ಜುಲೈ 21, 2010

ಉಡುಪಿ ಯುವಕನ ಕೈಹಿಡಿದ ಜರ್ಮನಿ ಗೃಹಿಣಿ!

ಪ್ರೀತಿ- ಪ್ರೇಮಕ್ಕೆ ಜಾತಿ, ಅಂತಸ್ತು, ದೇಶಕಾಲ ಯಾವುದೂ ಅಡ್ಡಿಯಾಗದು ಎಂಬ ಮಾತಿನೊಂದಿಗೆ ಹರೆಯವೂ ತೊಡಕಾಗದು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅದಕ್ಕೆ ಉಡುಪಿಯಲ್ಲಿ ನಡೆದ ಮದುವೆ ಪೂರಕವಾಗಿದೆ. ಜರ್ಮನಿಯ ಗೃಹಿಣಿಯೋರ್ವಳು ಉಡುಪಿ ಯುವಕನನ್ನು ಮೋಹಿಸಿ ಮದುವೆಯಾಗಿದ್ದಾಳೆ. 52ರ ಹರೆಯದ ಗ್ಯಾಬ್ರಿಯಲ್ ಮಾರ್ತಾ ಎಂಬಾಕೆ ಉಡುಪಿ ಬನ್ನಂಜೆ ನಿವಾಸಿ ಪ್ರಾಣೇಶ ಶೇಟ್ ಎಂಬ 38ರ ಯುವಕನ ಕೈಹಿಡಿದಿದ್ದಾಳೆ! ಹಿಂದೂ ಸಂಪ್ರದಾಯ ಪ್ರಕಾರ ಉಡುಪಿ ರಥಬೀದಿಯ ರಾಘವೇಂದ್ರ ಸ್ವಾಮಿ ಮಠದ ಮಂತ್ರಾಲಯ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆದಿದ್ದು, ವಧೂ- ವರರ ಕಡೆಯವರೀರ್ವರೂ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಜರ್ಮನಿಯಲ್ಲಿ ರೆಸಾರ್ಟ್ವೊಂದರ ಒಡತಿಯಾಗಿರುವ ಗ್ಯಾಬ್ರಿಯಲ್, 2005ರ ಡಿಸೆಂಬರ್ನಲ್ಲಿ ಉಡುಪಿಗಾಗಮಿಸಿದ್ದಳು. ಉಡುಪಿಯಲ್ಲಿ ಪ್ರವಾಸಿಗರ ಮಾಹಿತಿದಾರ (ಟೂರಿಸ್ಟ್ ಗೈಡ್) ಆಗಿರುವ ಪ್ರಾಣೇಶ ಶೇಟ್ನ ಪರಿಚಯವಾಗಿ, ಕ್ರಮೇಣ ಪರಿಚಯ ಪ್ರೇಮಕ್ಕೆ ತಿರುಗಿತು. ಬಳಿಕ 5- 6 ಬಾರಿ ಉಡುಪಿಗಾಗಮಿಸಿದ್ದ ಆಕೆ, ಪ್ರಾಣೇಶನ ಮನೆಗೂ ಬಂದಿದ್ದಳು. ಅವರಿಬ್ಬರೂ ರಿಜಿಸ್ಟರ್ಡ್ ಮದುವೆ ಆಗಿದ್ದರು.
ಆದರೂ, ಹಿಂದೂ ಸಂಪ್ರದಾಯ ಪ್ರಕಾರ ಮದುವೆಯಾಗಬೇಕೆಂಬ ಉತ್ಕಟ ಇಚ್ಛೆ ಈರ್ವರಿಗೂ ಇದ್ದ ಕಾರಣ ರಾಘವೇಂದ್ರ ಮಠದಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಶ್ರೀನಿವಾಸ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮದುವೆ ನಡೆಸಲಾಯಿತು. ಮದುವೆಗೆ ವಧೂ- ವರರ ಕಡೆಯಿಂದ ತಲಾ ಸುಮಾರು 20- 25 ಮಂದಿ ಆಗಮಿಸಿದ್ದರು. ವರನ ಕಡೆಯವರೇ ವಧುವನ್ನು ಧಾರೆ ಎರೆದುಕೊಡುವ ಸಂಪ್ರದಾಯ ನಡೆಸಿದರು. ಗ್ಯಾಬ್ರಿಯಲ್ ಮಾರ್ತಾ- ಪ್ರಾಣೇಶ ಸತಿ- ಪತಿಯರಾಗಿ ಸಪ್ತಪದಿ ತುಳಿದರು. ವರ ಪ್ರಾಣೇಶನ ತಾಯಿ, ತಂಗಿ, ಭಾವ, ತಮ್ಮ ಸೇರಿದಂತೆ ಸಂಬಂಧಿಗಳು, ಮಿತ್ರರು ಭಾಗವಹಿಸಿದ್ದರು. ಗ್ಯಾಬ್ರಿಯಲ್ ವಿದೇಶಿ ಮಿತ್ರರೂ ಆಗಮಿಸಿದ್ದರು.
ಗ್ಯಾಬ್ರಿಯಲ್ ವಿವಾಹಿತೆಯಾಗಿದ್ದು, ಆಕೆಗೆ 25ರ ಹರೆಯದ ಮಗನೊಬ್ಬನಿದ್ದಾನೆ. ಆದರೆ, ಆಕೆ ಈಗ ವಿಚ್ಛೇದಿತೆ. ಆಕೆಗೆ ಈರ್ವರು ಸಹೋದರಿಯರು ಮತ್ತು ಓರ್ವ ಸೋದರ ಇದ್ದಾರೆ. ಅವಿವಾಹಿತನಾಗಿರುವ ಪ್ರಾಣೇಶ ಶೇಟ್ಗೆ ಓರ್ವ ತಮ್ಮ ಮತ್ತು ಒಬ್ಬಾಕೆ ತಂಗಿ ಇದ್ದಾರೆ. ತಂಗಿಗೆ ಮದುವೆ ಆಗಿದೆ.
ಗ್ಯಾಬ್ರಿಯಲ್ ಪುತ್ರ ಜರ್ಮನಿಯಿಂದ ತಾಯಿಗೆ ಫೋನಾಯಿಸಿ, ಶುಭಾಶಯ ಕೋರಿದ್ದ ಎಂದು ಗ್ಯಾಬ್ರಿಯಲ್ ಮಾರ್ತಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದಳು. ಇನ್ನು ಪ್ರಾಣೇಶನೊಂದಿಗೆ ಬಾಳುವುದಾಗಿ ತಿಳಿಸಿದ ಆಕೆ, 6 ತಿಂಗಳು ಉಡುಪಿಯಲ್ಲಿ ಹಾಗೂ ಇನ್ನುಳಿದ 6 ತಿಂಗಳು ಜರ್ಮನಿಯಲ್ಲಿರುವುದಾಗಿ ತಿಳಿಸಿದಳು. ಪ್ರಾಣೇಶನನ್ನು ಜರ್ಮನಿಗೆ ಕರೆದೊಯ್ಯುವುದಾಗಿ ತಿಳಿಸಲು ಮರೆಯಲಿಲ್ಲ.
ಜರ್ಮನಿ ಗೃಹಿಣಿಯ ಯಾವ ಮೋಹ ಉಡುಪಿಯ ಯುವಕನನ್ನು ಮೋಡಿ ಮಾಡಿತೋ? ಎಂದು ಮದುವೆಗಾಗಮಿಸಿದವರು ತಮ್ಮ ತಮ್ಮಲ್ಲೇ ಗುಸುಗುಡುತ್ತಿದ್ದರು!

(ಸಂಯುಕ್ತ ಕರ್ನಾಟಕ: ಡಿ. 2, 2009)

ಹರಿ- ಹರರಲ್ಲಿ ಬೇಧವಿಲ್ಲವೆಂದಿನಿಪ ಕ್ಷೇತ್ರ: ಕ್ರೋಡಾಶ್ರಮ

              ಶೂಲ ಸುದರ್ಶನ ಸುರುಚಿಂ ಫಾಲೇಂದೂಜ್ವಲ ಕಿರೀಟ ಶೋಭಿತ ಶಿರಸಂ/
               ಪಂಕಜ ಮುಖಕರ ಚರಣಂ ಶ್ರೀ ಶಂಕರ ನಾರಾಯಣಂ ವಂದೇ//

ಉಡುಪಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕರಾವಳಿ ತೀರ ಸಮೀಪದ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಕ್ರೋಡಾಶ್ರಮ. ಇಂದ್ರಾಳೀ ನದೀ ತೀರದಲ್ಲಿರುವ, ಪಡುದಿಕ್ಕಿನಲ್ಲಿ ಮುನ್ನೂರು ಬ್ರಾಹ್ಮಣ ಕುಲಗಳಿದ್ದ ಪಡುಮನ್ನೂರೆಂಬ ಈ ಕ್ಷೇತ್ರ ಕೊಡವೂರು ಎಂದೇ ಪ್ರಸಿದ್ದವಾಗಿದೆ.
ಹಿಂದೆ ಭೂಲೋಕದ ಜನರಲ್ಲಿ ಕೆಲವರು ವಿಷ್ಣುವನ್ನು, ಇನ್ನೂ ಕೆಲವರು ಶಿವನನ್ನೂ ಪೂಜಿಸುತ್ತಾ ತಮ್ಮ ತಮ್ಮ ದೇವರೇ ಮೇಲೆಂದು ಪರಸ್ಪರ ಕಚ್ಚಾಡುತ್ತಿದ್ದಾಗ, ತ್ಯಾಗಿಯೂ ದೈವಾರಾಧಕನೂ ಆದ ಕ್ರೋಡನೆಂಬ ಮುನಿ ಪುಂಗವ ದ್ವೈತಾದ್ವೈತಗಳ ಉದ್ದೇಶ ಸಾರ್ಥಕವಾಗುವಂತೆ ಶಂಕರ ಹಾಗೂ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಭಕ್ತರಿಗೆ ದರ್ಶನವೀಯುವಂತಾಗಬೇಕು ಎಂದು ತಪಸ್ಸಿಗೆ ಕುಳಿತರು.
ಅದೇ ಸಂದರ್ಭದಲ್ಲಿ ದಾನವರೀರ್ವರು ಶಿವ ಮತ್ತು ವಿಷ್ಣು ಒಂದೇ ರೂಪದಲ್ಲಿ ಬಂದು ಕೊಲ್ಲುವುದಿದ್ದರೆ ನಮಗೆ ಮರಣ ಬರಲಿ ಎಂದು ಶಿವನಿಂದ ವರ ಪಡೆದಿದ್ದರು. ಆ ದಾನವರೀರ್ವರೂ ದೇವಲೋಕಕ್ಕೆ ದಾಳಿ ಮಾಡಿ ದೇವೇಂದ್ರನನ್ನು ಓಡಿಸಿ ದೇವತೆಗಳನ್ನು ಸಂಕಷ್ಟಕ್ಕೀಡುಮಾಡಿದರು. ದೇವತೆಗಳೆಲ್ಲ ಬ್ರಹ್ಮನ ಆಜ್ಞೆಯಂತೆ ಶಂಕರ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಬಂದು ದಾನವರನ್ನು ಸಂಹರಿಸಲು ಪ್ರಾರ್ಥಿಸಿದರು.
ಇತ್ತ, ಕ್ರೋಡ ಮುನಿಯ ಘೋರ ತಪಸ್ಸಿಗೆ ಒಲಿದ ಶಂಕರ-ನಾರಾಯಣರಿಬ್ಬರೂ ಒಂದಾಗಿ ಬಲಭಾಗದಲ್ಲಿ ಶಂಕರನೂ ಎಡಭಾಗದಲ್ಲಿ ನಾರಾಯಣನೂ ಒಟ್ಟಾಗಿ ಕಾಣಿಸಿಕೊಂಡು ತಮ್ಮೊಳಗೆ ಬೇಧವಿಲ್ಲ ಎಂದೂ, ದ್ವೈತಾದ್ವೈತಿಗಳು ಹೊಡೆದಾಡಬಾರದೆಂದು ನುಡಿದು ಮುನಿಯ ಪ್ರಾರ್ಥನೆಯಂತೆ ಶಾಶ್ವತವಾಗಿ ಅಲ್ಲೇ ನೆಲೆ ನಿಂತರು. ಕ್ರೋಡಮುನಿಯ ಉದ್ದೇಶ ಹಾಗೂ ಕಾರ್ಯಗಳು ಜನಕ್ಕೆ ಆದರ್ಶವಾಗಿದ್ದು, ಮುಂದೆ ಈ ಕ್ಷೇತ್ರ `ಕ್ರೋಡಾಶ್ರಮ' ಎಂದು ಪ್ರಸಿದ್ಧಿ ಆಗಲೆಂದು ಹರಸಿದರು.
ಅತ್ತ ದೇವತೆಗಳ ಪ್ರಾರ್ಥನೆಯಂತೆ ಶಂಕರ ನಾರಾಯಣರು ಒಂದಾಗಿ ಒಂದೇ ದೇಹ ಧರಿಸಿ ಆಯುಧ ಪಾಣಿಯಾಗಿ ದಾನವರನ್ನು ಯುದ್ದದಲ್ಲಿ ಸೋಲಿಸಿ ಮೋಕ್ಷ ಕರುಣಿಸಿದರು. ಕ್ರೋಡಾಶ್ರಮದಲ್ಲಿ ಶಂಕರ ನಾರಾಯಣನೊಂದಿಗೆ ಎಲ್ಲ ದೇವತೆಗಳೂ, ಭೂತ ಗಣಗಳೂ ನೆಲೆ ನಿಂತರು. ಎಡಬದಿಯಲ್ಲಿ ದುರ್ಗೆ, ನಂದಿಕೇಶ್ವರ, ಕ್ಷೇತ್ರಪಾಲ, ಬ್ರಹ್ಮಶಾಸ್ತಾರ. ಬಲಬದಿಯಲ್ಲಿ ಗಣಪತಿ, ಮುಖ್ಯಪ್ರಾಣ.
ದೇವಸ್ಥಾನದ ತುಸು ದೂರದಲ್ಲಿ ಬೊಬ್ಬರ್ಯ, ಕಂಗಣಬೆಟ್ಟು ಪಂಜುರ್ಲಿ, ಭಗವತಿ ಮಾರಿಯಮ್ಮ ದೇವಾಲಯ, ಕೆರೆಮಠ- ಕಲ್ಲಮಠ- ಕಂಬಳಕಟ್ಟದ ಮಾಣಿ ದೇವಾಲಯ, ಬೆಳ್ಕೆಳೆ ಮಹಾಲಿಂಗೇಶ್ವರ, ಕಾನಂಗಿ ಮದರಂಗಿ ಬೆಟ್ಟು ರಕ್ತೇಶ್ವರಿ, ವಡಭಾಂಡೇಶ್ವರದ ಬಲರಾಮ, ಮಂಡೆ ಚಾವಡಿ ಮಠ ಮುಂತಾದ ಹತ್ತು ಹಲವು ದೇವಸ್ಥಾನ- ಮಠಗಳಿರುವ ಈ ಕ್ಷೇತ್ರ ನಿಜಕ್ಕೂ ಆಸ್ತಿಕರ ಆಸಕ್ತಿ ಕೆರಳಿಸುತ್ತದೆ.
ಇಲ್ಲಿಯ ದೇವಸ್ಥಾನದ ಗರ್ಭಗುಡಿಯಲ್ಲಿ ಮೂಲಸ್ಥಾನ ದೇವತೆಯಾಗಿ ಆರಾಧಿಸುವ ಶಂಕರ ನಾರಾಯಣ ದೇವರು ಲಿಂಗಾಕಾರದಲ್ಲಿದ್ದು, ಪಾಣಿಪೀಠಕ್ಕಿಂತ ತಗ್ಗಿನಲ್ಲಿ ಒಂದಕ್ಕೊಂದು ಆಲಂಗಿಸಿಕೊಂಡಿದ್ದು, ತಳದಲ್ಲಿ ಎರಡೂ ಲಿಂಗಗಳು ಒಂದೇ ಆಗಿದ್ದು, ಮೇಲಕ್ಕೆ ಎರಡು ಪಾಲಾಗಿದೆ. ಬಲಿ ದೇವತಾಮೂರ್ತಿಯಾಗಿ ಆರಾಧಿಸುವ ಕಂಚಿನ ಶಂಕರ ನಾರಾಯಣ ವಿಗ್ರಹ ಆಕರ್ಷಕವಾಗಿದೆ. ಕೆರೆಕಟ್ಟೆಯ ಮೂಡುಗಣಪತಿ ಇಷ್ಟಾರ್ಥ ಸಿದ್ದಿಗಾಗಿ ನೆಲೆನಿಂತು ತನ್ನ ವಿಶೇಷ ಕಾರಣೀಕದಿಂದ ಪ್ರಸಿದ್ದಿಯಾಗಿದೆ.
ಗುರು ರಾಘವೇಂದ್ರ ರಾಯರ ವೃಂದಾವನ, ಮಲ್ಲಿಕಾರ್ಜುನ ದೇವರು ಹಾಗೂ ನಾಗಬನಗಳಿಂದ ಕೂಡಿದ ಈ ದೇವಸ್ಥಾನದಲ್ಲಿ ಹಿಂದೂಗಳ ಬಹುತೇಕ ಹಬ್ಬ ಹರಿದಿನಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷ ದೀಪೋತ್ಸವ, ರಾಯರ ಆರಾಧನೆ, ಶಿವರಾತ್ರಿ, ನವರಾತ್ರಿಗಳ ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

(ಸಂಯುಕ್ತ ಕರ್ನಾಟಕ: ಜ. 10, 2009)

ಜುಲೈ 15, 2010

ಅಪೂರ್ವ ಸೊಬಗಿನ ಕಟ್ಟಿಗೆ ರಥ

ಉಡುಪಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಶ್ರೀಕೃಷ್ಣ ಮಠ, ಅಷ್ಟ ಮಠಗಳು. ಮಠದೊಳಗಿನ ಸೊಬಗು, ಕೃಪಾಸಾಗರ ಆಚಾರ್ಯ ಮಧ್ವ ಪ್ರತಿಷ್ಠಾಪಿತ, ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಮೂರ್ತಿ. ಬಾಯಿ ನೀರೂರಿಸುವ ಘಮಘಮಿಸುವ ಊಟ!
ಇವಿಷ್ಟೇ ಅಲ್ಲ. ಉಡುಪಿಯಲ್ಲಿ ಇನ್ನೂ ಇದೆ. ಚತುರ್ದಶ ಭುವನದೊಡೆಯನ ಸಂಭ್ರಮಕ್ಕಾಗಿ ಚಿನ್ನ- ಬೆಳ್ಳಿ ರಥಗಳ ಹೊರತಾಗಿಯೂ ಮೂರು ತೇರುಗಳಿವೆ. ಇವೆಲ್ಲವೂ ಕೃಷ್ಣಮೂರ್ತಿಯನ್ನಿಟ್ಟು ಉತ್ಸವವನ್ನಾಚರಿಸಿ ಸಂಭ್ರಮಿಸಲು. ಆದರೆ, ಉಡುಪಿಯಲ್ಲಿ ಇನ್ನೂ ಒಂದು ರಥವಿದೆ. ಅದೇ ಕಟ್ಟಿಗೆ ರಥ!
ಅನ್ನಬ್ರಹ್ಮ ಎಂದೇ ಕರೆಯಲ್ಪಡುವ ಕೃಷ್ಣ ಸನ್ನಿಧಿಗೆ ಬರುವ ಲಕ್ಷಾಂತರ ಮಂದಿ ಭಕ್ತರ ಅಶನ ಸಮಸ್ಯೆಯನ್ನು ತಣಿಸಿ, ಘಡ್ರಸೋಪೇತವಾದ ಭೋಜನ ನಿರಾತಂಕವಾಗಿ ನಡೆಸಲು ಪೂರಕವಾದ ಉರುವಲು ವ್ಯವಸ್ಥೆಗೆ ಸುಗಮವನ್ನಾಗಿಸಲು ಈ ರಥ! ಸಣ್ಣ ವಿಚಾರವಾದರೂ ಆ ಕುರಿತು ಚಿಂತಿಸಿ, ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಷ ನೀಡಿದ ಆ ಮಹೋದಯನಿಗೆ ನಮೋ ನಮ: ಎನ್ನೋಣವೇ?
ಕೃಷ್ಣಮಠದೆದುರಿನ ಮಧ್ವಸರೋವರದ ಪಾರ್ಶ್ವಭಾಗದಲ್ಲಿ ಕಟ್ಟಿಗೆ ರಥದ ಶಾಶ್ವತ ಸ್ಥಾನ. ಅಲ್ಲಿಯೇ ಸಮೀಪ ಅನ್ನಬ್ರಹ್ಮನ ನೈವೇದ್ಯ ಸಿದ್ಧಗೊಳ್ಳುವ ಪಾಕಶಾಲೆ. ಅದಕ್ಕೆ ಹೊಂದಿಕೊಂಡಂತೆ ಕಟ್ಟಿಗೆ ರಥಕ್ಕೊಂದು ನೆಲೆಯನ್ನು ಒದಗಿಸಲಾಗಿದೆ. ನಿರಂತರ ಅನ್ನದಾನಕ್ಕೆ ಉರುವಲು ಸಮಸ್ಯೆಯಾಗದಿರಲಿ ಎಂಬ ಸದಾಶಯದಿಂದ ಕಟ್ಟಿಗೆ ರಥ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು, ಅದನ್ನು ಪರ್ಯಾಯಪೂರ್ವ ವಿಧಿಗಳಲ್ಲಿ ಒಂದಾಗಿಸಿದ್ದಾರೆ. ಈ ಕ್ರಮವನ್ನು ಜಾರಿಗೆ ತಂದವರು ಪ್ರಾಯಶ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ನಾಡಹಬ್ಬದ ರೂಪಕೊಟ್ಟ ವಾದಿರಾಜ ಸಾರ್ವಭೌಮರೇ ಇರಬೇಕು.
ಪರ್ಯಾಯ ವಹಿಸಿ ಕೃಷ್ಣಪೂಜಾ ದೀಕ್ಷೆ ವಹಿಸಿಕೊಳ್ಳುವ ಅಷ್ಟಮಠಗಳ ಯತಿಗಳು ಕಟ್ಟಿಗೆ ಮುಹೂರ್ತ ಅಂದರೆ, ಕಟ್ಟಿಗೆ ಒಟ್ಟುವ ಕಾರ್ಯವನ್ನು ಮಾಡಲೇಬೇಕು. ಪರ್ಯಾಯಪೂರ್ವ ವಿಧಿಗಳಲ್ಲಿ ಬಾಳೆ ಮುಹೂರ್ತ (ಬಾಳೆಗಿಡ ನೆಡುವುದು) ಪ್ರಥಮದ್ದಾದರೆ, ಕಟ್ಟಿಗೆ ಮುಹೂರ್ತ ಎರಡನೆಯದು. ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಯವರು ತಮ್ಮ ಮುಂದಿನ 2 ವರ್ಷಗಳಿಗೆ ಬೇಕಾಗುವಷ್ಟು ಉರುವಲನ್ನು ಸಂಗ್ರಹಿಸಿ, ರಥದ ಮಾದರಿಯಲ್ಲಿ ಒಟ್ಟುಮಾಡುತ್ತಾರೆ. ತಮ್ಮ ಪರ್ಯಾಯ ಕಾಲದಲ್ಲಿ ಒಟ್ಟಿಟ್ಟಿರುವ ಆ ಕಟ್ಟಿಗೆಯನ್ನು ಬಳಸಬಹದು. ಮುಂದಿನ ರಥ ನಿಮರ್ಾಣ ಭಾವೀ ಪರ್ಯಾಯ ಶ್ರೀಗಳಿದ್ದು. ಈ ಚಕ್ರ ಮುಂದುವರಿಯುತ್ತಲೇ ಇರುತ್ತದೆ. ಇದುವರೆಗೆ ಅನೂಚಾನವಾಗಿ ನಡೆದುಬಂದಿದೆ.
ಈಗ ಅನಿಲಾಧಾರಿತ ಅಡುಗೆ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕಟ್ಟಿಗೆ ಮುಹೂರ್ತ ಕೈಬಿಟ್ಟಿಲ್ಲ. ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕೃಷ್ಣಮಠ ಪ್ರಾಂಗಣ ಪರಿಸರದಲ್ಲಿ ಕಟ್ಟಿಗೆ ರಥಕ್ಕೊಂದು ಶೋಭೆ ಇದೆ.

(ಸಂಯುಕ್ತ ಕರ್ನಾಟಕ: ನ. 9, 2008)

ಜುಲೈ 13, 2010

ನವರಾತ್ರಿಯಲಿ ಉಡುಪಿ ಕೃಷ್ಣ ಸ್ತ್ರೀವೇಷಧಾರಿ!

ಶಕ್ತಿ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿ ದಿನಗಳಲ್ಲಿ ಉಡುಪಿ ಕೃಷ್ಣನನ್ನು ಕಾಣುವುದೇ ಕಣ್ಣಿಗೆ ಹಬ್ಬ. ಶಾಲಗ್ರಾಮ ಶಿಲೆಯ ಕೃಷ್ಣಮೂರ್ತಿ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಸ್ತ್ರೀವೇಷಧಾರಿ! ಈ ದಿನಗಳಲ್ಲಿ ಕೃಷ್ಣನಿಗೆ ಹೆಣ್ಣುರೂಪದ ಅಲಂಕಾರ ಮಾಡಲಾಗುತ್ತದೆ. ಶಕ್ತಿಗೆ ಸ್ಪೂರ್ತಿಯ ಸೆಲೆಯಾದ ಪುರುಷರೂಪಿ ಭಗವಂತನಿಗೆ ದೇವಿ ಅಲಂಕಾರ ಮಾಡಲಾಗುತ್ತದೆ ಎಂದು ವಿದ್ವಾಂಸ ಗೋಪಾಲಾಚಾರ್ ಅಭಿಪ್ರಾಯಪಡುತ್ತಾರೆ.
ಈ ತೆರನ ಪದ್ಧತಿ ಬಲು ಹಿಂದಿನಿಂದಲೂ ಉಡುಪಿ ಕೃಷ್ಣಮಠದಲ್ಲಿ ಜಾರಿಗೆ ಬಂದಿದೆ. ಭಗವತಿ, ಕೃಷ್ಣನ ತಂಗಿ ಎಂದೇ ವೈಷ್ಣವರು ನಂಬುತ್ತಾರೆ. ಮಾತ್ರವಲ್ಲದೇ ಕಳೆದ ಆಷಾಢ ಏಕಾದಶಿಯಿಂದ ಮುಂದಿನ ಉತ್ಥಾನ ದ್ವಾದಶಿ ವರೆಗೆ ಶಯನದಲ್ಲಿರುವ ಮಹಾವಿಷ್ಣು ಲಕ್ಷ್ಮೀ ಅಂತರ್ಗತನಾಗಿರುತ್ತಾನೆ ಎಂಬ ನಂಬಿಕೆಯೂ ಇದೆ. ಜಗನ್ನಿಯಾಮಕ ಭಗವಂತನನ್ನು ನಿದ್ರೆಯಿಂದೆಬ್ಬಿಸಲು ಲಕ್ಷ್ಮೀ ಒಲುಮೆ ಗಳಿಸಿಕೊಳ್ಳುವುದು ಅಗತ್ಯ. ಹಾಗಾಗಿ ರಮಾಂತರ್ಗತ ರಮಾರಮಣ ಶ್ರೀಕೃಷ್ಣನಿಗೆ ಹೆಣ್ಣುರೂಪ. ದೇವಿ, ಕೃಷ್ಣನ ಅನುಜೆ ಎಂದು ತಿಳಿಹೇಳಲೂ ಈ ರೂಪ. ಕೃಷ್ಣನ ವಿಶೇಷ ಸನ್ನಿಧಾನದಲ್ಲಿ ಭಾಮೆಯನ್ನು ಕಂಡು ಪುಳಕಗೊಳ್ಳಲು ಇದು ಸುಸಂದರ್ಭ. ಪರಶುರಾಮ ಸೃಷ್ಟಿಯಲ್ಲಿ ಶಕ್ತಿ ಆರಾಧನೆ ವಿಶೇಷವಾಗಿರುವ ಹಿನ್ನೆಲೆಯೂ ಕೃಷ್ಣನ ಸ್ತ್ರೀವೇಷಕ್ಕೆ ಪೂರಕ.
ಮಾತ್ರವಲ್ಲದೇ ಕೃಷ್ಣ ತ್ರಿಗುಣ ಸ್ವರೂಪಿ. ಸತ್ವ, ರಜ ಮತ್ತು ತಮೋಗುಣಗಳಿಗೆ ಒಡೆಯ. ತ್ರಿಗುಣಗಳಿಗೆ ಅನುಕ್ರಮವಾಗಿ ಶ್ರೀ, ಭೂ ಮತ್ತು ದುರ್ಗೆ ಅಧಿದೇವತೆಗಳು. ಅದನ್ನೇ ಪುರಂದರದಾಸರು `ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಮರಳು ಮಾಡಿಕೊಂಡೆಯಲ್ಲ.... ಮಾಯಾದೇವಿಯೇ' ಎಂದು ಭಾಮೆರೂಪಿ ಕೃಷ್ಣನನ್ನು ಸ್ತುತಿಸಿದ್ದು!
ವಾದಿರಾಜರ ಕಾಲದಿಂದಲೂ ಉಡುಪಿ ಕೃಷ್ಣನಿಗೆ ನವರಾತ್ರಿ ದಿನಗಳಲ್ಲಿ ಸ್ತ್ರೀರೂಪಿ ಅಲಂಕಾರ ಹಾಗೂ ಪ್ರತೀ ಶುಕ್ರವಾರಗಳಂದು ಮೋಹಿನಿ ರೂಪದಲ್ಲಿ ಅಲಂಕರಿಸುವ ವಾಡಿಕೆ ಇತ್ತು. ಅವರು ತಮ್ಮ ಕೀರ್ತನೆಯೊಂದರಲ್ಲಿ ` ಲಾವಣ್ಯದಿಂದ ಮೆರೆವ ನಿಜಸತಿಯ ಹೆಣ್ಣು ರೂಪದಿ ಕಾಂಬ ಮಹಾಲಕುಮಿ ಇವಗಿನ್ಯಾರು ಯಾಕೆ' ಎಂದು ಕೃಷ್ಣನ ಹೆಣ್ಣು ರೂಪವನ್ನು ಕಂಡು ಬೆರಗಾಗಿ ಸ್ವತ: ಹೆಣ್ಣಾಗಿರುವ ಕೃಷ್ಣನಿಗೆ ಅನ್ಯ ಹೆಣ್ಣುಗಳು ಯಾಕೆ ಮತ್ತು ಕೃಷ್ಣನಿಗಿಂತ ಮಿಗಿಲಾದ ಹೆಣ್ಣುಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂತೂ ನವರಾತ್ರಿಯ ಈ ದಿನಗಳಲ್ಲಿ ಕೃಷ್ಣನನ್ನು ಸತ್ಯಭಾಮೆ, ಮೋಹಿನಿ, ಪದ್ಮಾವತಿ, ವೀಣಾಪಾಣಿ... ಹೀಗೆ ನವವಿಧ ರೂಪಗಳಿಂದ ಕಾಣುವ ಸುಯೋಗ.

(ಸಂಯುಕ್ತ ಕರ್ನಾಟಕ: ಅ. 6, 2008)

ಜೂನ್ 9, 2010

ಅಪೂರ್ವ ದ್ವಿಭುಜ ಗಣಪತಿ ಆಲಯ

ಸಾಮಾನ್ಯವಾಗಿ ಗೌರಿತನಯ ವಿನಾಯಕ ಚತುಃಹಸ್ತ, ನಾಲ್ಕು ಕೈಗಳುಳ್ಳವ. ಅಪೂರ್ವವಾಗಿ ಕೆಲವೆಡೆಗಳಲ್ಲಿ ಆತ ದ್ವಿಬಾಹು ಉಳ್ಳವನಾಗಿಯೂ ಕಂಡುಬರುತ್ತಾನೆ. ಇಡಗುಂಜಿ ವಿನಾಯಕ, ಗೋಕರ್ಣದ ಗಣಪ ಮೊದಲಾದ ಗಣೇಶಾಲಯಗಳಲ್ಲಿನ ವಿಗ್ರಹಗಳು ಎರಡು ಕೈಗಳುಳ್ಳವುಗಳು. ಉಡುಪಿ ಜಿಲ್ಲೆಯಲ್ಲಿಯೂ ದ್ವಿಬಾಹು ಗಣಪನ ವಿಗ್ರಹಗಳಿರುವ ಅಪೂರ್ವ ತಾಣಗಳಿವೆ. ಅವುಗಳಲ್ಲಿ ಒಂದು ಆನೆಗುಡ್ಡೆ ಕುಂಭಾಶಿಯಲ್ಲಿದ್ದರೆ, ಇನ್ನೊಂದು ಹಟ್ಟಿಯಂಗಡಿಯಲ್ಲಿದೆ. ಆನೆಗುಡ್ಡೆ ಗಣಪತಿ ನಿಂತ ಭಂಗಿಯಲ್ಲಿದ್ದರೆ, ಹಟ್ಟಿಯಂಗಡಿ ಗಣೇಶ ಕುಳಿತ ವಿಶಿಷ್ಟ ಭಂಗಿಯಲ್ಲಿದೆ. ದ್ವಿಭುಜ ಗಣಪತಿ ಕ್ಷಿಪ್ರ ಫಲದಾಯಕ ಎಂಬುದು ಆಸ್ತಿಕರ ನಂಬುಗೆ. ಈ ಎರಡೂ ಕಾರಣೀಕ ಕ್ಷೇತ್ರಗಳು ಕುಂದಾಪುರ ತಾಲ್ಲೂಕಿನಲ್ಲಿವೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿ- ಕುಂದಾಪುರ ನಡುವೆ ರಸ್ತೆಯಿಂದ ಸುಮಾರು ಒಂದು ಕಿ. ಮೀ. ಪೂರ್ವದಲ್ಲಿ ಆನೆಗುಡ್ಡೆ ಎಂಬ ಕ್ಷೇತ್ರವಿದೆ. ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇದೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧು ಕಾನನ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರ ಎಂದೂ ಕರೆಯುತ್ತಿದ್ದು ಈಗಿನ ಕಲಿಯುಗದಲ್ಲಿ ಕುಂಭಾಶಿ ಎಂದು ಕರೆಯಲಾಗುತ್ತಿದೆ. ಹಿಂದೊಮ್ಮೆ ಅನಾವೃಷ್ಟಿಯಾಗಿದ್ದಾಗ ಗೌತಮ ಮುನಿಗಳು ಈ ಕ್ಷೇತ್ರದಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದ್ದರು. ಹೀಗೆ ಈ ಕ್ಷೇತ್ರ ಯುಗಾಂತರಗಳಿಂದಲೂ ಪವಿತ್ರವಾದುದು, ಪ್ರಸಿದ್ಧವಾದುದುದು ಎಂಬುದು ಪುರಾಣಗಳ ಉಲ್ಲೇಖ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿ ನಿತ್ಯಾಹ್ನಿಕಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾಗಿದ್ದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮರಾಜನಲ್ಲಿ ಕುಂಭಾಸುರನ ಪೀಡೆಯ ಕುರಿತು ಅರುಹಿದಾಗ, ಲೋಕಕಂಠಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಧರ್ಮಜ ಅಪ್ಪಣೆ ಕೊಟ್ಟ. ಕೂಡಲೇ ಭೀಮ ಯುದ್ಧ ಸನ್ನದ್ಧನಾದ. ಭೀಮ- ಕುಂಭರೊಳಗೆ ಘನಘೋರ ಯುದ್ಧ ನಡೆಯಿತಾದರೂ, ಯುದ್ಧದಲ್ಲಿ ಕುಂಭಾಸುರ ಅವಧ್ಯನಾಗಿಯೇ ಉಳಿದ. ಅವನನ್ನು ಸಂಹರಿಸುವ ಪರಿ ಬಗೆಗೆ ಚಿಂತಿಸುತ್ತಾ ಭೀಮಸೇನ ಶಿಬಿರಕ್ಕೆ ಹಿಂದಿರುಗುತ್ತಲೇ ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ಕುಂಭನ ವಧೆ ಸಾಧ್ಯ ಎಂಬ ಅಶರೀರವಾಣಿ ಕೇಳಿಸಿತು.
ಭೀಮಸೇನ ವಿಶ್ವಂಭರ ರೂಪಿ ವಿನಾಯಕನನ್ನು ಧ್ಯಾನಿಸಿದ. ಆನೆ ರೂಪದಲ್ಲಿ ಭಗವಂತ ಪ್ರತ್ಯಕ್ಷನಾಗಿ ಕತ್ತಿಯೊಂದನ್ನು ದಯಪಾಲಿಸಿದ. ಅದರಿಂದಲೇ ಭೀಮಸೇನ ಕುಂಭಾಸುರನನ್ನು ಸಂಹರಿಸಿದ ಎಂಬುದು ಕುಂಭಾಸಿ ಸ್ಥಳಪುರಾಣ ತಿಳಿಸುವ ಕ್ಷೇತ್ರದ ಕಥೆ. ಅದನ್ನೇ ವಾದಿರಾಜ ಯತಿವರೇಣ್ಯರು ತಮ್ಮ `ತೀರ್ಥ ಪ್ರಬಂಧ'ದಲ್ಲಿ ಭೀಮಸೇನ ಕುಂಭಾಸುರನನ್ನು ಅಸಿ (ಕತ್ತಿ)ಯಿಂದ ಸಂಹರಿಸಿದುದರಿಂದಲೇ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ. ಮುಂದಕ್ಕೆ ಅಪಭ್ರಂಶವಾಗಿ ಕುಂಭಾಶಿ ಎಂಬ ಹೆಸರೂ ಆ ಊರಿಗೆ ಬಂತು. ಈ ಪ್ರದೇಶಕ್ಕೆ ನಾಗಾಚಲ ಎಂಬ ಹೆಸರೂ ಇತ್ತು. ಗಣಪತಿ ಆನೆರೂಪದಲ್ಲಿ ಭೀಮನಿಗೆ ಕಂಡು ಕತ್ತಿ ಅನುಗ್ರಹಿಸಿದ ಪ್ರದೇಶದಲ್ಲಿ ಗಣಪತಿ ಉದ್ಭವಿಸಿದ. ಸೊಂಡಿಲಿನ ಆಕಾರವಿರುವ ಮುಖಕ್ಕೆ ಮಾತ್ರ ಅಲ್ಲಿ ನಿತ್ಯ ಪೂಜಾದಿ ವಿನಿಯೋಗಗಳು ನಡೆಯುತ್ತವೆ. ಉಳಿದ ಭಾಗ ಗೋಡೆಯಿಂದ ಆವೃತವಾಗಿದೆ. ಆನೆ ರೂಪದಿಂದ ಪ್ರತ್ಯಕ್ಷನಾದ ಗಣಪತಿ ಭಕ್ತಾಭೀಷ್ಟ ಪ್ರದಾತ ಎಂಬುದು ನಂಬಿಕೆ.
ಸುಮಾರು ಏಳು ತಲೆಮಾರಿನಿಂದ ಶಿವಳ್ಳಿ ಬ್ರಾಹ್ಮಣ ಪಂಗಡದ ಉಪಾಧ್ಯಾಯ ಎಂಬ ವರ್ಗಕ್ಕೆ ಇಲ್ಲಿನ ಪೂಜೆ, ಆಡಳಿತ ಇದೆ. ದೇವಳದ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರು ಹಾಗೂ ಭಜಕರ ನೆರವಿನೊಂದಿಗೆ ಈ ವರ್ಗ ಮಾಡಿದೆ. ಪಂಚಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ಗಣಹೋಮ ಇತ್ಯಾದಿಗಳು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು. ಇಲ್ಲಿನ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

ವಾರಾಹಿ ನದಿಯ ಉತ್ತರ ದಂಡೆಯ ಮೇಲಿರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ಸ್ಥಳ ಪ್ರಾಚೀನ ರಾಜಧಾನಿಯಾಗಿ, ಹಲವು ಧರ್ಮಗಳ ನೆಲೆಯಾಗಿ ಕಲೆ- ಸಾಹಿತ್ಯ ಸಂಸ್ಕೃತಿಗಳ ತವರೂರಾಗಿಯೂ ಪ್ರಸಿದ್ಧ. ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 45 ಕಿ. ಮೀ., ಕುಂದಾಪುರದಿಂದ ಈಶಾನ್ಯಕ್ಕೆ 8 ಕಿ. ಮೀ. ದೂರದಲ್ಲಿರುವ ಹಟ್ಟಿಯಂಗಡಿಯ ಪ್ರಮುಖ ಆಕರ್ಷಣೆ ಇಲ್ಲಿನ ವಿನಾಯಕ ದೇವಸ್ಥಾನ.
ಪಟ್ಟಿ, ಹಟ್ಟಿ ನಗರ ಎಂದೆಲ್ಲಾ ಕರೆದುಕೊಳ್ಳುತ್ತಿದ್ದ ಹಟ್ಟಿಯಂಗಡಿ, ತುಳುನಾಡನ್ನು ಆಳಿದ ಅಳುಪರ ರಾಜಧಾನಿ. ಇಲ್ಲಿನ ಗಣಪತಿ ದೇವಾಲಯದ ವಿನಾಯಕ ಮೂರ್ತಿ ಕರ್ನಾಟಕದ ಪ್ರಾಚೀನ ಗಣಪತಿ ಮೂರ್ತಿಗಳಲ್ಲಿ ಎರಡನೆಯದು. (ಮೊದಲನೆಯದು ಗೋಕರ್ಣ ಗಣಪತಿ). ಗಾಣಪತ್ಯರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ಈ ದೇವಳದ ಉಗಮವಾಯಿತೆಂದು ಇತಿಹಾಸಜ್ಞ ಡಾ. ಪಿ. ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಇಲ್ಲಿನ ವಿನಾಯಕ ವಿಗ್ರಹ ಸುಮಾರು 5- 6ನೇ ಶತಮಾನಕ್ಕೆ ಸೇರಿದುದು. ಸುಮಾರು ಒಂದು ಸಾವಿರದ ಐನೂರು ವರ್ಷಗಳಿಂದ ಭಕ್ತರಿಂದ ಪೂಜೆಗೊಂಡ ವಿಗ್ರಹ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ವಿನಾಯಕ ದೇವಾಲಯ ಚತುರಸ್ರ ಆಕಾರದಲ್ಲಿದೆ. ಗರ್ಭಗೃಹದಲ್ಲಿರುವ ವಿನಾಯಕ ದ್ವಿಬಾಹು. ಕೃಷ್ಣಶಿಲಾ ವಿಗ್ರಹ. ಬಾಲಗಣೇಶನ ವಿಗ್ರಹ ಇದಾಗಿದೆ ಎಂಬುದು ವಿಗ್ರಹ ತಜ್ಞರ ಅಭಿಪ್ರಾಯ. ಕುಳಿತ ಭಂಗಿಯ ಅಪೂರ್ವ ವಿಗ್ರಹವಿದು. ಪಾಣಿಪೀಠದ ಮೇಲ್ಘಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆಯಿದೆ. ಆಗಮ ತಂತ್ರ ವೈದಿಕ ವಿಧಾನದಂತೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಿತ್ಯ ಅಷ್ಟದ್ರವ್ಯ ಗಣಪತಿ ಹವನ ಇಲ್ಲಿನ ವಿಶೇಷ. ಗಣಪತಿ ಇಷ್ಟಪ್ರದಾಯಕ ಎಂದೇ ಪ್ರಸಿದ್ಧಿ. ಭಕ್ತರ ಪ್ರಾರ್ಥನೆಗೆ ಹೂ ಪ್ರಸಾದ ನೀಡುವುದು ಈ ದೇವಳದ ವಿಶೇಷ. ದೇವಳದ ಆಡಳಿತ ಮೊಕ್ತೇಸರ ಎಚ್. ರಾಮಚಂದ್ರ ಭಟ್ಟ ದೇವಳದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

(ಸಂಯುಕ್ತ ಕರ್ನಾಟಕ: ಆ. 30, 2008)

ಜೂನ್ 7, 2010

ವರುಣ ಕೃಪೆಗೆ ಮಂಡೂಕ ಪರಿಣಯ!

ಕಿವಿಗಡಚಿಕ್ಕುವ ಬ್ಯಾಂಡ್- ವಾದ್ಯಗಳ ಸದ್ದು, ನಭವನ್ನು ಬೇಧಿಸುವ ತೆರದಿ ಸಿಡಿಯುವ ಪಟಾಕಿ ಸದ್ದು, ಹರ್ಷಚಿತ್ತ ಮಂದಿಯ ಸಾಲು ಸಾಲು.... ಸಾಲಂಕೃತ ಮಂಟಪದಲ್ಲಿ ಸಾಗಿಬರುತ್ತಿರುವ ವಧೂ-ವರರು!
ಇದು ಉಡುಪಿಯಲ್ಲಿ ನಡೆದ ವಿವಾಹ ಸಂಭ್ರಮದ ದೃಶ್ಯ. ಇದು ಅಂತಿಂಥ ಮದುವೆಯಲ್ಲ. ಸಾಕ್ಷಾತ್ ಮಂಡೂಕ ಪರಿಣಯ! ರಟ್ಟಿನ ಪೆಟ್ಟಿಗೆಯೊಳಗೆ ಬಂಧಿತವಾಗಿದ್ದ ಹೆಣ್ಣು ಕಪ್ಪೆಯೊಂದು ಅಂಥದೇ ಇನ್ನೊಂದು ಪೆಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ ಗಂಡು ಕಪ್ಪೆಯನ್ನು ಕಾಣುವ (ನೆಗೆಯುವ!) ತವಕ! ಈ ಅಪೂರ್ವ ಸನ್ನಿವೇಶವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಅನೇಕ ಮಂದಿಗೆ ಕುತೂಹಲ.
ವೈಶಾಖವನ್ನು ಹೋಲುವ ಬಿಸಿಲು ಹಾಗೂ ಸೆಖೆ ಆಷಾಢ ಮಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಮಳೆಗಾಗಿ ವರುಣನಿಗಾಗಿ ಮೊರೆಯಿಡುವ ವಿನೂತನ ಮಾದರಿಯಾಗಿ ಮಂಡೂಕ ಪರಿಣಯ (ಕಪ್ಪೆಗಳ ಮದುವೆ)ವನ್ನು ಏರ್ಪಡಿಸಲಾಯಿತು. ಸದಾ ಹೊಸತೇನನ್ನಾದರೂ ಮಾಡಿ ತನ್ಮೂಲಕ ಪ್ರಚಾರ ಪಡೆಯುವ ವಿಚಿತ್ರ ಮನೋಭಾವದ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯಲ್ಲೇ ಪ್ರಥಮದ್ದಾದ ಹಾಗೂ ವಿನೂತನವಾದ ಕಪ್ಪೆಗಳ ವಿವಾಹವನ್ನು ಏರ್ಪಡಿಸುವುದರೊಂದಿಗೆ ಹಲವರ ಗಮನ ಸೆಳೆದರು.
ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡರ ತಲಾಷೆಗಾಗಿ ಸಾಕಷ್ಟು ಪರಿಶ್ರಮ ಪಡಲಾಯಿತು. ಕೊನೆಗೂ ಗಣೇಶರಾಜ್ ಸರಳೇಬೆಟ್ಟು ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡನ್ನು ತಂದು (ಪ್ರಾಣಿಶಾಸ್ತ್ರಜ್ಞರಿಂದ ದೃಢೀಕರಿಸಿ?) ಅವುಗಳನ್ನು ಪ್ರತ್ಯೇಕವಾದ ರಟ್ಟಿನ ಪೆಟ್ಟಿಗೆಯಲ್ಲಿಟ್ಟು, ತಳ್ಳುಗಾಡಿಯಲ್ಲಿ ಸಾಲಂಕೃತ ಮಂಟಪವೊಂದನ್ನು ನಿರ್ಮಿಸಿ, ಇಲ್ಲಿನ ಡಯಾನಾ ವೃತ್ತದಿಂದಾರಂಭಿಸಿ, ಬಸ್ ನಿಲ್ದಾಣ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ವಾದ್ಯ, ಧ್ವನಿವರ್ಧಕ, ಗರ್ನಾಲು (ಪಟಾಕಿ), ಸಾಲದೆಂಬಂತೆ ಕಪ್ಪೆಗಳ ಮದುವೆಗಾಗಿಯೇ ಬಂದ ಕೆಲವರಿಂದ ಕೇಕೇ ನೃತ್ಯ ಇತ್ಯಾದಿ ಎಲ್ಲವೂ ಇತ್ತು. ಮದುವೆ ಸುಸಾಂಗವಾಗಿ ನಡೆಯಲು ಆರಕ್ಷಕರ ರಕ್ಷಣೆಯೂ ದೊರಕಿತ್ತು!
ಬಸ್ ನಿಲ್ದಾಣವೇ ಮದುವೆ ಮಂಟಪವಾಗಿ ರೂಪುಗೊಂಡು ನಿತ್ಯಾನಂದ ಒಳಕಾಡು ಗಂಡು ಕಪ್ಪೆಯ ಪರವಾಗಿ ಹೆಣ್ಣು ಕಪ್ಪೆಯ ಕಾಲಿಗೆ ಕಾಲುಂಗುರ ತೊಡಿಸಿ, ಮಾಂಗಲ್ಯ ಬಿಗಿದರು. ಅರಿಶಿಣ- ಕುಂಕುಮ, ಸೇಸೆ ಹಾಕಲಾಯಿತು. ಅಕ್ಷತಾರೋಪಣವೂ ನಡೆಯಿತು. ಹೂಹಾರ ಹಾಕಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಅಲ್ಲಿ ನೆರೆದಿದ್ದವರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಾಲ ನಡೆದ ಕಪ್ಪೆ ಮದುವೆ ಕಾರ್ಯಕ್ರಮ ನಡೆಯಿತು. ಮದುವೆ ಊಟ ಎಲ್ಲಿ ಎಂದು ಅಲ್ಲಿ ನೆರೆದಿದ್ದವರೋರ್ವರು ದೊಡ್ಡ ದನಿಯಲ್ಲಿ ಕೇಳಿದ್ದು ಕುಚೋದ್ಯವಾಗಿತ್ತು!
ಇದೆಲ್ಲವೂ ನಡೆದದ್ದು ಮಳೆಗಾಗಿ. ಈ ಮೊರೆ ವರುಣನಿಗೆ ಕೇಳಿಸೀತೇ ಎಂದು ಕಾದುನೋಡಬೇಕಷ್ಟೇ!!

(ಸಂಯುಕ್ತ ಕರ್ನಾಟಕ: ಜು. 16, 2008)

ಉದ್ವಾರ್ಚನೆ: ಇದು ಕೃಷ್ಣಮಠದ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ

ಉದ್ವಾರ್ಚನೆ- ಇದು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ. ಯತಿಗಳಿಂದಲೇ ಈ ಅಪೂರ್ವ ಕಾರ್ಯಕ್ರಮಕ್ಕೆ ಚಾಲನೆ.
ವಜ್ರ ಕವಚಧಾರಿಯಾಗಿ, ಬಾಲಕೃಷ್ಣನಾಗಿ ಕಂಗೊಳಿಪ ಪೊಡವಿಗೊಡೆಯ ರುಕ್ಮಿಣೀಕರಾರ್ಚಿತ ಉಡುಪಿ ಶ್ರೀಕೃಷ್ಣ ಮೂರುತಿ ಬೊಳ್ಗೊಡೆ (ತಾಳೆಗರಿ ಕೊಡೆ) ಸಹಿತ ಈಚಲು ಚಾಪೆ ಧರಿಸಿ ಬೆಚ್ಚನೆ ಕುಳಿತಿದ್ದಾನೆ. ಆತನ ದರ್ಶನಾಕಾಂಕ್ಷಿಗಳಾಗಿ ಬಂದ ಭಕ್ತರಿಗೆ ತನ್ನ ಮುಖವನ್ನೂ ಆತ ತೋರಿಸಲೊಲ್ಲ!
ಇದು ಉಡುಪಿ ಕೃಷ್ಣ ಕೋಪಾವಿಷ್ಟನಾದ ಸಂದರ್ಭ ಎಂದರೆ ಅದು ತಪ್ಪಾಗುತ್ತದೆ. ಇದು ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಕಲೆತು ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಉತ್ಸವಪ್ರಿಯ ಶ್ರೀಕೃಷ್ಣನಿಗೆ ನಿತ್ಯವೂ ವಿವಿಧ ಉತ್ಸವಗಳು. ಸಾಲದಂತೆ ಚತುರ್ದಶ ಭುವನದೊಡೆಯನಿಗೆ ದಿನವೂ 14 ಬಗೆಯ ಪೂಜೆಗಳು. ಬಹುವಿಧ ಪೂಜೆಗಳು, ಆಗಮಿಸುವ ಭಕ್ತಾದಿಗಳಿಗೆ ಆಶೀರ್ವಾದ ಇತ್ಯಾದಿಗಳಿಂದ ಸದಾ ಬ್ಯುಸಿಯಾಗಿರುವ ಪರ್ಯಾಯ ಪೀಠಸ್ಥ ಯತಿಗಳಿಗೆ ದೇವಳ ಗರ್ಭಗುಡಿ ಸಹಿತ ದೇವಳದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ ಮತ್ತು ಸಮಯವೂ ಕಮ್ಮಿ. ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಉದ್ವಾರ್ಚನೆ ಎಂಬ ವಿಶಿಷ್ಟ, ಸಾಮುದಾಯಿಕ ಕಾರ್ಯಕ್ರಮ ಜಾರಿಗೆ ಬಂದಿರಬೇಕು. ಶ್ರೀಸಾಮಾನ್ಯನೂ ಯತಿಗಳೊಂದಿಗೆ ಸೇರಿಕೊಂಡು ಈ ವಿಶಿಷ್ಟ ಸೇವೆಯಲ್ಲಿ ಭಾಗಿಯಾಗಲು ಸುವರ್ಣಾವಕಾಶ.
ಮಾತ್ರವಲ್ಲದೇ ಪ್ರಥಮೈಕಾದಶಿ ಬಳಿಕ ಶ್ರೀಕೃಷ್ಣ ಪವಡಿಸುತ್ತಾನೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ವಿಶೇಷ ಉತ್ಸವಾದಿಗಳಿಲ್ಲ. ಈ ಸಮಯದಲ್ಲಿ ಬರುವ ಗೌಜಿಯ ಉತ್ಸವ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ ಮಾತ್ರ. ಇನ್ನು ಭಗವಂತ ನಿದ್ದೆಯಿಂದೇಳುವುದು ಉತ್ಥಾನ ಏಕಾದಶಿಗೆ. ಅಲ್ಲಿಯ ವರೆಗೆ ಕೃಷ್ಣನ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರಕ್ಕೆ ಕೊಂಡೊಯ್ಯುವಂತೆಯೂ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣನ ನಿದ್ರೆಗೆ ಭಂಗವಾಗಬಾರದಲ್ಲಾ, ಆತನ ಶಯನಾಗೃಹ ಶುಚಿಯಾಗಿರಬೇಕಲ್ಲಾ? ಅದಕ್ಕೇ ಈ ಉದ್ವಾರ್ಚನೆ.
ಪುತ್ತಿಗೆ ಪರ್ಯಾಯ ಸಂದರ್ಭ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಅದಮಾರು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತೀರ್ಥಹಳ್ಳಿ ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯತಿಗಳೆಲ್ಲ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಗಳಾದರು. ಭಕ್ತರೂ ಅದರಲ್ಲಿ ಪಾಲ್ಗೊಂಡರು. ಬಳಿಕ ಮಧ್ವಸರೋವರದಲ್ಲಿ ಸ್ನಾನಗೈದು ಉದ್ವಾರ್ಚನೆಯನ್ನು ಕೃಷ್ಣಾರ್ಪಣಗೈದರು.

(ಸಂಯುಕ್ತ ಕರ್ನಾಟಕ: ಜು. 9, 2008)