಣಗಳಿಗೆ ಒಡೆಯ. ತ್ರಿಗುಣಗಳಿಗೆ ಅನುಕ್ರಮವಾಗಿ ಶ್ರೀ, ಭೂ ಮತ್ತು ದುರ್ಗೆ ಅಧಿದೇವತೆಗಳು. ಅದನ್ನೇ ಪುರಂದರದಾಸರು `ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಮರಳು ಮಾಡಿಕೊಂಡೆಯಲ್ಲ.... ಮಾಯಾದೇವಿಯೇ' ಎಂದು ಭಾಮೆರೂಪಿ ಕೃಷ್ಣನನ್ನು ಸ್ತುತಿಸಿದ್ದು!
ವಾದಿರಾಜರ ಕಾಲದಿಂದಲೂ ಉಡುಪಿ ಕೃಷ್ಣನಿಗೆ ನವರಾತ್ರಿ ದಿನಗಳಲ್ಲಿ ಸ್ತ್ರೀರೂಪಿ ಅಲಂಕಾರ ಹಾಗೂ ಪ್ರತೀ ಶುಕ್ರವಾರಗಳಂದು ಮೋಹಿನಿ ರೂಪದಲ್ಲಿ ಅಲಂಕರಿಸುವ ವಾಡಿಕೆ ಇತ್ತು. ಅವರು ತಮ್ಮ ಕೀರ್ತನೆಯೊಂದರಲ್ಲಿ ` ಲಾವಣ್ಯದಿಂದ ಮೆರೆವ ನಿಜಸತಿಯ ಹೆಣ್ಣು ರೂಪದಿ ಕಾಂಬ ಮಹಾಲಕುಮಿ ಇವಗಿನ್ಯಾರು ಯಾಕೆ' ಎಂದು ಕೃಷ್ಣನ ಹೆಣ್ಣು ರೂಪವನ್ನು ಕಂಡು ಬೆರಗಾಗಿ ಸ್ವತ: ಹೆಣ್ಣಾಗಿರುವ ಕೃಷ್ಣನಿಗೆ ಅನ್ಯ ಹೆಣ್ಣುಗಳು ಯಾಕೆ ಮತ್ತು ಕೃಷ್ಣನಿಗಿಂತ ಮಿಗಿಲಾದ ಹೆಣ್ಣುಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂತೂ ನವರಾತ್ರಿಯ ಈ ದಿನಗಳಲ್ಲಿ ಕೃಷ್ಣನನ್ನು ಸತ್ಯಭಾಮೆ, ಮೋಹಿನಿ, ಪದ್ಮಾವತಿ, ವೀಣಾಪಾಣಿ... ಹೀಗೆ ನವವಿಧ ರೂಪಗಳಿಂದ ಕಾಣುವ ಸುಯೋಗ.
(ಸಂಯುಕ್ತ ಕರ್ನಾಟಕ: ಅ. 6, 2008)
ಜುಲೈ 13, 2010
ಜೂನ್ 9, 2010
ಅಪೂರ್ವ ದ್ವಿಭುಜ ಗಣಪತಿ ಆಲಯ
ಸಾಮಾನ್ಯವಾಗಿ ಗೌರಿತನಯ ವಿನಾಯಕ ಚತುಃಹಸ್ತ, ನಾಲ್ಕು ಕೈಗಳುಳ್ಳವ. ಅಪೂರ್ವವಾಗಿ ಕೆಲವೆಡೆಗಳಲ್ಲಿ ಆತ ದ್ವಿಬಾಹು ಉಳ್ಳವನಾಗಿಯೂ ಕಂಡುಬರುತ್ತಾನೆ. ಇಡಗುಂಜಿ ವಿನಾಯಕ, ಗೋಕರ್ಣದ ಗಣಪ ಮೊದಲಾದ ಗಣೇಶಾಲಯಗಳಲ್ಲಿನ ವಿಗ್ರಹಗಳು ಎರಡು ಕೈಗಳುಳ್ಳವುಗಳು. ಉಡುಪಿ ಜಿಲ್ಲೆಯಲ್ಲಿಯೂ ದ್ವಿಬಾಹು ಗಣಪನ ವಿಗ್ರಹಗಳಿರುವ ಅಪೂರ್ವ ತಾಣಗಳಿವೆ. ಅವುಗಳಲ್ಲಿ ಒಂದು ಆನೆಗುಡ್ಡೆ ಕುಂಭಾಶಿಯಲ್ಲಿದ್ದರೆ, ಇನ್ನೊಂದು ಹಟ್ಟಿಯಂಗಡಿಯಲ್ಲಿದೆ. ಆನೆಗುಡ್ಡೆ ಗಣಪತಿ ನಿಂತ ಭಂಗಿಯಲ್ಲಿದ್ದರೆ, ಹಟ್ಟಿಯಂಗಡಿ ಗಣೇಶ ಕುಳಿತ ವಿಶಿಷ್ಟ ಭಂಗಿಯಲ್ಲಿದೆ. ದ್ವಿಭುಜ ಗಣಪತಿ ಕ್ಷಿಪ್ರ ಫಲದಾಯಕ ಎಂಬುದು ಆಸ್ತಿಕರ ನಂಬುಗೆ. ಈ ಎರಡೂ ಕಾರಣೀಕ ಕ್ಷೇತ್ರಗಳು ಕುಂದಾಪುರ ತಾಲ್ಲೂಕಿನಲ್ಲಿವೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿ- ಕುಂದಾಪುರ ನಡುವೆ ರಸ್ತೆಯಿಂದ ಸುಮಾರು ಒಂದು ಕಿ. ಮೀ. ಪೂರ್ವದಲ್ಲಿ ಆನೆಗುಡ್ಡೆ ಎಂಬ ಕ್ಷೇತ್ರವಿದೆ. ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇದೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧು ಕಾನನ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರ ಎಂದೂ ಕರೆಯುತ್ತಿದ್ದು ಈಗಿನ ಕಲಿಯುಗದಲ್ಲಿ ಕುಂಭಾಶಿ ಎಂದು ಕರೆಯಲಾಗುತ್ತಿದೆ. ಹಿಂದೊಮ್ಮೆ ಅನಾವೃಷ್ಟಿಯಾಗಿದ್ದಾಗ ಗೌತಮ ಮುನಿಗಳು ಈ ಕ್ಷೇತ್ರದಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದ್ದರು. ಹೀಗೆ ಈ ಕ್ಷೇತ್ರ ಯುಗಾಂತರಗಳಿಂದಲೂ ಪವಿತ್ರವಾದುದು, ಪ್ರಸಿದ್ಧವಾದುದುದು ಎಂಬುದು ಪುರಾಣಗಳ ಉಲ್ಲೇಖ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿ ನಿತ್ಯಾಹ್ನಿಕಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾಗಿದ್ದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮರಾಜನಲ್ಲಿ ಕುಂಭಾಸುರನ ಪೀಡೆಯ ಕುರಿತು ಅರುಹಿದಾಗ, ಲೋಕಕಂಠಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಧರ್ಮಜ ಅಪ್ಪಣೆ ಕೊಟ್ಟ. ಕೂಡಲೇ ಭೀಮ ಯುದ್ಧ ಸನ್ನದ್ಧನಾದ. ಭೀಮ- ಕುಂಭರೊಳಗೆ ಘನಘೋರ ಯುದ್ಧ ನಡೆಯಿತಾದರೂ, ಯುದ್ಧದಲ್ಲಿ ಕುಂಭಾಸುರ ಅವಧ್ಯನಾಗಿಯೇ ಉಳಿದ. ಅವನನ್ನು ಸಂಹರಿಸುವ ಪರಿ ಬಗೆಗೆ ಚಿಂತಿಸುತ್ತಾ ಭೀಮಸೇನ ಶಿಬಿರಕ್ಕೆ ಹಿಂದಿರುಗುತ್ತಲೇ ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ಕುಂಭನ ವಧೆ ಸಾಧ್ಯ ಎಂಬ ಅಶರೀರವಾಣಿ ಕೇಳಿಸಿತು.
ಭೀಮಸೇನ ವಿಶ್ವಂಭರ ರೂಪಿ ವಿನಾಯಕನನ್ನು ಧ್ಯಾನಿಸಿದ. ಆನೆ ರೂಪದಲ್ಲಿ ಭಗವಂತ ಪ್ರತ್ಯಕ್ಷನಾಗಿ ಕತ್ತಿಯೊಂದನ್ನು ದಯಪಾಲಿಸಿದ. ಅದರಿಂದಲೇ ಭೀಮಸೇನ ಕುಂಭಾಸುರನನ್ನು ಸಂಹರಿಸಿದ ಎಂಬುದು ಕುಂಭಾಸಿ ಸ್ಥಳಪುರಾಣ ತಿಳಿಸುವ ಕ್ಷೇತ್ರದ ಕಥೆ. ಅದನ್ನೇ ವಾದಿರಾಜ ಯತಿವರೇಣ್ಯರು ತಮ್ಮ `ತೀರ್ಥ ಪ್ರಬಂಧ'ದಲ್ಲಿ ಭೀಮಸೇನ ಕುಂಭಾಸುರನನ್ನು ಅಸಿ (ಕತ್ತಿ)ಯಿಂದ ಸಂಹರಿಸಿದುದರಿಂದಲೇ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ. ಮುಂದಕ್ಕೆ ಅಪಭ್ರಂಶವಾಗಿ ಕುಂಭಾಶಿ ಎಂಬ ಹೆಸರೂ ಆ ಊರಿಗೆ ಬಂತು. ಈ ಪ್ರದೇಶಕ್ಕೆ ನಾಗಾಚಲ ಎಂಬ ಹೆಸರೂ ಇತ್ತು. ಗಣಪತಿ ಆನೆರೂಪದಲ್ಲಿ ಭೀಮನಿಗೆ ಕಂಡು ಕತ್ತಿ ಅನುಗ್ರಹಿಸಿದ ಪ್ರದೇಶದಲ್ಲಿ ಗಣಪತಿ ಉದ್ಭವಿಸಿದ. ಸೊಂಡಿಲಿನ ಆಕಾರವಿರುವ ಮುಖಕ್ಕೆ ಮಾತ್ರ ಅಲ್ಲಿ ನಿತ್ಯ ಪೂಜಾದಿ ವಿನಿಯೋಗಗಳು ನಡೆಯುತ್ತವೆ. ಉಳಿದ ಭಾಗ ಗೋಡೆಯಿಂದ ಆವೃತವಾಗಿದೆ. ಆನೆ ರೂಪದಿಂದ ಪ್ರತ್ಯಕ್ಷನಾದ ಗಣಪತಿ ಭಕ್ತಾಭೀಷ್ಟ ಪ್ರದಾತ ಎಂಬುದು ನಂಬಿಕೆ.
ಸುಮಾರು ಏಳು ತಲೆಮಾರಿನಿಂದ ಶಿವಳ್ಳಿ ಬ್ರಾಹ್ಮಣ ಪಂಗಡದ ಉಪಾಧ್ಯಾಯ ಎಂಬ ವರ್ಗಕ್ಕೆ ಇಲ್ಲಿನ ಪೂಜೆ, ಆಡಳಿತ ಇದೆ. ದೇವಳದ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರು ಹಾಗೂ ಭಜಕರ ನೆರವಿನೊಂದಿಗೆ ಈ ವರ್ಗ ಮಾಡಿದೆ. ಪಂಚಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ಗಣಹೋಮ ಇತ್ಯಾದಿಗಳು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು. ಇಲ್ಲಿನ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
ವಾರಾಹಿ ನದಿಯ ಉತ್ತರ ದಂಡೆಯ ಮೇಲಿರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ಸ್ಥಳ ಪ್ರಾಚೀನ ರಾಜಧಾನಿಯಾಗಿ, ಹಲವು ಧರ್ಮಗಳ ನೆಲೆಯಾಗಿ ಕಲೆ- ಸಾಹಿತ್ಯ ಸಂಸ್ಕೃತಿಗಳ ತವರೂರಾಗಿಯೂ ಪ್ರಸಿದ್ಧ. ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 45 ಕಿ. ಮೀ., ಕುಂದಾಪುರದಿಂದ ಈಶಾನ್ಯಕ್ಕೆ 8 ಕಿ. ಮೀ. ದೂರದಲ್ಲಿರುವ ಹಟ್ಟಿಯಂಗಡಿಯ ಪ್ರಮುಖ ಆಕರ್ಷಣೆ ಇಲ್ಲಿನ ವಿನಾಯಕ ದೇವಸ್ಥಾನ.
ಪಟ್ಟಿ, ಹಟ್ಟಿ ನಗರ ಎಂದೆಲ್ಲಾ ಕರೆದುಕೊಳ್ಳುತ್ತಿದ್ದ ಹಟ್ಟಿಯಂಗಡಿ, ತುಳುನಾಡನ್ನು ಆಳಿದ ಅಳುಪರ ರಾಜಧಾನಿ. ಇಲ್ಲಿನ ಗಣಪತಿ ದೇವಾಲಯದ ವಿನಾಯಕ ಮೂರ್ತಿ ಕರ್ನಾಟಕದ ಪ್ರಾಚೀನ ಗಣಪತಿ ಮೂರ್ತಿಗಳಲ್ಲಿ ಎರಡನೆಯದು. (ಮೊದಲನೆಯದು ಗೋಕರ್ಣ ಗಣಪತಿ). ಗಾಣಪತ್ಯರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ಈ ದೇವಳದ ಉಗಮವಾಯಿತೆಂದು ಇತಿಹಾಸಜ್ಞ ಡಾ. ಪಿ. ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಇಲ್ಲಿನ ವಿನಾಯಕ ವಿಗ್ರಹ ಸುಮಾರು 5- 6ನೇ ಶತಮಾನಕ್ಕೆ ಸೇರಿದುದು. ಸುಮಾರು ಒಂದು ಸಾವಿರದ ಐನೂರು ವರ್ಷಗಳಿಂದ ಭಕ್ತರಿಂದ ಪೂಜೆಗೊಂಡ ವಿಗ್ರಹ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ವಿನಾಯಕ ದೇವಾಲಯ ಚತುರಸ್ರ ಆಕಾರದಲ್ಲಿದೆ. ಗರ್ಭಗೃಹದಲ್ಲಿರುವ ವಿನಾಯಕ ದ್ವಿಬಾಹು. ಕೃಷ್ಣಶಿಲಾ ವಿಗ್ರಹ. ಬಾಲಗಣೇಶನ ವಿಗ್ರಹ ಇದಾಗಿದೆ ಎಂಬುದು ವಿಗ್ರಹ ತಜ್ಞರ ಅಭಿಪ್ರಾಯ. ಕುಳಿತ ಭಂಗಿಯ ಅಪೂರ್ವ ವಿಗ್ರಹವಿದು. ಪಾಣಿಪೀಠದ ಮೇಲ್ಘಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆಯಿದೆ. ಆಗಮ ತಂತ್ರ ವೈದಿಕ ವಿಧಾನದಂತೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಿತ್ಯ ಅಷ್ಟದ್ರವ್ಯ ಗಣಪತಿ ಹವನ ಇಲ್ಲಿನ ವಿಶೇಷ. ಗಣಪತಿ ಇಷ್ಟಪ್ರದಾಯಕ ಎಂದೇ ಪ್ರಸಿದ್ಧಿ. ಭಕ್ತರ ಪ್ರಾರ್ಥನೆಗೆ ಹೂ ಪ್ರಸಾದ ನೀಡುವುದು ಈ ದೇವಳದ ವಿಶೇಷ. ದೇವಳದ ಆಡಳಿತ ಮೊಕ್ತೇಸರ ಎಚ್. ರಾಮಚಂದ್ರ ಭಟ್ಟ ದೇವಳದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
(ಸಂಯುಕ್ತ ಕರ್ನಾಟಕ: ಆ. 30, 2008)
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿ- ಕುಂದಾಪುರ ನಡುವೆ ರಸ್ತೆಯಿಂದ ಸುಮಾರು ಒಂದು ಕಿ. ಮೀ. ಪೂರ್ವದಲ್ಲಿ ಆನೆಗುಡ್ಡೆ ಎಂಬ ಕ್ಷೇತ್ರವಿದೆ. ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇದೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧು ಕಾನನ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರ ಎಂದೂ ಕರೆಯುತ್ತಿದ್ದು ಈಗಿನ ಕಲಿಯುಗದಲ್ಲಿ ಕುಂಭಾಶಿ ಎಂದು ಕರೆಯಲಾಗುತ್ತಿದೆ. ಹಿಂದೊಮ್ಮೆ ಅನಾವೃಷ್ಟಿಯಾಗಿದ್ದಾಗ ಗೌತಮ ಮುನಿಗಳು ಈ ಕ್ಷೇತ್ರದಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದ್ದರು. ಹೀಗೆ ಈ ಕ್ಷೇತ್ರ ಯುಗಾಂತರಗಳಿಂದಲೂ ಪವಿತ್ರವಾದುದು, ಪ್ರಸಿದ್ಧವಾದುದುದು ಎಂಬುದು ಪುರಾಣಗಳ ಉಲ್ಲೇಖ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿ ನಿತ್ಯಾಹ್ನಿಕಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾಗಿದ್ದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮರಾಜನಲ್ಲಿ ಕುಂಭಾಸುರನ ಪೀಡೆಯ ಕುರಿತು ಅರುಹಿದಾಗ, ಲೋಕಕಂಠಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಧರ್ಮಜ ಅಪ್ಪಣೆ ಕೊಟ್ಟ. ಕೂಡಲೇ ಭೀಮ ಯುದ್ಧ ಸನ್ನದ್ಧನಾದ. ಭೀಮ- ಕುಂಭರೊಳಗೆ ಘನಘೋರ ಯುದ್ಧ ನಡೆಯಿತಾದರೂ, ಯುದ್ಧದಲ್ಲಿ ಕುಂಭಾಸುರ ಅವಧ್ಯನಾಗಿಯೇ ಉಳಿದ. ಅವನನ್ನು ಸಂಹರಿಸುವ ಪರಿ ಬಗೆಗೆ ಚಿಂತಿಸುತ್ತಾ ಭೀಮಸೇನ ಶಿಬಿರಕ್ಕೆ ಹಿಂದಿರುಗುತ್ತಲೇ ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ಕುಂಭನ ವಧೆ ಸಾಧ್ಯ ಎಂಬ ಅಶರೀರವಾಣಿ ಕೇಳಿಸಿತು.
ಭೀಮಸೇನ ವಿಶ್ವಂಭರ ರೂಪಿ ವಿನಾಯಕನನ್ನು ಧ್ಯಾನಿಸಿದ. ಆನೆ ರೂಪದಲ್ಲಿ ಭಗವಂತ ಪ್ರತ್ಯಕ್ಷನಾಗಿ ಕತ್ತಿಯೊಂದನ್ನು ದಯಪಾಲಿಸಿದ. ಅದರಿಂದಲೇ ಭೀಮಸೇನ ಕುಂಭಾಸುರನನ್ನು ಸಂಹರಿಸಿದ ಎಂಬುದು ಕುಂಭಾಸಿ ಸ್ಥಳಪುರಾಣ ತಿಳಿಸುವ ಕ್ಷೇತ್ರದ ಕಥೆ. ಅದನ್ನೇ ವಾದಿರಾಜ ಯತಿವರೇಣ್ಯರು ತಮ್ಮ `ತೀರ್ಥ ಪ್ರಬಂಧ'ದಲ್ಲಿ ಭೀಮಸೇನ ಕುಂಭಾಸುರನನ್ನು ಅಸಿ (ಕತ್ತಿ)ಯಿಂದ ಸಂಹರಿಸಿದುದರಿಂದಲೇ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ. ಮುಂದಕ್ಕೆ ಅಪಭ್ರಂಶವಾಗಿ ಕುಂಭಾಶಿ ಎಂಬ ಹೆಸರೂ ಆ ಊರಿಗೆ ಬಂತು. ಈ ಪ್ರದೇಶಕ್ಕೆ ನಾಗಾಚಲ ಎಂಬ ಹೆಸರೂ ಇತ್ತು. ಗಣಪತಿ ಆನೆರೂಪದಲ್ಲಿ ಭೀಮನಿಗೆ ಕಂಡು ಕತ್ತಿ ಅನುಗ್ರಹಿಸಿದ ಪ್ರದೇಶದಲ್ಲಿ ಗಣಪತಿ ಉದ್ಭವಿಸಿದ. ಸೊಂಡಿಲಿನ ಆಕಾರವಿರುವ ಮುಖಕ್ಕೆ ಮಾತ್ರ ಅಲ್ಲಿ ನಿತ್ಯ ಪೂಜಾದಿ ವಿನಿಯೋಗಗಳು ನಡೆಯುತ್ತವೆ. ಉಳಿದ ಭಾಗ ಗೋಡೆಯಿಂದ ಆವೃತವಾಗಿದೆ. ಆನೆ ರೂಪದಿಂದ ಪ್ರತ್ಯಕ್ಷನಾದ ಗಣಪತಿ ಭಕ್ತಾಭೀಷ್ಟ ಪ್ರದಾತ ಎಂಬುದು ನಂಬಿಕೆ.
ಸುಮಾರು ಏಳು ತಲೆಮಾರಿನಿಂದ ಶಿವಳ್ಳಿ ಬ್ರಾಹ್ಮಣ ಪಂಗಡದ ಉಪಾಧ್ಯಾಯ ಎಂಬ ವರ್ಗಕ್ಕೆ ಇಲ್ಲಿನ ಪೂಜೆ, ಆಡಳಿತ ಇದೆ. ದೇವಳದ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರು ಹಾಗೂ ಭಜಕರ ನೆರವಿನೊಂದಿಗೆ ಈ ವರ್ಗ ಮಾಡಿದೆ. ಪಂಚಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ಗಣಹೋಮ ಇತ್ಯಾದಿಗಳು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು. ಇಲ್ಲಿನ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
ವಾರಾಹಿ ನದಿಯ ಉತ್ತರ ದಂಡೆಯ ಮೇಲಿರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ಸ್ಥಳ ಪ್ರಾಚೀನ ರಾಜಧಾನಿಯಾಗಿ, ಹಲವು ಧರ್ಮಗಳ ನೆಲೆಯಾಗಿ ಕಲೆ- ಸಾಹಿತ್ಯ ಸಂಸ್ಕೃತಿಗಳ ತವರೂರಾಗಿಯೂ ಪ್ರಸಿದ್ಧ. ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 45 ಕಿ. ಮೀ., ಕುಂದಾಪುರದಿಂದ ಈಶಾನ್ಯಕ್ಕೆ 8 ಕಿ. ಮೀ. ದೂರದಲ್ಲಿರುವ ಹಟ್ಟಿಯಂಗಡಿಯ ಪ್ರಮುಖ ಆಕರ್ಷಣೆ ಇಲ್ಲಿನ ವಿನಾಯಕ ದೇವಸ್ಥಾನ.
ಪಟ್ಟಿ, ಹಟ್ಟಿ ನಗರ ಎಂದೆಲ್ಲಾ ಕರೆದುಕೊಳ್ಳುತ್ತಿದ್ದ ಹಟ್ಟಿಯಂಗಡಿ, ತುಳುನಾಡನ್ನು ಆಳಿದ ಅಳುಪರ ರಾಜಧಾನಿ. ಇಲ್ಲಿನ ಗಣಪತಿ ದೇವಾಲಯದ ವಿನಾಯಕ ಮೂರ್ತಿ ಕರ್ನಾಟಕದ ಪ್ರಾಚೀನ ಗಣಪತಿ ಮೂರ್ತಿಗಳಲ್ಲಿ ಎರಡನೆಯದು. (ಮೊದಲನೆಯದು ಗೋಕರ್ಣ ಗಣಪತಿ). ಗಾಣಪತ್ಯರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ಈ ದೇವಳದ ಉಗಮವಾಯಿತೆಂದು ಇತಿಹಾಸಜ್ಞ ಡಾ. ಪಿ. ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಇಲ್ಲಿನ ವಿನಾಯಕ ವಿಗ್ರಹ ಸುಮಾರು 5- 6ನೇ ಶತಮಾನಕ್ಕೆ ಸೇರಿದುದು. ಸುಮಾರು ಒಂದು ಸಾವಿರದ ಐನೂರು ವರ್ಷಗಳಿಂದ ಭಕ್ತರಿಂದ ಪೂಜೆಗೊಂಡ ವಿಗ್ರಹ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ವಿನಾಯಕ ದೇವಾಲಯ ಚತುರಸ್ರ ಆಕಾರದಲ್ಲಿದೆ. ಗರ್ಭಗೃಹದಲ್ಲಿರುವ ವಿನಾಯಕ ದ್ವಿಬಾಹು. ಕೃಷ್ಣಶಿಲಾ ವಿಗ್ರಹ. ಬಾಲಗಣೇಶನ ವಿಗ್ರಹ ಇದಾಗಿದೆ ಎಂಬುದು ವಿಗ್ರಹ ತಜ್ಞರ ಅಭಿಪ್ರಾಯ. ಕುಳಿತ ಭಂಗಿಯ ಅಪೂರ್ವ ವಿಗ್ರಹವಿದು. ಪಾಣಿಪೀಠದ ಮೇಲ್ಘಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆಯಿದೆ. ಆಗಮ ತಂತ್ರ ವೈದಿಕ ವಿಧಾನದಂತೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಿತ್ಯ ಅಷ್ಟದ್ರವ್ಯ ಗಣಪತಿ ಹವನ ಇಲ್ಲಿನ ವಿಶೇಷ. ಗಣಪತಿ ಇಷ್ಟಪ್ರದಾಯಕ ಎಂದೇ ಪ್ರಸಿದ್ಧಿ. ಭಕ್ತರ ಪ್ರಾರ್ಥನೆಗೆ ಹೂ ಪ್ರಸಾದ ನೀಡುವುದು ಈ ದೇವಳದ ವಿಶೇಷ. ದೇವಳದ ಆಡಳಿತ ಮೊಕ್ತೇಸರ ಎಚ್. ರಾಮಚಂದ್ರ ಭಟ್ಟ ದೇವಳದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
(ಸಂಯುಕ್ತ ಕರ್ನಾಟಕ: ಆ. 30, 2008)
ಜೂನ್ 7, 2010
ವರುಣ ಕೃಪೆಗೆ ಮಂಡೂಕ ಪರಿಣಯ!
ಕಿವಿಗಡಚಿಕ್ಕುವ ಬ್ಯಾಂಡ್- ವಾದ್ಯಗಳ ಸದ್ದು, ನಭವನ್ನು ಬೇಧಿಸುವ ತೆರದಿ ಸಿಡಿಯುವ ಪಟಾಕಿ ಸದ್ದು, ಹರ್ಷಚಿತ್ತ ಮಂದಿಯ ಸಾಲು ಸಾಲು.... ಸಾಲಂಕೃತ ಮಂಟಪದಲ್ಲಿ ಸಾಗಿಬರುತ್ತಿರುವ ವಧೂ-ವರರು! ಇದು ಉಡುಪಿಯಲ್ಲಿ ನಡೆದ ವಿವಾಹ ಸಂಭ್ರಮದ ದೃಶ್ಯ. ಇದು ಅಂತಿಂಥ ಮದುವೆಯಲ್ಲ. ಸಾಕ್ಷಾತ್ ಮಂಡೂಕ ಪರಿಣಯ! ರಟ್ಟಿನ ಪೆಟ್ಟಿಗೆಯೊಳಗೆ ಬಂಧಿತವಾಗಿದ್ದ ಹೆಣ್ಣು ಕಪ್ಪೆಯೊಂದು ಅಂಥದೇ ಇನ್ನೊಂದು ಪೆಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ ಗಂಡು ಕಪ್ಪೆಯನ್ನು ಕಾಣುವ (ನೆಗೆಯುವ!) ತವಕ! ಈ ಅಪೂರ್ವ ಸನ್ನಿವೇಶವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಅನೇಕ ಮಂದಿಗೆ ಕುತೂಹಲ.
ವೈಶಾಖವನ್ನು ಹೋಲುವ ಬಿಸಿಲು ಹಾಗೂ ಸೆಖೆ ಆಷಾಢ ಮಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಮಳೆಗಾಗಿ ವರುಣನಿಗಾಗಿ ಮೊರೆಯಿಡುವ ವಿನೂತನ ಮಾದರಿಯಾಗಿ ಮಂಡೂಕ ಪರಿಣಯ (ಕಪ್ಪೆಗಳ ಮದುವೆ)ವನ್ನು ಏರ್ಪಡಿಸಲಾಯಿತು. ಸದಾ ಹೊಸತೇನನ್ನಾದರೂ ಮಾಡಿ ತನ್ಮೂಲಕ ಪ್ರಚಾರ ಪಡೆಯುವ ವಿಚಿತ್ರ ಮನೋಭಾವದ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯಲ್ಲೇ ಪ್ರಥಮದ್ದಾದ ಹಾಗೂ ವಿನೂತನವಾದ ಕಪ್ಪೆಗಳ ವಿವಾಹವನ್ನು ಏರ್ಪಡಿಸುವುದರೊಂದಿಗೆ ಹಲವರ ಗಮನ ಸೆಳೆದರು.
ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡರ ತಲಾಷೆಗಾಗಿ ಸಾಕಷ್ಟು ಪರಿಶ್ರಮ ಪಡಲಾಯಿತು. ಕೊನೆಗೂ ಗಣೇಶರಾಜ್ ಸರಳೇಬೆಟ್ಟು ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡನ್ನು ತಂದು (ಪ್ರಾಣಿಶಾಸ್ತ್ರಜ್ಞರಿಂದ ದೃಢೀಕರಿಸಿ?) ಅವುಗಳನ್ನು ಪ್ರತ್ಯೇಕವಾದ ರಟ್ಟಿನ ಪೆಟ್ಟಿಗೆಯಲ್ಲಿಟ್ಟು, ತಳ್ಳುಗಾಡಿಯಲ್ಲಿ ಸಾಲಂಕೃತ ಮಂಟಪವೊಂದನ್ನು ನಿರ್ಮಿಸಿ, ಇಲ್ಲಿನ ಡಯಾನಾ ವೃತ್ತದಿಂದಾರಂಭಿಸಿ, ಬಸ್ ನಿಲ್ದಾಣ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ವಾದ್ಯ, ಧ್ವನಿವರ್ಧಕ, ಗರ್ನಾಲು (ಪಟಾಕಿ), ಸಾಲದೆಂಬಂತೆ ಕಪ್ಪೆಗಳ ಮದುವೆಗಾಗಿಯೇ ಬಂದ ಕೆಲವರಿಂದ ಕೇಕೇ ನೃತ್ಯ ಇತ್ಯಾದಿ ಎಲ್ಲವೂ ಇತ್ತು. ಮದುವೆ ಸುಸಾಂಗವಾಗಿ ನಡೆಯಲು ಆರಕ್ಷಕರ ರಕ್ಷಣೆಯೂ ದೊರಕಿತ್ತು!
ಬಸ್ ನಿಲ್ದಾಣವೇ ಮದುವೆ ಮಂಟಪವಾಗಿ ರೂಪುಗೊಂಡು ನಿತ್ಯಾನಂದ ಒಳಕಾಡು ಗಂಡು ಕಪ್ಪೆಯ ಪರವಾಗಿ ಹೆಣ್ಣು ಕಪ್ಪೆಯ ಕಾಲಿಗೆ ಕಾಲುಂಗುರ ತೊಡಿಸಿ, ಮಾಂಗಲ್ಯ ಬಿಗಿದರು. ಅರಿಶಿಣ- ಕುಂಕುಮ, ಸೇಸೆ ಹಾಕಲಾಯಿತು. ಅಕ್ಷತಾರೋಪಣವೂ ನಡೆಯಿತು. ಹೂಹಾರ ಹಾಕಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಅಲ್ಲಿ ನೆರೆದಿದ್ದವರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಾಲ ನಡೆದ ಕಪ್ಪೆ ಮದುವೆ ಕಾರ್ಯಕ್ರಮ ನಡೆಯಿತು. ಮದುವೆ ಊಟ ಎಲ್ಲಿ ಎಂದು ಅಲ್ಲಿ ನೆರೆದಿದ್ದವರೋರ್ವರು ದೊಡ್ಡ ದನಿಯಲ್ಲಿ ಕೇಳಿದ್ದು ಕುಚೋದ್ಯವಾಗಿತ್ತು!
ಇದೆಲ್ಲವೂ ನಡೆದದ್ದು ಮಳೆಗಾಗಿ. ಈ ಮೊರೆ ವರುಣನಿಗೆ ಕೇಳಿಸೀತೇ ಎಂದು ಕಾದುನೋಡಬೇಕಷ್ಟೇ!!
(ಸಂಯುಕ್ತ ಕರ್ನಾಟಕ: ಜು. 16, 2008)
ವೈಶಾಖವನ್ನು ಹೋಲುವ ಬಿಸಿಲು ಹಾಗೂ ಸೆಖೆ ಆಷಾಢ ಮಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಮಳೆಗಾಗಿ ವರುಣನಿಗಾಗಿ ಮೊರೆಯಿಡುವ ವಿನೂತನ ಮಾದರಿಯಾಗಿ ಮಂಡೂಕ ಪರಿಣಯ (ಕಪ್ಪೆಗಳ ಮದುವೆ)ವನ್ನು ಏರ್ಪಡಿಸಲಾಯಿತು. ಸದಾ ಹೊಸತೇನನ್ನಾದರೂ ಮಾಡಿ ತನ್ಮೂಲಕ ಪ್ರಚಾರ ಪಡೆಯುವ ವಿಚಿತ್ರ ಮನೋಭಾವದ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯಲ್ಲೇ ಪ್ರಥಮದ್ದಾದ ಹಾಗೂ ವಿನೂತನವಾದ ಕಪ್ಪೆಗಳ ವಿವಾಹವನ್ನು ಏರ್ಪಡಿಸುವುದರೊಂದಿಗೆ ಹಲವರ ಗಮನ ಸೆಳೆದರು.
ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡರ ತಲಾಷೆಗಾಗಿ ಸಾಕಷ್ಟು ಪರಿಶ್ರಮ ಪಡಲಾಯಿತು. ಕೊನೆಗೂ ಗಣೇಶರಾಜ್ ಸರಳೇಬೆಟ್ಟು ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡನ್ನು ತಂದು (ಪ್ರಾಣಿಶಾಸ್ತ್ರಜ್ಞರಿಂದ ದೃಢೀಕರಿಸಿ?) ಅವುಗಳನ್ನು ಪ್ರತ್ಯೇಕವಾದ ರಟ್ಟಿನ ಪೆಟ್ಟಿಗೆಯಲ್ಲಿಟ್ಟು, ತಳ್ಳುಗಾಡಿಯಲ್ಲಿ ಸಾಲಂಕೃತ ಮಂಟಪವೊಂದನ್ನು ನಿರ್ಮಿಸಿ, ಇಲ್ಲಿನ ಡಯಾನಾ ವೃತ್ತದಿಂದಾರಂಭಿಸಿ, ಬಸ್ ನಿಲ್ದಾಣ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ವಾದ್ಯ, ಧ್ವನಿವರ್ಧಕ, ಗರ್ನಾಲು (ಪಟಾಕಿ), ಸಾಲದೆಂಬಂತೆ ಕಪ್ಪೆಗಳ ಮದುವೆಗಾಗಿಯೇ ಬಂದ ಕೆಲವರಿಂದ ಕೇಕೇ ನೃತ್ಯ ಇತ್ಯಾದಿ ಎಲ್ಲವೂ ಇತ್ತು. ಮದುವೆ ಸುಸಾಂಗವಾಗಿ ನಡೆಯಲು ಆರಕ್ಷಕರ ರಕ್ಷಣೆಯೂ ದೊರಕಿತ್ತು!
ಬಸ್ ನಿಲ್ದಾಣವೇ ಮದುವೆ ಮಂಟಪವಾಗಿ ರೂಪುಗೊಂಡು ನಿತ್ಯಾನಂದ ಒಳಕಾಡು ಗಂಡು ಕಪ್ಪೆಯ ಪರವಾಗಿ ಹೆಣ್ಣು ಕಪ್ಪೆಯ ಕಾಲಿಗೆ ಕಾಲುಂಗುರ ತೊಡಿಸಿ, ಮಾಂಗಲ್ಯ ಬಿಗಿದರು. ಅರಿಶಿಣ- ಕುಂಕುಮ, ಸೇಸೆ ಹಾಕಲಾಯಿತು. ಅಕ್ಷತಾರೋಪಣವೂ ನಡೆಯಿತು. ಹೂಹಾರ ಹಾಕಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಅಲ್ಲಿ ನೆರೆದಿದ್ದವರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಾಲ ನಡೆದ ಕಪ್ಪೆ ಮದುವೆ ಕಾರ್ಯಕ್ರಮ ನಡೆಯಿತು. ಮದುವೆ ಊಟ ಎಲ್ಲಿ ಎಂದು ಅಲ್ಲಿ ನೆರೆದಿದ್ದವರೋರ್ವರು ದೊಡ್ಡ ದನಿಯಲ್ಲಿ ಕೇಳಿದ್ದು ಕುಚೋದ್ಯವಾಗಿತ್ತು!
ಇದೆಲ್ಲವೂ ನಡೆದದ್ದು ಮಳೆಗಾಗಿ. ಈ ಮೊರೆ ವರುಣನಿಗೆ ಕೇಳಿಸೀತೇ ಎಂದು ಕಾದುನೋಡಬೇಕಷ್ಟೇ!!
(ಸಂಯುಕ್ತ ಕರ್ನಾಟಕ: ಜು. 16, 2008)
ಉದ್ವಾರ್ಚನೆ: ಇದು ಕೃಷ್ಣಮಠದ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ
ಉದ್ವಾರ್ಚನೆ- ಇದು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ. ಯತಿಗಳಿಂದಲೇ ಈ ಅಪೂರ್ವ ಕಾರ್ಯಕ್ರಮಕ್ಕೆ ಚಾಲನೆ. ವಜ್ರ ಕವಚಧಾರಿಯಾಗಿ, ಬಾಲಕೃಷ್ಣನಾಗಿ ಕಂಗೊಳಿಪ ಪೊಡವಿಗೊಡೆಯ ರುಕ್ಮಿಣೀಕರಾರ್ಚಿತ ಉಡುಪಿ ಶ್ರೀಕೃಷ್ಣ ಮೂರುತಿ ಬೊಳ್ಗೊಡೆ (ತಾಳೆಗರಿ ಕೊಡೆ) ಸಹಿತ ಈಚಲು ಚಾಪೆ ಧರಿಸಿ ಬೆಚ್ಚನೆ ಕುಳಿತಿದ್ದಾನೆ. ಆತನ ದರ್ಶನಾಕಾಂಕ್ಷಿಗಳಾಗಿ ಬಂದ ಭಕ್ತರಿಗೆ ತನ್ನ ಮುಖವನ್ನೂ ಆತ ತೋರಿಸಲೊಲ್ಲ!
ಇದು ಉಡುಪಿ ಕೃಷ್ಣ ಕೋಪಾವಿಷ್ಟನಾದ ಸಂದರ್ಭ ಎಂದರೆ ಅದು ತಪ್ಪಾಗುತ್ತದೆ. ಇದು ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಕಲೆತು ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಉತ್ಸವಪ್ರಿಯ ಶ್ರೀಕೃಷ್ಣನಿಗೆ ನಿತ್ಯವೂ ವಿವಿಧ ಉತ್ಸವಗಳು. ಸಾಲದಂತೆ ಚತುರ್ದಶ ಭುವನದೊಡೆಯನಿಗೆ ದಿನವೂ 14 ಬಗೆಯ ಪೂಜೆಗಳು. ಬಹುವಿಧ ಪೂಜೆಗಳು, ಆಗಮಿಸುವ ಭಕ್ತಾದಿಗಳಿಗೆ ಆಶೀರ್ವಾದ ಇತ್ಯಾದಿಗಳಿಂದ ಸದಾ ಬ್ಯುಸಿಯಾಗಿರುವ ಪರ್ಯಾಯ ಪೀಠಸ್ಥ ಯತಿಗಳಿಗೆ ದೇವಳ ಗರ್ಭಗುಡಿ ಸಹಿತ ದೇವಳದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ ಮತ್ತು ಸಮಯವೂ ಕಮ್ಮಿ. ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಉದ್ವಾರ್ಚನೆ ಎಂಬ ವಿಶಿಷ್ಟ, ಸಾಮುದಾಯಿಕ ಕಾರ್ಯಕ್ರಮ ಜಾರಿಗೆ ಬಂದಿರಬೇಕು. ಶ್ರೀಸಾಮಾನ್ಯನೂ ಯತಿಗಳೊಂದಿಗೆ ಸೇರಿಕೊಂಡು ಈ ವಿಶಿಷ್ಟ ಸೇವೆಯಲ್ಲಿ ಭಾಗಿಯಾಗಲು ಸುವರ್ಣಾವಕಾಶ.
ಮಾತ್ರವಲ್ಲದೇ ಪ್ರಥಮೈಕಾದಶಿ ಬಳಿಕ ಶ್ರೀಕೃಷ್ಣ ಪವಡಿಸುತ್ತಾನೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ವಿಶೇಷ ಉತ್ಸವಾದಿಗಳಿಲ್ಲ. ಈ ಸಮಯದಲ್ಲಿ ಬರುವ ಗೌಜಿಯ ಉತ್ಸವ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ ಮಾತ್ರ. ಇನ್ನು ಭಗವಂತ ನಿದ್ದೆಯಿಂದೇಳುವುದು ಉತ್ಥಾನ ಏಕಾದಶಿಗೆ. ಅಲ್ಲಿಯ ವರೆಗೆ ಕೃಷ್ಣನ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರಕ್ಕೆ ಕೊಂಡೊಯ್ಯುವಂತೆಯೂ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣನ ನಿದ್ರೆಗೆ ಭಂಗವಾಗಬಾರದಲ್ಲಾ, ಆತನ ಶಯನಾಗೃಹ ಶುಚಿಯಾಗಿರಬೇಕಲ್ಲಾ? ಅದಕ್ಕೇ ಈ ಉದ್ವಾರ್ಚನೆ.
ಪುತ್ತಿಗೆ ಪರ್ಯಾಯ ಸಂದರ್ಭ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಅದಮಾರು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತೀರ್ಥಹಳ್ಳಿ ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯತಿಗಳೆಲ್ಲ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಗಳಾದರು. ಭಕ್ತರೂ ಅದರಲ್ಲಿ ಪಾಲ್ಗೊಂಡರು. ಬಳಿಕ ಮಧ್ವಸರೋವರದಲ್ಲಿ ಸ್ನಾನಗೈದು ಉದ್ವಾರ್ಚನೆಯನ್ನು ಕೃಷ್ಣಾರ್ಪಣಗೈದರು.
(ಸಂಯುಕ್ತ ಕರ್ನಾಟಕ: ಜು. 9, 2008)
ಇದು ಉಡುಪಿ ಕೃಷ್ಣ ಕೋಪಾವಿಷ್ಟನಾದ ಸಂದರ್ಭ ಎಂದರೆ ಅದು ತಪ್ಪಾಗುತ್ತದೆ. ಇದು ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಕಲೆತು ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಉತ್ಸವಪ್ರಿಯ ಶ್ರೀಕೃಷ್ಣನಿಗೆ ನಿತ್ಯವೂ ವಿವಿಧ ಉತ್ಸವಗಳು. ಸಾಲದಂತೆ ಚತುರ್ದಶ ಭುವನದೊಡೆಯನಿಗೆ ದಿನವೂ 14 ಬಗೆಯ ಪೂಜೆಗಳು. ಬಹುವಿಧ ಪೂಜೆಗಳು, ಆಗಮಿಸುವ ಭಕ್ತಾದಿಗಳಿಗೆ ಆಶೀರ್ವಾದ ಇತ್ಯಾದಿಗಳಿಂದ ಸದಾ ಬ್ಯುಸಿಯಾಗಿರುವ ಪರ್ಯಾಯ ಪೀಠಸ್ಥ ಯತಿಗಳಿಗೆ ದೇವಳ ಗರ್ಭಗುಡಿ ಸಹಿತ ದೇವಳದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ ಮತ್ತು ಸಮಯವೂ ಕಮ್ಮಿ. ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಉದ್ವಾರ್ಚನೆ ಎಂಬ ವಿಶಿಷ್ಟ, ಸಾಮುದಾಯಿಕ ಕಾರ್ಯಕ್ರಮ ಜಾರಿಗೆ ಬಂದಿರಬೇಕು. ಶ್ರೀಸಾಮಾನ್ಯನೂ ಯತಿಗಳೊಂದಿಗೆ ಸೇರಿಕೊಂಡು ಈ ವಿಶಿಷ್ಟ ಸೇವೆಯಲ್ಲಿ ಭಾಗಿಯಾಗಲು ಸುವರ್ಣಾವಕಾಶ.
ಮಾತ್ರವಲ್ಲದೇ ಪ್ರಥಮೈಕಾದಶಿ ಬಳಿಕ ಶ್ರೀಕೃಷ್ಣ ಪವಡಿಸುತ್ತಾನೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ವಿಶೇಷ ಉತ್ಸವಾದಿಗಳಿಲ್ಲ. ಈ ಸಮಯದಲ್ಲಿ ಬರುವ ಗೌಜಿಯ ಉತ್ಸವ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ ಮಾತ್ರ. ಇನ್ನು ಭಗವಂತ ನಿದ್ದೆಯಿಂದೇಳುವುದು ಉತ್ಥಾನ ಏಕಾದಶಿಗೆ. ಅಲ್ಲಿಯ ವರೆಗೆ ಕೃಷ್ಣನ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರಕ್ಕೆ ಕೊಂಡೊಯ್ಯುವಂತೆಯೂ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣನ ನಿದ್ರೆಗೆ ಭಂಗವಾಗಬಾರದಲ್ಲಾ, ಆತನ ಶಯನಾಗೃಹ ಶುಚಿಯಾಗಿರಬೇಕಲ್ಲಾ? ಅದಕ್ಕೇ ಈ ಉದ್ವಾರ್ಚನೆ.
ಪುತ್ತಿಗೆ ಪರ್ಯಾಯ ಸಂದರ್ಭ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಅದಮಾರು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತೀರ್ಥಹಳ್ಳಿ ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯತಿಗಳೆಲ್ಲ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಗಳಾದರು. ಭಕ್ತರೂ ಅದರಲ್ಲಿ ಪಾಲ್ಗೊಂಡರು. ಬಳಿಕ ಮಧ್ವಸರೋವರದಲ್ಲಿ ಸ್ನಾನಗೈದು ಉದ್ವಾರ್ಚನೆಯನ್ನು ಕೃಷ್ಣಾರ್ಪಣಗೈದರು.
(ಸಂಯುಕ್ತ ಕರ್ನಾಟಕ: ಜು. 9, 2008)
ಇವರು ಉಡುಪಿ ಜಿಲ್ಲೆಯ ಪತ್ರಿಕೋದ್ಯಮಿಗಳು
ಉಡುಪಿ ಜಿಲ್ಲೆಯೂ ಸೇರಿಕೊಂಡಂತೆ ಅವಿಭಜಿತ ದ. ಕ. ಜಿಲ್ಲೆಯ ಪತ್ರಿಕೋದ್ಯಮಕ್ಕೆ ಸುಮಾರು 150 ವರ್ಷಗಳ ದೀರ್ಘ ಇತಿಹಾಸವಿದೆ. ಜಿಲ್ಲೆಯಲ್ಲಿ ಧೀಮಂತ ಪತ್ರಕರ್ತರಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇತಿಹಾಸ ಸೇರಿದವರು ನೂರಾರು ಮಂದಿ. ಈ ಕ್ಷೇತ್ರದಲ್ಲಿ ದುಡಿದು ನಿವೃತ್ತರಾದವರು, ಈಗ ಕಾರ್ಯಪ್ರವೃತ್ತರಾಗಿರುವವರ ಸಂಖ್ಯೆಯೂ ಅಪಾರ. ಇಲ್ಲಿನ ಪತ್ರಿಕೋದ್ಯಮದ ಇತಿಹಾಸವೂ ರೋಚಕ.
ಹುರುಳಿ ಭೀಮರಾಯರು ಪತ್ರಿಕಾ ಕ್ಷೇತ್ರದ ಮೊದಲ ತಲೆಮಾರಿನವರು. `ನವಯುಗ'ದ ಕೆ. ಹೊನ್ನಯ್ಯ ಶೆಟ್ಟಿ, `ಪ್ರಭಾತ'ದ ಕುಡ್ಪಿ ವಾಸುದೇವ ಶೆಣೈ, `ನವಭಾರತ'ದ ವಿ. ಎಸ್. ಕುಡ್ವ, `ಪಂಚ್ಕದಾಯಿ'ಯ ಬಿ. ವಿ. ಬಾಳಿಗ, `ಸುಪ್ರಭಾತ'ದ ಸರಸ್ವತಿಬಾಯಿ ರಾಜವಾಡೆ, `ಕಸ್ತೂರಿ'ಯ ಪಾ. ವೆಂ. ಆಚಾರ್ಯ, ಬೆ. ಸು. ನಾ. ಮಲ್ಯ ನಂತರದ ತಲೆಮಾರಿನವರು.
ಇದೀಗ ನಮ್ಮೊಡನಿರುವ ಧೀಮಂತ ಪತ್ರಕರ್ತರೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ವ್ಯವಸಾಯ ಕಡಿಮೆ ಏನಲ್ಲ.
ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಮಾಧವ ವಿಠಲ ಕಾಮತ್ ಪತ್ರಿಕಾರಂಗದಲ್ಲಿ ಜನಮನದಲ್ಲಿ ನೆಲೆನಿಲ್ಲಬಲ್ಲ ಕೆಲವೇ ಕೆಲವು ಪತ್ರಿಕೋದ್ಯಮಿಗಳಲ್ಲಿ ಒಬ್ಬರು. `ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಪ್ರಮುಖ ವರದಿಗಾರರಾಗಿ ಸುಮಾರು 3 ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ಪತ್ರಿಕಾ ರಂಗದ ಒಳಹೊರಗುಗಳ ಖಚಿತಾನುಭವ ಪಡೆದು `ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ'ದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. 12ಕ್ಕೂ ಅಧಿಕ ಪತ್ರಿಕೆಗಳಿಗೆ ಅಂಕಣಕಾರರಾದ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ತಿಲಕ್ ಮೊಹರ್ರಿ ಪತ್ರಿಕೋದ್ಯಮ ಪ್ರಶಸ್ತಿ, ವಿದ್ಯಾಧಿರಾಜ ಪ್ರಶಸ್ತಿ, ಸಮಾಜ ಭೂಷಣ ಪ್ರಶಸ್ತಿಯಂತಹ ಹೆಮ್ಮೆಯ ಪುರಸ್ಕಾರ ಪಡೆದು ನಾಡಿಗೇ ಹೆಮ್ಮೆ ಎನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಇತಿಹಾಸ, ಜೀವನ ಚರಿತ್ರೆ, ಪತ್ರಿಕಾರಂಗ ಹಾಗೂ ಸೃಜನಶೀಲ ಸಾಹಿತ್ಯ ಕುರಿತು 40ಕ್ಕೂ ಅಧಿಕ ಪುಸ್ತಕಗಳನ್ನು ಡಾ. ಎಂ. ವಿ. ಕಾಮತ್ ಬರೆದಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ನ ಆಡಳಿತ ಮಂಡಳಿ ಸದಸ್ಯರಾಗಿ ಮಣಿಪಾಲದಲ್ಲೇ ಡಾ. ಕಾಮತ್ ನೆಲೆಸಿದ್ದಾರೆ.
ಬನ್ನಂಜೆ ರಾಮಾಚಾರ್ಯ ಹಿರಿಯ ಪತ್ರಿಕೋದ್ಯಮಿ. ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆ ಜೊತೆಗಿದ್ದ ರಾಮಾಚಾರ್ಯ ಸುಮಾರು 15 ವರ್ಷಗಳ ಕಾಲ ಸಂಪಾದಕರೂ ಆಗಿದ್ದರು. ಅದಕ್ಕೂ ಮುಂಚೆ ನವ ಭಾರತ ಪತ್ರಿಕೆಯಲ್ಲಿ ಸುಮಾರು ಒಂದು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು. ಉತ್ತಮ ಬರೆಹಗಾರರೂ ಅಗಿದ್ದ ಅವರು, ಅನೇಕ ಮಂದಿ ಉದಯೋನ್ಮುಖರಿಗೆ ಮಾರ್ಗದರ್ಶಕರಾಗಿದ್ದರು. ಉಡುಪಿಯಲ್ಲಿ ಅವರ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ ಏರ್ಪಟ್ಟಿತ್ತು.
ಅವರು 2010ರ ಫೆ. 6ರಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.
`ವಿದ್ಯಾವಾಚಸ್ಪತಿ' ಬಿರುದಾಂಕಿತ ಬನ್ನಂಜೆ ಗೋವಿಂದಾಚಾರ್ಯ ಕೂಡಾ ಪತ್ರಕರ್ತರಾಗಿದ್ದವರು. ಉದಯವಾಣಿ ಆರಂಭದ ದಿನಗಳಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದ ಅವರು, ಸಪ್ತಾಹಿಕ ಪುರವಣಿಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಏಕಪಾಠಿಯಾಗಿರುವ ಅವರಿಗೆ ಯಾವುದೇ ವಿಷಯ ಕುರಿತು ತಕ್ಷಣದಲ್ಲಿ ಗ್ರಹಿಸುವ ಶಕ್ತಿ ಇದೆ. ಶಾಲೆಯಲ್ಲಿ ಅವರು ಕಲಿತದ್ದು ಬಹಳ ಕಡಿಮೆ. ಆದರೆ, ಸ್ವತ: ಅಧ್ಯಯನ ನಡೆಸಿ ಪ್ರಬುದ್ಧರಾಗಿರುವುದು ಅವರ ವಿಶೇಷತೆ. ಕನ್ನಡ, ಸಂಸ್ಕೃತಗಳ ಜೊತೆಗೆ ಆಂಗ್ಲಭಾಷೆಯಲ್ಲೂ ಅವರು ಪ್ರಭುತ್ವ ಸಾಧಿಸಿದ್ದಾರೆ. ಪ್ರವಚನಕಾರರಾಗಿ, ಲೇಖಕರಾಗಿ ನಮ್ಮ ನಡುವಿರುವ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯ ಪತ್ರಿಕೋದ್ಯಮದಲ್ಲಿ ಒಂದು ದಂತಕತೆ.
1972ರ ಸುಮಾರಿಗೆ ಉದಯವಾಣಿ ಸೇರಿದ ಎ. ಈಶ್ವರಯ್ಯ, ಆಂಗ್ಲಭಾಷೆಯಲ್ಲಿ ಬಿ. ಎ. ಪದವೀಧರರು. ಉದಯವಾಣಿ ಸಾಪ್ತಾಹಿಕ ವಿಭಾಗದ ಸಂಪಾದಕತ್ವವನ್ನು ವಹಿಸಿದ ಅವರು ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಪ್ರಚಾರ ಮತ್ತು ಪ್ರಸಾರಕ್ಕೆ ಸಲ್ಲಿಸಿದ ಕೊಡುಗೆ ಮನನೀಯ. ಲಲಿತ ರಂಗಗಳ ವಿಮರ್ಶೆಗೆ ವೇದಿಕೆ ಒದಗಿಸಿಕೊಟ್ಟ ಈಶ್ವರಯ್ಯ ಮೊದಲ ಬಾರಿಗೆ ಧ್ವನಿಮುದ್ರಿಕೆಗಳ ಬಗ್ಗೆ ವಿಮರ್ಶೆ ಬರೆದವರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 1973ರಲ್ಲಿ ತುಷಾರ ಮಾಸ ಪತ್ರಿಕೆ ಸ್ಥಾಪಕ ಸಂಪಾದಕರಾಗಿ, ಕನ್ನಡ ಚಿತ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದವರು. ಫೋಕಲ್ ಫೋಟೊ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಬೆಂಗಳೂರು, ಸಾಗರ, ಮುಂಬೈ ಮೊದಲಾದೆಡೆಗಳಲ್ಲಿ 50ಕ್ಕೂ ಹೆಚ್ಚು ಛಾಯಾಗ್ರಹಣ ತರಬೇತಿ ನೀಡಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಗೌರವ ಉಪನ್ಯಾಸಕರೂ ಆಗಿದ್ದಾರೆ.
ಸಂಗೀತ ವಿಮರ್ಶಕರೂ ಆಗಿರುವ ಈಶ್ವರಯ್ಯ, ಮಂಗಳೂರಿನ ಸಂಗೀತ ಪ್ರತಿಷ್ಠಾನ ಅಧ್ಯಕ್ಷ. ಸಣ್ಣ ಕತೆಗಳು, ವಿಮರ್ಶೆ, ಲಲಿತ ಪ್ರಬಂಧ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪೊಲ್ಯ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಂಗ ವಾಚಸ್ಪತಿ ಪ್ರಶಸ್ತಿ, ಪರಶುರಾಮ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.
ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಎನ್. ಗುರುರಾಜ್, ಪತ್ರಿಕೆ ಸಂಪಾದಕರೂ ಆಗಿದ್ದರು. ಪ್ರಸ್ತುತ ಸದ್ರಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ಪತ್ರಿಕೆಯ ಪುಟ ಕಟ್ಟುವಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ತಮ ನಾಟಕಕಾರ, ದಿಗ್ದರ್ಶಕ, ಲೇಖಕರಾಗಿರುವ ಎನ್. ಗುರುರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು ಪ್ರಾಪ್ತವಾಗಿವೆ. ನಿಗರ್ವಿ, ಸ್ನೇಹಜೀವಿಯಾಗಿರುವ ಗುರುರಾಜ್ ಅನೇಕ ಮಂದಿ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ.
ಕರ್ನಾಟಕದಿಂದ ದೂರದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಬಾ. ಸಾಮಗ ಅಲ್ಲಿಯೂ ಕನ್ನಡ ಪತ್ರಿಕೋದ್ಯಮ ನಡೆಸುತ್ತಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ಸಾಮಗ, ತನ್ನ ವಿದ್ಯೆಗೆ ಸೂಕ್ತವಾದ ಉದ್ಯೋಗ ಸಿಗದಿದ್ದಾಗ ಸ್ವತಂತ್ರ ಕಾಯಕ ಕೈಗೊಳ್ಳುವ ದಿಟ್ಟತನ ಮೆರೆದವರು. ಅದಕ್ಕೆ ಅವರು ಆಯ್ದುಕೊಂಡದ್ದು ಪತ್ರಿಕೋದ್ಯಮ!
ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಸನ್ಮಾನಿಸುವುದು, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ಕನ್ನಡ ಸೇನಾನಿಗಳ ಸಂಸ್ಮರಣೆ ಇತ್ಯಾದಿಗಳನ್ನು ದೆಹಲಿಯಲ್ಲಿ ನಿರ್ವಹಿಸುವ ಅವರಿಗೆ ಸಾಕಷ್ಟು ಪ್ರಶಂಸೆಯೂ ಲಭಿಸಿದೆ. ಕಳೆದ 25 ವರ್ಷಗಳ ಹಿಂದೆ `ದೆಹಲಿ ಕನ್ನಡಿಗ' ಎಂಬ ಪತ್ರಿಕೆ ಆರಂಭಿಸಿರುವ ಸಾಮಗ, ಇಂದಿಗೂ ಅವಿಚ್ಛಿನ್ನವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. `ತುಳುವೆರ್' ತುಳು ಪತ್ರಿಕೆ ದೆಹಲಿ ಕನ್ನಡಿಗ ಪತ್ರಿಕೆಯ ಸಂಗಾತಿ.
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಶಂಕರನಾರಾಯಣ ಸಾಮಗ ಅವರ ಪುತ್ರರಾಗಿರುವ ಬಾಲಕೃಷ್ಣ ಸಾಮಗ, ತಮ್ಮ ತಂದೆಯವರ ಕುರಿತ ಪುಸ್ತಕವೊಂದನ್ನು ಪ್ರಕಟಿಸುವ ಇಚ್ಛೆ ಹೊಂದಿದ್ದಾರೆ.
(ಸಂಯುಕ್ತ ಕರ್ನಾಟಕ: ಜು. 1, 2008)
ಹುರುಳಿ ಭೀಮರಾಯರು ಪತ್ರಿಕಾ ಕ್ಷೇತ್ರದ ಮೊದಲ ತಲೆಮಾರಿನವರು. `ನವಯುಗ'ದ ಕೆ. ಹೊನ್ನಯ್ಯ ಶೆಟ್ಟಿ, `ಪ್ರಭಾತ'ದ ಕುಡ್ಪಿ ವಾಸುದೇವ ಶೆಣೈ, `ನವಭಾರತ'ದ ವಿ. ಎಸ್. ಕುಡ್ವ, `ಪಂಚ್ಕದಾಯಿ'ಯ ಬಿ. ವಿ. ಬಾಳಿಗ, `ಸುಪ್ರಭಾತ'ದ ಸರಸ್ವತಿಬಾಯಿ ರಾಜವಾಡೆ, `ಕಸ್ತೂರಿ'ಯ ಪಾ. ವೆಂ. ಆಚಾರ್ಯ, ಬೆ. ಸು. ನಾ. ಮಲ್ಯ ನಂತರದ ತಲೆಮಾರಿನವರು.
ಇದೀಗ ನಮ್ಮೊಡನಿರುವ ಧೀಮಂತ ಪತ್ರಕರ್ತರೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ವ್ಯವಸಾಯ ಕಡಿಮೆ ಏನಲ್ಲ.
ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಮಾಧವ ವಿಠಲ ಕಾಮತ್ ಪತ್ರಿಕಾರಂಗದಲ್ಲಿ ಜನಮನದಲ್ಲಿ ನೆಲೆನಿಲ್ಲಬಲ್ಲ ಕೆಲವೇ ಕೆಲವು ಪತ್ರಿಕೋದ್ಯಮಿಗಳಲ್ಲಿ ಒಬ್ಬರು. `ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಪ್ರಮುಖ ವರದಿಗಾರರಾಗಿ ಸುಮಾರು 3 ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ಪತ್ರಿಕಾ ರಂಗದ ಒಳಹೊರಗುಗಳ ಖಚಿತಾನುಭವ ಪಡೆದು `ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ'ದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. 12ಕ್ಕೂ ಅಧಿಕ ಪತ್ರಿಕೆಗಳಿಗೆ ಅಂಕಣಕಾರರಾದ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ತಿಲಕ್ ಮೊಹರ್ರಿ ಪತ್ರಿಕೋದ್ಯಮ ಪ್ರಶಸ್ತಿ, ವಿದ್ಯಾಧಿರಾಜ ಪ್ರಶಸ್ತಿ, ಸಮಾಜ ಭೂಷಣ ಪ್ರಶಸ್ತಿಯಂತಹ ಹೆಮ್ಮೆಯ ಪುರಸ್ಕಾರ ಪಡೆದು ನಾಡಿಗೇ ಹೆಮ್ಮೆ ಎನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಇತಿಹಾಸ, ಜೀವನ ಚರಿತ್ರೆ, ಪತ್ರಿಕಾರಂಗ ಹಾಗೂ ಸೃಜನಶೀಲ ಸಾಹಿತ್ಯ ಕುರಿತು 40ಕ್ಕೂ ಅಧಿಕ ಪುಸ್ತಕಗಳನ್ನು ಡಾ. ಎಂ. ವಿ. ಕಾಮತ್ ಬರೆದಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ನ ಆಡಳಿತ ಮಂಡಳಿ ಸದಸ್ಯರಾಗಿ ಮಣಿಪಾಲದಲ್ಲೇ ಡಾ. ಕಾಮತ್ ನೆಲೆಸಿದ್ದಾರೆ.
ಬನ್ನಂಜೆ ರಾಮಾಚಾರ್ಯ ಹಿರಿಯ ಪತ್ರಿಕೋದ್ಯಮಿ. ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆ ಜೊತೆಗಿದ್ದ ರಾಮಾಚಾರ್ಯ ಸುಮಾರು 15 ವರ್ಷಗಳ ಕಾಲ ಸಂಪಾದಕರೂ ಆಗಿದ್ದರು. ಅದಕ್ಕೂ ಮುಂಚೆ ನವ ಭಾರತ ಪತ್ರಿಕೆಯಲ್ಲಿ ಸುಮಾರು ಒಂದು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು. ಉತ್ತಮ ಬರೆಹಗಾರರೂ ಅಗಿದ್ದ ಅವರು, ಅನೇಕ ಮಂದಿ ಉದಯೋನ್ಮುಖರಿಗೆ ಮಾರ್ಗದರ್ಶಕರಾಗಿದ್ದರು. ಉಡುಪಿಯಲ್ಲಿ ಅವರ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ ಏರ್ಪಟ್ಟಿತ್ತು.
ಅವರು 2010ರ ಫೆ. 6ರಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.
`ವಿದ್ಯಾವಾಚಸ್ಪತಿ' ಬಿರುದಾಂಕಿತ ಬನ್ನಂಜೆ ಗೋವಿಂದಾಚಾರ್ಯ ಕೂಡಾ ಪತ್ರಕರ್ತರಾಗಿದ್ದವರು. ಉದಯವಾಣಿ ಆರಂಭದ ದಿನಗಳಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದ ಅವರು, ಸಪ್ತಾಹಿಕ ಪುರವಣಿಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಏಕಪಾಠಿಯಾಗಿರುವ ಅವರಿಗೆ ಯಾವುದೇ ವಿಷಯ ಕುರಿತು ತಕ್ಷಣದಲ್ಲಿ ಗ್ರಹಿಸುವ ಶಕ್ತಿ ಇದೆ. ಶಾಲೆಯಲ್ಲಿ ಅವರು ಕಲಿತದ್ದು ಬಹಳ ಕಡಿಮೆ. ಆದರೆ, ಸ್ವತ: ಅಧ್ಯಯನ ನಡೆಸಿ ಪ್ರಬುದ್ಧರಾಗಿರುವುದು ಅವರ ವಿಶೇಷತೆ. ಕನ್ನಡ, ಸಂಸ್ಕೃತಗಳ ಜೊತೆಗೆ ಆಂಗ್ಲಭಾಷೆಯಲ್ಲೂ ಅವರು ಪ್ರಭುತ್ವ ಸಾಧಿಸಿದ್ದಾರೆ. ಪ್ರವಚನಕಾರರಾಗಿ, ಲೇಖಕರಾಗಿ ನಮ್ಮ ನಡುವಿರುವ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯ ಪತ್ರಿಕೋದ್ಯಮದಲ್ಲಿ ಒಂದು ದಂತಕತೆ.
1972ರ ಸುಮಾರಿಗೆ ಉದಯವಾಣಿ ಸೇರಿದ ಎ. ಈಶ್ವರಯ್ಯ, ಆಂಗ್ಲಭಾಷೆಯಲ್ಲಿ ಬಿ. ಎ. ಪದವೀಧರರು. ಉದಯವಾಣಿ ಸಾಪ್ತಾಹಿಕ ವಿಭಾಗದ ಸಂಪಾದಕತ್ವವನ್ನು ವಹಿಸಿದ ಅವರು ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಪ್ರಚಾರ ಮತ್ತು ಪ್ರಸಾರಕ್ಕೆ ಸಲ್ಲಿಸಿದ ಕೊಡುಗೆ ಮನನೀಯ. ಲಲಿತ ರಂಗಗಳ ವಿಮರ್ಶೆಗೆ ವೇದಿಕೆ ಒದಗಿಸಿಕೊಟ್ಟ ಈಶ್ವರಯ್ಯ ಮೊದಲ ಬಾರಿಗೆ ಧ್ವನಿಮುದ್ರಿಕೆಗಳ ಬಗ್ಗೆ ವಿಮರ್ಶೆ ಬರೆದವರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 1973ರಲ್ಲಿ ತುಷಾರ ಮಾಸ ಪತ್ರಿಕೆ ಸ್ಥಾಪಕ ಸಂಪಾದಕರಾಗಿ, ಕನ್ನಡ ಚಿತ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದವರು. ಫೋಕಲ್ ಫೋಟೊ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಬೆಂಗಳೂರು, ಸಾಗರ, ಮುಂಬೈ ಮೊದಲಾದೆಡೆಗಳಲ್ಲಿ 50ಕ್ಕೂ ಹೆಚ್ಚು ಛಾಯಾಗ್ರಹಣ ತರಬೇತಿ ನೀಡಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಗೌರವ ಉಪನ್ಯಾಸಕರೂ ಆಗಿದ್ದಾರೆ.
ಸಂಗೀತ ವಿಮರ್ಶಕರೂ ಆಗಿರುವ ಈಶ್ವರಯ್ಯ, ಮಂಗಳೂರಿನ ಸಂಗೀತ ಪ್ರತಿಷ್ಠಾನ ಅಧ್ಯಕ್ಷ. ಸಣ್ಣ ಕತೆಗಳು, ವಿಮರ್ಶೆ, ಲಲಿತ ಪ್ರಬಂಧ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪೊಲ್ಯ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಂಗ ವಾಚಸ್ಪತಿ ಪ್ರಶಸ್ತಿ, ಪರಶುರಾಮ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.
ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಎನ್. ಗುರುರಾಜ್, ಪತ್ರಿಕೆ ಸಂಪಾದಕರೂ ಆಗಿದ್ದರು. ಪ್ರಸ್ತುತ ಸದ್ರಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ಪತ್ರಿಕೆಯ ಪುಟ ಕಟ್ಟುವಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ತಮ ನಾಟಕಕಾರ, ದಿಗ್ದರ್ಶಕ, ಲೇಖಕರಾಗಿರುವ ಎನ್. ಗುರುರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು ಪ್ರಾಪ್ತವಾಗಿವೆ. ನಿಗರ್ವಿ, ಸ್ನೇಹಜೀವಿಯಾಗಿರುವ ಗುರುರಾಜ್ ಅನೇಕ ಮಂದಿ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ.
ಕರ್ನಾಟಕದಿಂದ ದೂರದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಬಾ. ಸಾಮಗ ಅಲ್ಲಿಯೂ ಕನ್ನಡ ಪತ್ರಿಕೋದ್ಯಮ ನಡೆಸುತ್ತಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ಸಾಮಗ, ತನ್ನ ವಿದ್ಯೆಗೆ ಸೂಕ್ತವಾದ ಉದ್ಯೋಗ ಸಿಗದಿದ್ದಾಗ ಸ್ವತಂತ್ರ ಕಾಯಕ ಕೈಗೊಳ್ಳುವ ದಿಟ್ಟತನ ಮೆರೆದವರು. ಅದಕ್ಕೆ ಅವರು ಆಯ್ದುಕೊಂಡದ್ದು ಪತ್ರಿಕೋದ್ಯಮ!
ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಸನ್ಮಾನಿಸುವುದು, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ಕನ್ನಡ ಸೇನಾನಿಗಳ ಸಂಸ್ಮರಣೆ ಇತ್ಯಾದಿಗಳನ್ನು ದೆಹಲಿಯಲ್ಲಿ ನಿರ್ವಹಿಸುವ ಅವರಿಗೆ ಸಾಕಷ್ಟು ಪ್ರಶಂಸೆಯೂ ಲಭಿಸಿದೆ. ಕಳೆದ 25 ವರ್ಷಗಳ ಹಿಂದೆ `ದೆಹಲಿ ಕನ್ನಡಿಗ' ಎಂಬ ಪತ್ರಿಕೆ ಆರಂಭಿಸಿರುವ ಸಾಮಗ, ಇಂದಿಗೂ ಅವಿಚ್ಛಿನ್ನವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. `ತುಳುವೆರ್' ತುಳು ಪತ್ರಿಕೆ ದೆಹಲಿ ಕನ್ನಡಿಗ ಪತ್ರಿಕೆಯ ಸಂಗಾತಿ.
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಶಂಕರನಾರಾಯಣ ಸಾಮಗ ಅವರ ಪುತ್ರರಾಗಿರುವ ಬಾಲಕೃಷ್ಣ ಸಾಮಗ, ತಮ್ಮ ತಂದೆಯವರ ಕುರಿತ ಪುಸ್ತಕವೊಂದನ್ನು ಪ್ರಕಟಿಸುವ ಇಚ್ಛೆ ಹೊಂದಿದ್ದಾರೆ.
(ಸಂಯುಕ್ತ ಕರ್ನಾಟಕ: ಜು. 1, 2008)
ಜೂನ್ 6, 2010
ಹಾಸ್ಯಪ್ರಿಯರಿಗೆ ಮುದನೀಡುವ `ಸುಹಾಸ': ಕು. ಗೋ.
ಕನ್ನಡಿಗರಿಗೆ ಬಿಡಿ, ಉಡುಪಿಯವರಿಗೇ ಹೆರ್ಗ ಗೋಪಾಲ ಭಟ್ಟರೆಂದರೆ ಯಾರಿಗೂ ತಿಳಿಯುವುದಿಲ್ಲ. ಆದರೆ, ಕು. ಗೋ. ಎಲ್ಲರಿಗೂ ಸುಪರಿಚಿತ. ಎಲ್ಲೇ ಸಾಹಿತ್ಯಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಕು. ಗೋ. ಹಾಜರ್. ಮಾತ್ರವಲ್ಲದೇ ಆ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ತನ್ನದೇ ಸ್ವಂತ ಕಾರ್ಯಕ್ರಮ ಎಂಬಷ್ಟು ಮಟ್ಟಿಗೆ ತಾದಾತ್ಮ್ಯತೆಯನ್ನು ಪಡೆದುಕೊಳ್ಳುವವರು. ಕಪ್ಪು ಫ್ರೇಮಿನ ಕನ್ನಡಕಧಾರಿ, ಬಿಳುಪಿಗೆ ಮಾಗಿದ ಕೂದಲಿನ ತೆಳ್ಳನೆಯ ಶರೀರದ ಎಚ್. ಗೋಪಾಲ ಭಟ್ಟ ಹೆಚ್ಚಾಗಿ ಕಪ್ಪು ಪ್ಯಾಂಟ್, ಚೆಕ್ಸ್ ಅಂಗಿ ಧರಿಸುವುದೇ ಹೆಚ್ಚು. ಆದರೆ, ಅವರ ಬಗಲಲ್ಲಿ ಜೋಳಿಗೆಯೊಂದು ತಪ್ಪಿದ್ದಲ್ಲ. ಅದರಲ್ಲಿ ಪುಸ್ತಕಗಳ ರಾಶಿಯೇ ಇರುತ್ತದೆ. ಯಾರಾದರೂ ಸಿಕ್ಕಿದರೆ ಜೋಳಿಗೆಯೊಳಗಿಂದ ಪುಸ್ತಕವೊಂದು ಹೊರಬಂದು ತನ್ನ ಎದುರಿಗಿರುವ ವ್ಯಕ್ತಿಯ ಕೈಗೆ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಹಣ ಕೊಟ್ಟರೂ ಸೈ, ಇಲ್ಲವಾದರೂ ಜೈ. ಪುಸ್ತಕ ಹಂಚುವುದು ಅವರಿಗೆ ಒಂದು ಹುಚ್ಚು! ಇದು ಕು. ಗೋ. ಅವರ ಪಾರ್ಶ್ವ ಪರಿಚಯವಷ್ಟೇ!
ಕು. ಗೋ. ಜೊತೆಯಲ್ಲಿದ್ದರೆ ನಗುವಿಗೆ ಕೊರತೆ ಇಲ್ಲ. ಖುಷಿಯ ಗಳಿಗೆಗಳಿಗೆ ಮೋಸವಿಲ್ಲ. ಅವರು ನಗುತ್ತಾ, ನಗಿಸುತ್ತಾ ನ್ಮನ್ನು ಆಕ್ರಮಿಸಿಬಿಡುತ್ತಾರೆ. ಮಗುವಿನ ಮನಸ್ಸಿನ ಕು. ಗೋ. ಅವರಿಗೆ ನಗಿಸುವುದೇ ಹವ್ಯಾಸ. ಅವರು ತನ್ನ ಸ್ವಂತ ಬದುಕಿನಲ್ಲಿ ಅದೆಷ್ಟೋ ನೋವನ್ನುಂಡರೂ ಇತರರನ್ನು ನಗಿಸುತ್ತಲೇ ಇರುತ್ತಾರೆ, ತಮ್ಮ ಅಳು ನುಂಗಿ. ಸ್ವತ: ಸಾಹಿತಿ, ಲಘು ಹಾಸ್ಯ, ಪ್ರಬಂಧಗಳ ಬರೆಹಗಾರ. ಅವರೋರ್ವ ಸಾಹಿತ್ಯ ಪರಿಚಾರಕ.
ಎಲ್ಐಸಿಯಲ್ಲಿ ಉದ್ಯೋಗಿಯಾಗಿದ್ದ ಅವರು, ಸುಮಾರು 38 ವರ್ಷಗಳ ಸುಧೀರ್ಘ ಸೇವೆಯ ಬಳಿಕ ಸ್ವಯಂ ನಿವೃತ್ತಿ ಪಡೆದವರು. ಆ ಬಳಿಕ ಅವರ ಜೀವನವೆಲ್ಲಾ ಬರಿಯ ಸಾಹಿತ್ಯ ಮತ್ತು ಸಾಹಿತ್ಯ ಪರಿಚಾರಿಕೆಯಲ್ಲಿ. ಉಡುಪಿಯಲ್ಲಿ `ಸುಹಾಸ' ಎಂಬ ಹಾಸ್ಯಪ್ರಿಯರ ಸಂಘಟನೆಯೊಂದನ್ನು ಕಟ್ಟಿ ಅವರು ಅದರ ಕಾರ್ಯದರ್ಶಿಯಾಗಿದ್ದಾರೆ. ನಡುಮನೆ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ನವಿರು ಹಾಸ್ಯದ ಕು. ಗೋ. ಅವರ ಲೇಖನಗಳು ಅಪ್ಪಟ ಹರಟೆಗಾರನ ಜೊತೆ ನಡೆಸುವ ಸಂಭಾಷಣೆಯಂತಿರುತ್ತವೆ.
ಅವರ `ಲೊಳಲೊಳಾಯಿ' ಕೃತಿಗೆ 2002ರಲ್ಲಿ ಗೋರೂರು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೇರಳ ಸರಕಾರದ 8ನೇ ತರಗತಿಗೆ ಅದು ಪಠ್ಯವಾಗಿದೆ. 2003ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಹಾಸ್ಯದ ಚಿಲುಮೆಯಂತಿರುವ ಕು. ಗೋ. ನೂರ್ಕಾಲ ಬಾಳಲಿ. ಅವರ ನಗುವಿನ ಒರತೆ ಎಂದಿಗೂ ಬತ್ತದಿರಲಿ.
(ಸಂಯುಕ್ತ ಕರ್ನಾಟಕ: ಜೂ. 2, 2008)
ಕು. ಗೋ. ಜೊತೆಯಲ್ಲಿದ್ದರೆ ನಗುವಿಗೆ ಕೊರತೆ ಇಲ್ಲ. ಖುಷಿಯ ಗಳಿಗೆಗಳಿಗೆ ಮೋಸವಿಲ್ಲ. ಅವರು ನಗುತ್ತಾ, ನಗಿಸುತ್ತಾ ನ್ಮನ್ನು ಆಕ್ರಮಿಸಿಬಿಡುತ್ತಾರೆ. ಮಗುವಿನ ಮನಸ್ಸಿನ ಕು. ಗೋ. ಅವರಿಗೆ ನಗಿಸುವುದೇ ಹವ್ಯಾಸ. ಅವರು ತನ್ನ ಸ್ವಂತ ಬದುಕಿನಲ್ಲಿ ಅದೆಷ್ಟೋ ನೋವನ್ನುಂಡರೂ ಇತರರನ್ನು ನಗಿಸುತ್ತಲೇ ಇರುತ್ತಾರೆ, ತಮ್ಮ ಅಳು ನುಂಗಿ. ಸ್ವತ: ಸಾಹಿತಿ, ಲಘು ಹಾಸ್ಯ, ಪ್ರಬಂಧಗಳ ಬರೆಹಗಾರ. ಅವರೋರ್ವ ಸಾಹಿತ್ಯ ಪರಿಚಾರಕ.
ಎಲ್ಐಸಿಯಲ್ಲಿ ಉದ್ಯೋಗಿಯಾಗಿದ್ದ ಅವರು, ಸುಮಾರು 38 ವರ್ಷಗಳ ಸುಧೀರ್ಘ ಸೇವೆಯ ಬಳಿಕ ಸ್ವಯಂ ನಿವೃತ್ತಿ ಪಡೆದವರು. ಆ ಬಳಿಕ ಅವರ ಜೀವನವೆಲ್ಲಾ ಬರಿಯ ಸಾಹಿತ್ಯ ಮತ್ತು ಸಾಹಿತ್ಯ ಪರಿಚಾರಿಕೆಯಲ್ಲಿ. ಉಡುಪಿಯಲ್ಲಿ `ಸುಹಾಸ' ಎಂಬ ಹಾಸ್ಯಪ್ರಿಯರ ಸಂಘಟನೆಯೊಂದನ್ನು ಕಟ್ಟಿ ಅವರು ಅದರ ಕಾರ್ಯದರ್ಶಿಯಾಗಿದ್ದಾರೆ. ನಡುಮನೆ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ನವಿರು ಹಾಸ್ಯದ ಕು. ಗೋ. ಅವರ ಲೇಖನಗಳು ಅಪ್ಪಟ ಹರಟೆಗಾರನ ಜೊತೆ ನಡೆಸುವ ಸಂಭಾಷಣೆಯಂತಿರುತ್ತವೆ.
ಅವರ `ಲೊಳಲೊಳಾಯಿ' ಕೃತಿಗೆ 2002ರಲ್ಲಿ ಗೋರೂರು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೇರಳ ಸರಕಾರದ 8ನೇ ತರಗತಿಗೆ ಅದು ಪಠ್ಯವಾಗಿದೆ. 2003ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಹಾಸ್ಯದ ಚಿಲುಮೆಯಂತಿರುವ ಕು. ಗೋ. ನೂರ್ಕಾಲ ಬಾಳಲಿ. ಅವರ ನಗುವಿನ ಒರತೆ ಎಂದಿಗೂ ಬತ್ತದಿರಲಿ.
(ಸಂಯುಕ್ತ ಕರ್ನಾಟಕ: ಜೂ. 2, 2008)
ಮೇ 29, 2010
`ಸ್ಟೇಟ್ಹೋಂ' ಯುವತಿಯರ ಕೈಹಿಡಿದ ಬ್ರಾಹ್ಮಣ ಯುವಕರು!
ಇಲ್ಲಿ ಬಾಯಾರಿ ಬಂದವರಿಗೆ ಪಾನಕದ ವ್ಯವಸ್ಥೆಯಿತ್ತು. ನಗುಮೊಗದ ಸ್ವಾಗತವಿತ್ತು. ವಾದ್ಯಘೋಷ ಮೊಳಗುತ್ತಿತ್ತು. ಮಂತ್ರ ಪಠಣವೂ ಕೇಳಿಬರುತ್ತಿತ್ತು.
ಉಡುಪಿ ಸ್ಟೇಟ್ಹೋಂ (ಸ್ತ್ರೀನಿಕೇತನ) ಮದುವೆ ಮಂಟಪವಾಗಿತ್ತು. ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ನಿರ್ಗತಿಕ ಹೆಣ್ಣುಮಕ್ಕಳಿಗೆ ಆಸರೆ ನೀಡುವ ಸ್ತ್ರೀನಿಕೇತನ ಕಲ್ಯಾಣ ಮಂಟಪವಾಗಿತ್ತು! ಎಲ್ಲಿಂದಲೋ ಬಂದು ಇಲ್ಲಿನವರೇ ಆದ ನಾಲ್ವರು ತರುಣಿಯರಿಗೆ ಕಂಕಣಭಾಗ್ಯ ಒಲಿದುಬಂದಿತ್ತು. ಅವರ ಪಾಣಿಗ್ರಹಣಕ್ಕಾಗಿ ನಾಲ್ವರು ಯುವಕರು, ಅದರಲ್ಲೂ ಸುಸ್ಥಿತಿಯ ಬ್ರಾಹ್ಮಣ ತರುಣರು ಅಭಿಜಿನ್ ಸುಮೂರ್ತಕ್ಕಾಗಿ ಇದಿರುನೋಡುತ್ತಿದ್ದರು!
ಇದು ಉಡುಪಿ ನಿಟ್ಟೂರು ಬಳಿಯ ಸ್ಟೇಟ್ಹೋಂನಲ್ಲಿ ನಡೆದ ಅಪೂರ್ವ ವಿವಾಹ ಮಹೋತ್ಸವದ ಸಂಭ್ರಮದ ನೋಟ.
ವಿವಾಹ ಸ್ವರ್ಗದಲ್ಲಿ ನಡೆಯುತ್ತದೆ ಎಂಬ ಮಾತಿದೆ. ಈಚಿನ ದಿನಗಳಲ್ಲಿ ಮಹಿಳೆ ಹಾಗೂ ಪುರುಷರ ಜನನ ಪ್ರಮಾಣದಲ್ಲಿನ ಅಂತರ ಬಹಳಷ್ಟಿದ್ದು, ವಧುಗಳ ಕೊರತೆ ತರುಣರನ್ನು ಕಾಡುತ್ತಿದೆ. ಈ ಸಮಸ್ಯೆ ಎಲ್ಲಾ ವರ್ಗಗಳವರಲ್ಲಿದ್ದರೂ ಬ್ರಾಹ್ಮಣರಲ್ಲಿ ಅದು ಹೆಚ್ಚಿದೆ. ಅದಕ್ಕೆ ಕಾರಣ 1970ರ ದಶಕದಲ್ಲಿ ಆರಂಭವಾದ ಭ್ರೂಣಪತ್ತೆಯ ಅಲ್ಟ್ರಾಸ್ಕ್ಯಾನಿಂಗ್ ಎಂಬ ಅಂದಿನ ಅನಿಷ್ಟ ಪದ್ಧತಿಯನ್ನು ಇತರರಿಗಿಂತ ಬ್ರಾಹ್ಮಣರು ಬೇಗನೇ ನೆಚ್ಚಿಕೊಂಡ ಪರಿಣಾಮವೋ, ಅಥವಾ ಕುಟುಂಬ ಯೋಜನೆ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡ ಫಲವೋ ಅಂತೂ ಈಗ ಮದುವೆಗೆ ವಯಸ್ಸಾದ, ವಯಸ್ಸು ಮೀರಿದ ಯುವಕರಿಗೆ ಯುವತಿಯರಿಲ್ಲ. ಜೊತೆಗೆ ಕೃಷಿಕರು, ಪೌರೋಹಿತ್ಯ ಮಾಡುವವರು, ಹಳ್ಳಿತೋಟದ ಮನೆಯವರು, ಹೋಟೆಲ್ನವರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಷರತ್ತು ವಿಧಿಸುತ್ತಿರುವ ಹೆಣ್ಣು ಹೆತ್ತವರ ಪರಿ ವಿವಾಹಾಪೇಕ್ಷಿ ತರುಣರಿಗೆ ಕಂಠಕಪ್ರಾಯವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ವಧುಗಳ ಕೊರತೆಯಿಂದ ತತ್ತರಿಸಿಹೋಗಿರುವ, ಸಾಕಷ್ಟು ಸ್ಥಿತಿವಂತರಾಗಿರುವ ನಾಲ್ವರು ಬ್ರಾಹ್ಮಣ ವರರು ವಧೂನ್ವೇಷಣೆಗಾಗಿ ಇಲ್ಲಿನ ಸ್ಟೇಟ್ಹೋಂಗೆ ಆಗಮಿಸಿ, ತಮ್ಮ ಮನದನ್ನೆಯರನ್ನು ಆರಿಸಿಕೊಂಡರು. ಹಾಗಂತ ಸ್ಟೇಟ್ಹೋಂನ ತರುಣಿಯರು ಅಷ್ಟೇನೂ ಸುಂದರವಾಗಿಲ್ಲ, ವಿದ್ಯಾವಂತರೂ ಅಲ್ಲ. ಅಂಥವರನ್ನು ಕೈಹಿಡಿಯಲು ಮುಂದೆಬಂದ ಈ ತರುಣರು ಸರ್ವರ ದೃಷ್ಟಿಯಲ್ಲಿ ಎತ್ತರಕ್ಕೇರಿದ್ದಾರೆ!
ಉಡುಪಿ ಮಟ್ಟು ರಾಮಕೃಷ್ಣ ರಾವ್ ಎಂಬವರ ಪುತ್ರ ರಾಜೇಶ ರಾವ್, ವೃತ್ತಿಯಲ್ಲಿ ಖಾಸಗಿ ಬಸ್ ನಿರ್ವಾಹಕ. ಆತ ಕರ್ಕು ಎಂಬವರ ಪುತ್ರಿ ಚೋಂದು ಯಾನೆ ಚಂದನಾ ಎಂಬಾಕೆಯ ಕೈಹಿಡಿದಿದ್ದರೆ, ದ. ಕ. ಜಿಲ್ಲೆಯ ಮೂಲ್ಕಿ ದಿ. ರಾಘವ ರಾವ್ ಮಾಂಟ್ರಡಿ ಎಂಬವರ ಪುತ್ರ ಶಂಕರನಾರಾಯಣ ಕೂಸಪ್ಪ ಆಚಾರಿ ಪುತ್ರಿ ಶಶಿಕಲಾಳ ಪಾಣಿಗ್ರಹಣ ಮಾಡಿದ್ದಾರೆ. ಅವರು ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಪರಿಚಾರಕ. ಉ. ಕ. ಜಿಲ್ಲೆಯ ನಡಿಮನೆ ವೆಂಕಟರಮಣ ಹೆಗಡೆ ಅವರ ಪುತ್ರ ವಿನಾಯಕ ವೆಂ. ಹೆಗಡೆ ದಿ. ಬಂಡೆಪ್ಪನವರ ಪುತ್ರಿ ಕಾವ್ಯ ಅವರನ್ನು ಹಾಗೂ ಹಾಸನ ಶೆಟ್ಟಿಹಳ್ಳಿ ಹಿರಗನಹಳ್ಳಿ ಎಚ್. ಎಲ್. ಅನಂತಮೂತರ್ಿ ಪುತ್ರ ಶ್ರೀನಿವಾಸಮೂತರ್ಿ ದಿ. ಬೊಳ್ಳಿ ಅವರ ಪುತ್ರಿ ಕಾವೇರಿಯನ್ನು ಮದುವೆಯಾಗಿದ್ದಾರೆ. ಅವರೀರ್ವರೂ ವೃತ್ತಿಯಲ್ಲಿ ಕೃಷಿಕರು.
ಜಿಲ್ಲಾಧಿಕಾರಿಯಿಂದ ಧಾರೆ: ಮಧ್ಯಾಹ್ನ 12.10ರ ಅಭಿಜಿನ್ ಮುಹೂರ್ತದಲ್ಲಿ ವೈದಿಕರ ಮಂತ್ರಘೋಷ ನಡೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್ ಧಾರೆ ಎರೆದು ವಿವಾಹ ನೆರವೇರಿಸಿದರು. ಇಲಾಖಾಧಿಕಾರಿಗಳು, ವರರ ಕಡೆಯಿಂದ ಆಗಮಿಸಿದ ನೂರಾರು ಬಂಧುಮಿತ್ರರು, ಸ್ಟೇಟ್ಹೋಂ ನಿವಾಸಿಗಳು ಈ ವಿವಾಹಮಹೋತ್ಸವಕ್ಕೆ ಸಾಕ್ಷಿಗಳಾದರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದವರು ಸುಗ್ರಾಸ ಭೋಜನದ ವ್ಯವಸ್ಥೆ ಮಾಡಿದ್ದರೆ, ಕೃಷ್ಣಮಠದವರು ಪೆಂಡಾಲ್ ಹಾಕಿಸಿದ್ದರು.
ಅನಾಥಾಲಯಗಳಿಗೆ ಹೋಗಿ ಮದುವೆಯಾಗುವುದು, ಅಂತರ್ಜಾತೀಯ ವಿವಾಹ ಇತ್ಯಾದಿಗಳೇ ದೊಡ್ಡ ಸುದ್ದಿಯಾಗುತ್ತಿದ್ದ ದಿನಗಳು ಸರಿದು ಇದೀಗ ಸ್ಟೇಟ್ಹೋಂಗಳಿಗೆ ವಧುಗಳಿಗೆ ತಡಕಾಡುವ ಕಾಲ ಬಂದಿದೆ. ವಧುಗಳನ್ನು ವಿಚಾರಿಸಿ ದಿನವಹಿ ಸರ್ವೇ ಸಾಧಾರಣ 5- 6 ದೂರವಾಣಿ ಕರೆಗಳು ಸ್ಟೇಟ್ಹೋಂಗೆ ಬರುತ್ತಿವೆ. ಅವುಗಳಲ್ಲಿ ಬ್ರಾಹ್ಮಣ ಯುವಕರ ಕರೆಗಳೂ ಇರುತ್ತವೆ. ಹುಡುಗಿಯರನ್ನು ಕೇಳಿಕೊಂಡುಬಂದವರಿಗೆ ತಮ್ಮ ಮೇಲಧಿಕಾರಿಗಳ ಸಮ್ಮತಿ ಪಡೆದು, ರಕ್ತ ಪರೀಕ್ಷೆ ಇತ್ಯಾದಿಗಳನ್ನು ನೆರವೇರಿಸಿದ ಬಳಿಕವಷ್ಟೇ ವಿವಾಹ ನೋಂದಣಿ ಮಾಡಿಸಿ ಅಧಿಕೃತವಾಗಿ ವರನಿಗೊಪ್ಪಿಸಲಾಗುತ್ತದೆ. ಈ ರೀತಿ ಮದುವೆಯಾಗುವವರಿಗೆ ತಲಾ 20 ಸಾವಿರ ನಗದು, ವಧುವಿಗೆ ತಾಳಿ, ಸೀರೆ, ವರನಿಗೆ ಪ್ಯಾಂಟ್-ಶರ್ಟ್ ನೀಡಲಾಗುವುದು. ಸ್ಟೇಟ್ಹೋಂನಲ್ಲೇ ಮದುವೆಯಾಗುವುದಿದ್ದರೆ ದಾನಿಗಳ ಸಹಕಾರದಿಂದ ಯಥೋಚಿತ ವಿವಾಹ ಸಮಾರಂಭ ಸಂಘಟಿಸಲಾಗುವುದು ಎಂದು ಸ್ಟೇಟ್ಹೋಂನ ಸೂಪರಿಂಟೆಂಡೆಂಟ್ ಕುಸುಮಾ ಹೇಳಿದರು.
(ಸಂಯುಕ್ತ ಕರ್ನಾಟಕ, ಮಾ. 31, 2008)
ಉಡುಪಿ ಸ್ಟೇಟ್ಹೋಂ (ಸ್ತ್ರೀನಿಕೇತನ) ಮದುವೆ ಮಂಟಪವಾಗಿತ್ತು. ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ನಿರ್ಗತಿಕ ಹೆಣ್ಣುಮಕ್ಕಳಿಗೆ ಆಸರೆ ನೀಡುವ ಸ್ತ್ರೀನಿಕೇತನ ಕಲ್ಯಾಣ ಮಂಟಪವಾಗಿತ್ತು! ಎಲ್ಲಿಂದಲೋ ಬಂದು ಇಲ್ಲಿನವರೇ ಆದ ನಾಲ್ವರು ತರುಣಿಯರಿಗೆ ಕಂಕಣಭಾಗ್ಯ ಒಲಿದುಬಂದಿತ್ತು. ಅವರ ಪಾಣಿಗ್ರಹಣಕ್ಕಾಗಿ ನಾಲ್ವರು ಯುವಕರು, ಅದರಲ್ಲೂ ಸುಸ್ಥಿತಿಯ ಬ್ರಾಹ್ಮಣ ತರುಣರು ಅಭಿಜಿನ್ ಸುಮೂರ್ತಕ್ಕಾಗಿ ಇದಿರುನೋಡುತ್ತಿದ್ದರು!
ಇದು ಉಡುಪಿ ನಿಟ್ಟೂರು ಬಳಿಯ ಸ್ಟೇಟ್ಹೋಂನಲ್ಲಿ ನಡೆದ ಅಪೂರ್ವ ವಿವಾಹ ಮಹೋತ್ಸವದ ಸಂಭ್ರಮದ ನೋಟ.
ವಿವಾಹ ಸ್ವರ್ಗದಲ್ಲಿ ನಡೆಯುತ್ತದೆ ಎಂಬ ಮಾತಿದೆ. ಈಚಿನ ದಿನಗಳಲ್ಲಿ ಮಹಿಳೆ ಹಾಗೂ ಪುರುಷರ ಜನನ ಪ್ರಮಾಣದಲ್ಲಿನ ಅಂತರ ಬಹಳಷ್ಟಿದ್ದು, ವಧುಗಳ ಕೊರತೆ ತರುಣರನ್ನು ಕಾಡುತ್ತಿದೆ. ಈ ಸಮಸ್ಯೆ ಎಲ್ಲಾ ವರ್ಗಗಳವರಲ್ಲಿದ್ದರೂ ಬ್ರಾಹ್ಮಣರಲ್ಲಿ ಅದು ಹೆಚ್ಚಿದೆ. ಅದಕ್ಕೆ ಕಾರಣ 1970ರ ದಶಕದಲ್ಲಿ ಆರಂಭವಾದ ಭ್ರೂಣಪತ್ತೆಯ ಅಲ್ಟ್ರಾಸ್ಕ್ಯಾನಿಂಗ್ ಎಂಬ ಅಂದಿನ ಅನಿಷ್ಟ ಪದ್ಧತಿಯನ್ನು ಇತರರಿಗಿಂತ ಬ್ರಾಹ್ಮಣರು ಬೇಗನೇ ನೆಚ್ಚಿಕೊಂಡ ಪರಿಣಾಮವೋ, ಅಥವಾ ಕುಟುಂಬ ಯೋಜನೆ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡ ಫಲವೋ ಅಂತೂ ಈಗ ಮದುವೆಗೆ ವಯಸ್ಸಾದ, ವಯಸ್ಸು ಮೀರಿದ ಯುವಕರಿಗೆ ಯುವತಿಯರಿಲ್ಲ. ಜೊತೆಗೆ ಕೃಷಿಕರು, ಪೌರೋಹಿತ್ಯ ಮಾಡುವವರು, ಹಳ್ಳಿತೋಟದ ಮನೆಯವರು, ಹೋಟೆಲ್ನವರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಷರತ್ತು ವಿಧಿಸುತ್ತಿರುವ ಹೆಣ್ಣು ಹೆತ್ತವರ ಪರಿ ವಿವಾಹಾಪೇಕ್ಷಿ ತರುಣರಿಗೆ ಕಂಠಕಪ್ರಾಯವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ವಧುಗಳ ಕೊರತೆಯಿಂದ ತತ್ತರಿಸಿಹೋಗಿರುವ, ಸಾಕಷ್ಟು ಸ್ಥಿತಿವಂತರಾಗಿರುವ ನಾಲ್ವರು ಬ್ರಾಹ್ಮಣ ವರರು ವಧೂನ್ವೇಷಣೆಗಾಗಿ ಇಲ್ಲಿನ ಸ್ಟೇಟ್ಹೋಂಗೆ ಆಗಮಿಸಿ, ತಮ್ಮ ಮನದನ್ನೆಯರನ್ನು ಆರಿಸಿಕೊಂಡರು. ಹಾಗಂತ ಸ್ಟೇಟ್ಹೋಂನ ತರುಣಿಯರು ಅಷ್ಟೇನೂ ಸುಂದರವಾಗಿಲ್ಲ, ವಿದ್ಯಾವಂತರೂ ಅಲ್ಲ. ಅಂಥವರನ್ನು ಕೈಹಿಡಿಯಲು ಮುಂದೆಬಂದ ಈ ತರುಣರು ಸರ್ವರ ದೃಷ್ಟಿಯಲ್ಲಿ ಎತ್ತರಕ್ಕೇರಿದ್ದಾರೆ!
ಉಡುಪಿ ಮಟ್ಟು ರಾಮಕೃಷ್ಣ ರಾವ್ ಎಂಬವರ ಪುತ್ರ ರಾಜೇಶ ರಾವ್, ವೃತ್ತಿಯಲ್ಲಿ ಖಾಸಗಿ ಬಸ್ ನಿರ್ವಾಹಕ. ಆತ ಕರ್ಕು ಎಂಬವರ ಪುತ್ರಿ ಚೋಂದು ಯಾನೆ ಚಂದನಾ ಎಂಬಾಕೆಯ ಕೈಹಿಡಿದಿದ್ದರೆ, ದ. ಕ. ಜಿಲ್ಲೆಯ ಮೂಲ್ಕಿ ದಿ. ರಾಘವ ರಾವ್ ಮಾಂಟ್ರಡಿ ಎಂಬವರ ಪುತ್ರ ಶಂಕರನಾರಾಯಣ ಕೂಸಪ್ಪ ಆಚಾರಿ ಪುತ್ರಿ ಶಶಿಕಲಾಳ ಪಾಣಿಗ್ರಹಣ ಮಾಡಿದ್ದಾರೆ. ಅವರು ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಪರಿಚಾರಕ. ಉ. ಕ. ಜಿಲ್ಲೆಯ ನಡಿಮನೆ ವೆಂಕಟರಮಣ ಹೆಗಡೆ ಅವರ ಪುತ್ರ ವಿನಾಯಕ ವೆಂ. ಹೆಗಡೆ ದಿ. ಬಂಡೆಪ್ಪನವರ ಪುತ್ರಿ ಕಾವ್ಯ ಅವರನ್ನು ಹಾಗೂ ಹಾಸನ ಶೆಟ್ಟಿಹಳ್ಳಿ ಹಿರಗನಹಳ್ಳಿ ಎಚ್. ಎಲ್. ಅನಂತಮೂತರ್ಿ ಪುತ್ರ ಶ್ರೀನಿವಾಸಮೂತರ್ಿ ದಿ. ಬೊಳ್ಳಿ ಅವರ ಪುತ್ರಿ ಕಾವೇರಿಯನ್ನು ಮದುವೆಯಾಗಿದ್ದಾರೆ. ಅವರೀರ್ವರೂ ವೃತ್ತಿಯಲ್ಲಿ ಕೃಷಿಕರು.
ಜಿಲ್ಲಾಧಿಕಾರಿಯಿಂದ ಧಾರೆ: ಮಧ್ಯಾಹ್ನ 12.10ರ ಅಭಿಜಿನ್ ಮುಹೂರ್ತದಲ್ಲಿ ವೈದಿಕರ ಮಂತ್ರಘೋಷ ನಡೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್ ಧಾರೆ ಎರೆದು ವಿವಾಹ ನೆರವೇರಿಸಿದರು. ಇಲಾಖಾಧಿಕಾರಿಗಳು, ವರರ ಕಡೆಯಿಂದ ಆಗಮಿಸಿದ ನೂರಾರು ಬಂಧುಮಿತ್ರರು, ಸ್ಟೇಟ್ಹೋಂ ನಿವಾಸಿಗಳು ಈ ವಿವಾಹಮಹೋತ್ಸವಕ್ಕೆ ಸಾಕ್ಷಿಗಳಾದರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದವರು ಸುಗ್ರಾಸ ಭೋಜನದ ವ್ಯವಸ್ಥೆ ಮಾಡಿದ್ದರೆ, ಕೃಷ್ಣಮಠದವರು ಪೆಂಡಾಲ್ ಹಾಕಿಸಿದ್ದರು.
ಅನಾಥಾಲಯಗಳಿಗೆ ಹೋಗಿ ಮದುವೆಯಾಗುವುದು, ಅಂತರ್ಜಾತೀಯ ವಿವಾಹ ಇತ್ಯಾದಿಗಳೇ ದೊಡ್ಡ ಸುದ್ದಿಯಾಗುತ್ತಿದ್ದ ದಿನಗಳು ಸರಿದು ಇದೀಗ ಸ್ಟೇಟ್ಹೋಂಗಳಿಗೆ ವಧುಗಳಿಗೆ ತಡಕಾಡುವ ಕಾಲ ಬಂದಿದೆ. ವಧುಗಳನ್ನು ವಿಚಾರಿಸಿ ದಿನವಹಿ ಸರ್ವೇ ಸಾಧಾರಣ 5- 6 ದೂರವಾಣಿ ಕರೆಗಳು ಸ್ಟೇಟ್ಹೋಂಗೆ ಬರುತ್ತಿವೆ. ಅವುಗಳಲ್ಲಿ ಬ್ರಾಹ್ಮಣ ಯುವಕರ ಕರೆಗಳೂ ಇರುತ್ತವೆ. ಹುಡುಗಿಯರನ್ನು ಕೇಳಿಕೊಂಡುಬಂದವರಿಗೆ ತಮ್ಮ ಮೇಲಧಿಕಾರಿಗಳ ಸಮ್ಮತಿ ಪಡೆದು, ರಕ್ತ ಪರೀಕ್ಷೆ ಇತ್ಯಾದಿಗಳನ್ನು ನೆರವೇರಿಸಿದ ಬಳಿಕವಷ್ಟೇ ವಿವಾಹ ನೋಂದಣಿ ಮಾಡಿಸಿ ಅಧಿಕೃತವಾಗಿ ವರನಿಗೊಪ್ಪಿಸಲಾಗುತ್ತದೆ. ಈ ರೀತಿ ಮದುವೆಯಾಗುವವರಿಗೆ ತಲಾ 20 ಸಾವಿರ ನಗದು, ವಧುವಿಗೆ ತಾಳಿ, ಸೀರೆ, ವರನಿಗೆ ಪ್ಯಾಂಟ್-ಶರ್ಟ್ ನೀಡಲಾಗುವುದು. ಸ್ಟೇಟ್ಹೋಂನಲ್ಲೇ ಮದುವೆಯಾಗುವುದಿದ್ದರೆ ದಾನಿಗಳ ಸಹಕಾರದಿಂದ ಯಥೋಚಿತ ವಿವಾಹ ಸಮಾರಂಭ ಸಂಘಟಿಸಲಾಗುವುದು ಎಂದು ಸ್ಟೇಟ್ಹೋಂನ ಸೂಪರಿಂಟೆಂಡೆಂಟ್ ಕುಸುಮಾ ಹೇಳಿದರು.
(ಸಂಯುಕ್ತ ಕರ್ನಾಟಕ, ಮಾ. 31, 2008)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)