ಅಕ್ಟೋಬರ್ 3, 2010

ಇಷ್ಟ ಸಾಧನೆಗಾಗಿ ಬರಿ ನೆಲದಲ್ಲಿ ಊಟ !

ಕಷ್ಟ ನಿವಾರಣೆಯಾಗಿ, ಸುಖ ಸಿಗುತ್ತದೆ ಎಂದಾದರೆ ಮಾನವ ಏನೂ ಮಾಡಲು ಸಿದ್ಧ. ಅದರಲ್ಲಿ ನಾಚಿಗೆ, ದಾಕ್ಷಿಣ್ಯ ಇಲ್ಲ; ಬಡವ ಬಲ್ಲಿದನೆಂಬ ಬೇಧವೂ ಇಲ್ಲ. ಅಂಥ ಒಂದು ವಿಶಿಷ್ಟ ಪದ್ಧತಿ ಉಡುಪಿಯಲ್ಲಿ ಆಚರಣೆಯಲ್ಲಿದೆ. ಅದೇ ಬರಿ ನೆಲದಲ್ಲಿ ಭೋಜನ ಕ್ರಮ!
ಊಟಕ್ಕೆ ಕುಳಿತುಕೊಳ್ಳುವ ಸ್ಥಳಶುದ್ಧಿ ಮಾಡಿ, ಎಲೆಯನ್ನು ಬಳಸದೇ ಬರಿ ನೆಲದಲ್ಲಿ ಎಲೆಯ ಮೇಲೆ ಬಡಿಸುವ ಎಲ್ಲಾ ಪರಿಕರಗಳನ್ನು ಬಡಿಸಲಾಗುತ್ತದೆ. ಯಾವ ಮುಜುಗರವೂ ಇಲ್ಲದೇ ಈ ಕ್ರಮದಲ್ಲಿ ಊಟ ಮಾಡುವವರು ಸುಗ್ರಾಸ ಭೋಜನ ಸವಿಯುತ್ತಾರೆ. ಶ್ರಾವಣ ಮಾಸದ ಶನಿವಾರಗಳಂದು ಈ ರೀತಿ ಊಟ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ಪದ್ಧತಿ ಎಂದು ಆರಂಭವಾಯಿತೆಂದು ಗೊತ್ತಿಲ್ಲ. ಇಂದಿಗೂ ಅದು ಚಾಲ್ತಿಯಲ್ಲಿದೆ. ಈ ಕ್ರಮದಲ್ಲಿ ಊಟ ಮಾಡಿ ತಮ್ಮ ಅರಿಕೆಯನ್ನು ದೇವರ ಸನ್ನಿಧಿಯಲ್ಲಿ ಹರಕೆ ಒಪ್ಪಿಸಿ ಕೃತಾರ್ಥರಾದವರು ನೂರಾರು ಮಂದಿ. ಅಲ್ಲಿ ಜಾತಿಯ ಅಡ್ಡಗೋಡೆಯಿಲ್ಲ, ಬಡವ- ಸಿರಿವಂತನೆಂಬ ಅಂತರವಿಲ್ಲ.
ಉಡುಪಿ, ಸಾಧಕರಿಗೆ ಸಾಧನಾಸ್ಥಳ. ಲೋಕಗುರು ಆಚಾರ್ಯ ಮಧ್ವರ ತಪೋಭೂಮಿಯೂ ಆಗಿರುವ ಇಲ್ಲಿ, ಕಷ್ಟ ನಿವಾರಿಸುವ ಅನಂತೇಶ್ವರ ದೇವರ ದಿವ್ಯ ಸನ್ನಿಧಾನ ಭಕ್ತರಿಗೆ ಆಪ್ಯಾಯಮಾನವಾಗಿದೆ. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣ ಪ್ರಧಾನ ಆಕರ್ಶಣೆ. ಆತನದು ಬಹು ಸುಂದರ ರೂಪ. ಅಷ್ಟಮಠದ ಯತಿಗಳು ಪ್ರತಿದಿನವೂ ವಿನೂತನ ಅಲಂಕಾರ ಮಾಡಿ ಪೂಜಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಭಾವೀಸಮೀರ ವಾದಿರಾಜ ಗುರು ಸಾರ್ವಭೌಮರು ಪ್ರತಿಷ್ಠಾಪಿಸಿದ ಮುಖ್ಯಪ್ರಾಣ ದೇವರು, ರಥಬೀದಿಯಲ್ಲಿ ಕಂಗೊಳಿಸುವ ಪ್ರಾಚೀನವಾದ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀಕೃಷ್ಣಮಠದ ಒಳಭಾಗದಲ್ಲಿರುವ ನಿರ್ಮಲ ಮಧ್ವ ಸರೋವರ, ಭೋಜನ ಶಾಲೆಯ ಮುಖ್ಯಪ್ರಾಣ ದೇವರು ಭಕ್ತಿಯ ಜಾಗೃತಿಯನ್ನು ನೀಡುತ್ತವೆ.
ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮನೆಂದೇ ಸುವಿಖ್ಯಾತ. ಇಲ್ಲಿ ನಿತ್ಯಾನ್ನದಾನ ಪುರಾತನದಿಂದ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಮಠ ಅತ್ಯಂತ ವಿಶಿಷ್ಟವಾದ ಪ್ರದೇಶ ಭೋಜನಶಾಲೆ ಹೊಂದಿದೆ. ಅಲ್ಲಿ ಮುಖ್ಯಪ್ರಾಣದೇವರ ದಿವ್ಯ ಸನ್ನಿಧಾನವೂ ಇದೆ. ಬುದ್ಧಿ- ಬಲ- ಯಶ- ಧೈರ್ಯ- ನಿರ್ಭಯತ್ವ- ಆರೋಗ್ಯ- ಜಾಢ್ಯ ನಿವಾರಣೆ- ವಾಕ್ಪಟುತ್ವಗಳಿಗಾಗಿ ಭಕ್ತರು ಈ ಸನ್ನಿಧಾನದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಾರೆ. ಮುಖ್ಯಪ್ರಾಣ ದೇವರ ಪ್ರಸನ್ನತೆಗಾಗಿ ನೆಲದಲ್ಲಿ ಊಟವನ್ನು ಮಾಡುವ ಸೇವೆ ಇಲ್ಲಿ ಪ್ರಧಾನ. ಶ್ರಾವಣ ಮಾಸದ ಶನಿವಾರಗಳಂದು ನೆಲದ ಊಟಕ್ಕಾಗಿ ಜನರ ಪ್ರವಾಹವೇ ಹರಿದುಬರುತ್ತದೆ.
ಪ್ರಸ್ತುತ ಭೋಜನಶಾಲೆಯ ಮುಖ್ಯಪ್ರಾಣ ವಿಗ್ರಹ ಜೋಡುಟ್ಟೆಯಲ್ಲಿತ್ತು. (ಈಗ ಪರ್ಯಾಯೋತ್ಸವ ಮೆರವಣಿಗೆ ಆರಂಭವಾಗುವ ಸ್ಥಳ) ನಿತ್ಯ ಪೂಜೆಯ ವ್ಯವಸ್ಥೆಗಾಗಿ ಆ ಬಳಿಕ ಕೃಷ್ಣಮಠಕ್ಕೆ ಸ್ಥಳಾಂತರಿಸಲಾಯಿತು. ಸುಮಾರು 100 ವರ್ಷಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀಸಾಗರತೀರ್ಥ ಶ್ರೀಪಾದರು ವಿಗ್ರಹ ಸ್ಥಳಾಂತರ ಮಾಡಿ, ಪ್ರತಿಷ್ಠಾಪಿಸಿದರು. ಕಾರಣೀಕಕ್ಕೆ ಹೆಸರಾದ ಮುಖ್ಯಪ್ರಾಣ ದೇವರ ಅಖಂಡ ಸೇವೆಯಿಂದ ವಿಶೇಷ ಫಲವನ್ನೂ ಪಡೆದರು. ಅಂದಿನಿಂದ ಈ ಸನ್ನಿಧಿಯಲ್ಲಿ ವಿಶೇಷ ಪೂಜೆ, ಸೇವೆಗಳು ಪ್ರಾರಂಭಗೊಂಡವು. ಇಂದಿಗೂ ಇಲ್ಲಿ ಸಲ್ಲಿಸಿದ ಸೇವೆಗಳಿಂದ ಭಕ್ತರು ಕಷ್ಟಗಳನ್ನು ಕಳೆದುಕೊಂಡ ನಿದರ್ಶನಗಳು ಬಹಳಷ್ಟಿವೆ.

(ಸಂಯುಕ್ತ ಕರ್ನಾಟಕ: ಜು. 25, 2009)

ಕುಡುಬಿಯರ ವಿಶಿಷ್ಟ ಹೋಳಿ

ಗೋವಾ ಮೂಲದ, ಕುಡುಬಿ ಜನಾಂಗದವರ ಹೋಳಿ ಹಬ್ಬ ಆಚರಣೆಯಲ್ಲಿ ಅವರದೇ ಆದ ವೈಶಿಷ್ಟ್ಯವಿದೆ. ಅವರು ಹೋಳಿಯನ್ನು ತಮ್ಮದೇ ಆದ ರೀತಿಯಲ್ಲಿ ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಜಾನಪದ ಸೊಗಡಿದೆ, ಅವರದ್ದೇ ಆದ ವಿಧಿ- ವಿಧಾನಗಳಿವೆ.
ಉಡುಪಿ ಮತ್ತು ದ. ಕ. ಜಿಲ್ಲೆಗಳ ಕೆಲವೆಡೆಗಳಲ್ಲಿ ಕುಡುಬಿಯರು ವಾಸವಾಗಿದ್ದಾರೆ. ಅವರಲ್ಲಿ ಎರಡು ಪಂಗಡಗಳಿವೆ. ಅವರಾಡುವ ಭಾಷೆಯಲ್ಲೂ ಕೊಂಚ ವ್ಯತ್ಯಾಸ ಉಂಟು. ಬ್ರಹ್ಮಾವರ ಸಮೀಪದ ಸುರಾಲು, ಹೆಬ್ರಿ ಪರಿಸರದಲ್ಲಿ ಕುಡುಬಿ ಜನಾಂಗದವರು ಇದ್ದಾರೆ. ಆದರೆ, ಕೊಡಿಯಾಲ ಕುಡುಬಿಯರೆಂದು ಕರೆಯಲ್ಪಡುವ ದ. ಕ. ಜಿಲ್ಲೆಯ ಮೂಡುಬಿದಿರೆ ಪರಿಸರದ ಅಶ್ವತ್ಥಪುರ, ವಂಟಿಮಾರು, ಕೊಲತ್ತಾರು, ಕೊಂಪದವು, ಎಡಪದವು, ಮುಚ್ಚೂರು, ಮಂಜನಬೈಲು, ಬಜ್ಪೆ ಸಮೀಪದ ಕುಡುಬಿಪದವು ಮೊದಲಾದ ಕಡೆಗಳಲ್ಲಿ ವಾಸವಾಗಿರುವ ಕುಡಿಬಿಯರ ಹೋಳಿ ಆಚರಣೆಗಿಂತ ಸೂರಾಲು ಪರಿಸರದ ಕುಡುಬಿಯರ ಹೋಳಿ ಆಚರಣೆಯಲ್ಲಿ ಕೊಂಚ ವ್ಯತ್ಯಾಸವಿದೆ.
ಪೋರ್ಚುಗೀಸರ ಉಪಟಳ ತಾಳಲಾರದೇ ಗೋವಾದಿಂದ ವಲಸೆ ಬಂದ ಕುಡುಬಿ ಜನಾಂಗ ಕೃಷಿಯನ್ನೇ ನಂಬಿದವರು. ಸಾಹಸಿಗರೂ, ನಂಬಿಗಸ್ಥರೂ ಆಗಿರುವ ಈ ಜನಾಂಗ ಆರಂಭದಲ್ಲಿ ಬಾರಕೂರು ಪ್ರದೇಶದಲ್ಲಿ ನೆಲೆಯಾಯಿತು. ಅಂದು ಸೂರಾಲು ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಸುರೇಂದ್ರ ತೋಳಾರ್ ಎಂಬಾತ ವಲಸೆ ಕುಡುಬಿ ಜನಾಂಗದವರಿಗೆ ಆಶ್ರಯ ನೀಡಿದ. ಬಳಿಕ ಆ ಜನಾಂಗ ಮಂಗಳೂರು ಕಡೆಗೆ ವಲಸೆಹೋಯಿತು. ಮಂಗಳೂರು ಕಡೆಗೆ ತೆರಳಿದ ಕುಡುಬಿಯರು `ಕೊಡಿಯಾಲ ಕುಡುಬಿ' ಎಂದು ಕರೆಯಲ್ಪಟ್ಟು, ಗೌಡ ಉಪನಾಮ ಹೊಂದಿದರು. ಸೂರಾಲು ಪ್ರದೇಶದ ಕುಡುಬಿಯರಿಗೆ ನಾಯ್ಕ ಎಂಬ ಉಪನಾಮವಿದೆ. ಇವರೀರ್ವರ ಭಾಷೆ ಕೊಂಕಣಿಯನ್ನು ಹೋಲುವ ಕುಡುಬಿ ಭಾಷೆಯಾಗಿದ್ದರೂ ಸ್ವಲ್ಪ ವ್ಯತ್ಯಾಸವಿದೆ.
ಹೋಳಿಹಬ್ಬವನ್ನು 5 ದಿನಗಳ ಪರ್ಯಂತ ವಿಶಿಷ್ಟವಾಗಿ ಆಚರಿಸುವ ಈ ಜನಾಂಗ ಅದಕ್ಕಾಗಿ ಹೋಳಿ ಹುಣ್ಣಿಮೆಯ ಮುಂಚಿನ ಏಕಾದಶಿಯಿಂದಲೇ ಸಿದ್ಧತೆ ನಡೆಸುತ್ತಾರೆ. ಕುಡುಬಿ ಜನಾಂಗದ ಪುರುಷರು ಆಬಾಲ ವೃದ್ಧರಾದಿಯಾಗಿ ಸರ್ವರೂ ಅದರಲ್ಲಿ ಭಾಗವಹಿಸುತ್ತಾರೆ. ಹೆಂಗಳೆಯರ ವೇಷ ತೊಡುತ್ತಾರೆ. ತಲೆಗೆ ಮುಂಡಾಸು, ಅಬ್ಬಲಿಗೆ (ಕನಕಾಂಬರ) ಹೂ ದಂಡು, `ಹಟ್ಟಿಮುದ್ದ' ಎಂಬ ಹಕ್ಕಿಯ ಗರಿ (ಇದು ಕೊಡಿಯಾಲ ಕುಡುಬಿಯರಲ್ಲಿ ಇಲ್ಲ) ತೊಡುತ್ತಾರೆ. ಗುಮ್ಟಾ ಎಂಬ ಉಡದ ಚರ್ಮ ಬಿಗಿದ ಘಟವನ್ನು ಹೋಲುವ ಮಡಕೆಯ ವಿಶಿಷ್ಟ ವಾದನವನ್ನು ನುಡಿಸಿ ರಾಮಾಯಣ ಕಥೆ ಹೇಳುತ್ತಾರೆ. ಜೊತೆಗೆ ವಿಶಿಷ್ಟ ಹೆಜ್ಜೆಹಾಕುತ್ತಾರೆ. ತಮಗೆ ಆಸರೆ ನೀಡಿದ ಸುರೇಂದ್ರ ತೋಳಾರ್ನನ್ನು ಸ್ಮರಿಸುತ್ತಾರೆ.
ಸೂರಾಲು ಕುಡುಬಿಯರ ಆರಾಧ್ಯ ದೈವ ಮಲ್ಲಿಕಾರ್ಜುನ ಅಥವಾ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಥಮ ಗುಮ್ಟಾ ನರ್ತನ ಮಾಡಿ, ಬಳಿಕ ತಮ್ಮ ಸಮುದಾಯದ `ಗುರಿಕಾರ'ನ ಮನೆಯಲ್ಲಿ ಕುಣಿಯುತ್ತಾರೆ. ತಮ್ಮ ಸಮುದಾಯ ಹಾಗೂ ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುತ್ತಾರೆ. ಕೋಲಾಟ ಕುಣಿಯುತ್ತಾರೆ. ಹುಣ್ಣಿಮೆಯಂದು ಹೋಳಿ ಆಚರಿಸಿ, ಮಾರಿ ಓಡಿಸಿ, ಬೆಂಕಿಹಾಯುತ್ತಾರೆ. ಈ ದಿನಗಳಲ್ಲಿ ಸಸ್ಯಾಹಾರಿಗಳಾಗಿರುವ ಅವರು, ಹೋಳಿ ಹಬ್ಬದಾಚರಣೆ ಬಳಿಕ ಕಾಡುಬೇಟೆ ನಡೆಸುತ್ತಾರೆ. ಇದು ವಾಡಿಕೆ.
ಈ ಪದ್ಧತಿಯನ್ನು ಈಗೀಗ ಸುಶಿಕ್ಷಿತರಾಗುತ್ತಿರುವ ವಿದ್ಯಾವಂತರೂ ಅನುಸರಿಸುತ್ತಿದ್ದಾರೆ. ಇದು ಮೆಚ್ಚಲೇಬೇಕಾದ ಸಂಗತಿ

(ಸಂಯುಕ್ತ ಕರ್ನಾಟಕ: ಮಾ. 11. 2009)

ಸೆಪ್ಟೆಂಬರ್ 5, 2010

ಸುರ್ಯದ `ಮೃತ್ಯುಂಜಯ'ನಿಗೆ ಮಣ್ಣೇ ಹರಕೆ!


ಬಾಗಲಕೋಟೆ ಪಾತವ್ವ (ಹೆಸರು ಬದಲಾಯಿಸಲಾಗಿದೆ)ಳಿಗೆ ಮದುವೆಯಾಗಿ ವರ್ಷ ಹತ್ತಾದರೂ ಅವಳಿಗಿನ್ನೂ ತೊಟ್ಟಿಲು ತೂಗುವ ಭಾಗ್ಯ ಬಂದೊದಗಿರಲಿಲ್ಲ. `ಬಂಜೆ' ಎಂಬ ಪಟ್ಟ ಕಟ್ಟಿಸಿಕೊಂಡ ಆಕೆಗೆ ನಾಟಿ ವೈದ್ಯರ ಮದ್ದು ಮಾಡಿದ್ದಾಯಿತು. ಕಂಡ ಕಂಡ ದೇವರಿಗೆ ಪೂಜೆ ಮಾಡಿಸಿಯಾಯಿತು. ವ್ರತ, ಪೂಜೆಗೆ ಹಣ ಖರ್ಚು ಮಾಡಿದ್ದೇ ವಿನ: ಪ್ರಯೋಜನ ಶೂನ್ಯ. ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದಾಗ ಗಂಡ- ಹೆಂಡತಿ ಇಬ್ಬರಲ್ಲೂ ದೈಹಿಕ ದೋಷವಿದ್ದು, ಮಕ್ಕಳಾಗುವ ಯೋಗ ಶೇ. 60ರಷ್ಟು ಮಾತ್ರ. ಲಕ್ಷಾಂತರ ರೂ. ಖರ್ಚು ಮಾಡಿದರೆ ಸಂತಾನಭಾಗ್ಯ ಲಭಿಸಲೂಬಹುದು. ಆದರೂ ಅದು ಗ್ಯಾರಂಟಿಯ ಮಾತಲ್ಲ ಎಂದ ವೈದ್ಯರ ಮಾತು ಕೇಳಿ ಅವರು ಸುಸ್ತಾಗಿದ್ದರು. ತಮಗೆ ವಂಶಾಭಿವೃದ್ಧಿಯ ಕುಡಿಯ ಯೋಗವಿಲ್ಲ ಎಂದು ಹತಾಶರಾದ ಆ ದಂಪತಿ ದತ್ತು ಸ್ವೀಕರಿಸಲು ಮುಂದಾಗಿದ್ದಾಗ ದೂರದ ಸಂಬಂಧಿಯೋರ್ವರು ಹೇಳಿದರು- ಸುರ್ಯಕ್ಕೆ ಹೋಗಿ ಅರಿಕೆ ಮಾಡಿಕೊಂಡು ಬಂದಲ್ಲಿ ಮಕ್ಕಳಾಗುತ್ತದೆ ಎಂದು! ಅದೇ ರೀತಿ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಬಂದು ಅಲ್ಲಿನ ದೇವರಲ್ಲಿ ಶ್ರದ್ಧಾಭಕ್ತಿಯಿಂದ ಅರಿಕೆ ಮಾಡಿಕೊಂಡ ತರುವಾಯ ಅವರಿಗೆ ಮಗುವಾಯಿತು!!
ಇದು ಕೇವಲ ಪಾತವ್ವನ ಕಥೆಯಲ್ಲ. ಸುರ್ಯ ದೇವಾಲಯಕ್ಕೆ ಇಂಥದೇ ಸುದ್ದಿ ಹೊತ್ತು ನೂರಾರು ಜನ ಬರುತ್ತಾರೆ. ಕೆಲವರು ಅರಿಕೆ ಮಾಡಲೆಂದೇ ಬಂದರೆ, ಮತ್ತೂ ಹಲವರು ತಮ್ಮ ಅರಿಕೆಯ ಫಲ ಲಭಿಸಿತು ಎಂಬ ಸಂತಸದಿಂದ ದೇವರಿಗೆ ಹರಕೆಯೊಪ್ಪಿಸಲು ಬರುತ್ತಿದ್ದಾರೆ. ಅಲ್ಲಿಗೆ ಬರುತ್ತಿರುವ ಸಾವಿರಾರು ಭಕ್ತರ ಅರಿಕೆ, ಹರಕೆಯಲ್ಲೂ ವಿಧಗಳುಂಟು.
ಸುರ್ಯದ ದೇವರಿಗೆ ಭಕ್ತರ ಹಣ, ಒಡವೆ ಇತ್ಯಾದಿ ಯಾವುದೂ ಬೇಡ. ಆತನಿಗೆ ಬೇಕಾಗಿರುವುದು ಮಣ್ಣು ಮಾತ್ರ. ಸುರ್ಯದ ಮೃತ್ಯುಂಜಯ ರೂಪಿ ಶ್ರೀ ಸದಾಶಿವ ರುದ್ರ ಮೃತ್ತಿಕೆ ಸಮರ್ಪಣೆಯಿಂದಲೇ ಸಂತೃಪ್ತ! ಭಕ್ತರ ಅರಿಕೆ ಮಣ್ಣಿನ ಮೂರ್ತರೂಪ ಪಡೆದು ಅಲ್ಲಿನ ದೇವರಿಗೆ ಸಮರ್ಪಿತವಾದಾಗಲೇ ಭಕ್ತರ ಹರಕೆ ಪರಿಪೂರ್ಣ.
ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ `ಸುರಿಯ' ಅಥವಾ `ಸುರ್ಯ' ಕ್ಷೇತ್ರ ತನ್ನ ವೈಶಿಷ್ಟ್ಯದಿಂದಲೇ ಪ್ರಸಿದ್ಧಿ ಪಡೆದಿದೆ. ತಮ್ಮ ಅಭೀಷ್ಟಗಳು ಈಡೇರಿದಾಗ ಅವುಗಳನ್ನು ಸಂಕೇತಿಸುವ ಮಣ್ಣಿನ ಮಾದರಿಯೊಂದನ್ನು ಹರಕೆಯ ರೂಪದಲ್ಲಿ ಸಮರ್ಪಿಸುವ ಅನಾದೃಶ ಸಂಪ್ರದಾಯವೊಂದು ಅಲ್ಲಿದೆ. ಜನರ ಮನಸ್ಸಿನ ಅನೇಕಾನೇಕ ಮನಸ್ಸಿನ ಅನೇಕಾನೇಕ ಇಚ್ಛೆಗಳಂತೆ ಅಲ್ಲಿ ಸಮರ್ಪಿತವಾಗುವ ಮಣ್ಣಿನ ಗೊಂಬೆಗಳೂ ವೈವಿಧ್ಯಮಯ. ಸುರ್ಯ ಕ್ಷೇತ್ರ ಐತಿಹಾಸಿಕ ದೃಷ್ಟಿಯಿಂದಲೂ ಮಹತ್ವ ಪಡೆದ ಕಾರಣೀಕ ಕ್ಷೇತ್ರ. ಈ ಪರಿಯ ಕ್ಷೇತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಪ್ರಾಯಶ: ಇನ್ನೊಂದೆಡೆ ಇಲ್ಲ.

ದಾರಿ ಯಾವುದಯ್ಯಾ ಸುರ್ಯಕೆ?
ಮೃಣ್ಮಯ ಮೂರ್ತಿ ಸಮರ್ಪಣೆಯ ಖ್ಯಾತಿಯ ಸುರ್ಯ ದ. ಕ. ಜಿಲ್ಲೆಯಲ್ಲಿದೆ. ಧರ್ಮಸ್ಥಳ ಸಮೀಪದ ಉಜಿರೆಯಿಂದ 4 ಕಿ. ಮೀ. ಉತ್ತರಕ್ಕೆ ಈ ಕ್ಷೇತ್ರವಿದೆ. ಉಜಿರೆಯಿಂದ ಸುರ್ಯಕ್ಕೆ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ಸುಮಾರು 1,200 ವರ್ಷಗಳಷ್ಟು ಪುರಾತನವಾದ ಈ ದೇವಳ ಈಚೆಗಷ್ಟೇ ನವೀಕರಣಗೊಂಡಿದೆ. ಸುರಿಯ ಎಂಬ ಪುರಾತನ ಹೆಸರುಳ್ಳ ಆ ಹೆಸರು ಬರಲು ಕಾರಣ- ಹಿಂದೊಮ್ಮೆ ಹೆಂಗಸೊಬ್ಬಳು ತನ್ನ ಮಗುವಿನೊಂದಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಳ ಕೈಯಲ್ಲಿದ್ದ ಕತ್ತಿ (ಕುಡುಗೋಲು) ಕಲ್ಲಿಗೆ ತಾಗಿ ಆ ಕಲ್ಲಿನಿಂದ ರಕ್ತ ಚಿಮ್ಮಿತು. ಅದನ್ನು ಕಂಡು ಗಾಬರಿಗೊಂಡ ಮಹಿಳೆ 'ಓ, ಸುರೆಯ...' ಎಂದು ತನ್ನ ಮಗುವನ್ನು ಕರೆದಳು. ಆ ಘಟನೆ ಬಳಿಕ ಆ ಸ್ಥಳಕ್ಕೆ ಸುರೆಯ ಎಂಬ ಹೆಸರಾಯಿತು. ಬಳಿಕ ಸುರಿಯ, ಸುರ್ಯ ಎಂದು ನಾಮಾಂತರಗೊಂಡಿತು ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗೆಯ ಕಥೆಗಳು ದ. ಕ. ಜಿಲ್ಲೆಯ ಅನೇಕ ಪುರಾತನ ದೇವಾಲಯಗಳಲ್ಲೂ ಚಾಲ್ತಿಯಲ್ಲಿವೆ.
ಅಪ್ಪಟ ಜನಪದೀಯ ಸಂಸ್ಕೃತಿ ಸುರ್ಯದಲ್ಲಿದೆ. `ಮಣ್ಣಿನ ಹರಕೆ' ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ವಿಶಿಷ್ಟ ಹರಕೆಯ ಸಂಪ್ರದಾಯ. ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶವಿದೆ. ದೇವರ ಸೇವೆ ಮಾಡಲು ಶಕ್ತಿ ಇಲ್ಲದವರೂ ಹಿಡಿ ಮಣ್ಣನ್ನು ಸಮರ್ಪಿಸಿ ಕೃತಕೃತ್ಯತೆಯನ್ನು ಪಡೆಯುವ ವಿಶಿಷ್ಟ ಕ್ಷೇತ್ರವಿದು.
ಈ ದೇವಳದಲ್ಲಿ ಹರಕೆ ಹಾಕುವ ಸ್ಥಳವನ್ನು `ಹರಕೆ ಬನ' ಅಥವಾ `ಅಮ್ಟಾಡಿ ಬನ' ಎಂದು ಕರೆಯುತ್ತಾರೆ. ಈ ಬನದಲ್ಲಿ ಹಲವಾರು ಮರಗಳ ನಡುವೆ ವಿವಿಧ ರೀತಿಯ ಮಣ್ಣಿನ ಮೂರ್ತಿಗಳ ಒಂದು ದೊಡ್ಡ ರಾಶಿಯನ್ನೇ ಕಾಣಬಹುದು. ಭೂಮಿಯ ಮೇಲ್ಗಡೆ ಹರಡಿದ ಲಕ್ಷ ಲಕ್ಷ ಗೊಂಬೆಗಳಲ್ಲದೇ ಭೂಮಿಯ ಅಡಿಯಲ್ಲಿಯೂ 4 ಅಡಿ ಆಳದಿಂದಲೂ ಈ ಗೊಂಬೆಗಳ ರಾಶಿ ಹರಡಿದೆ. ಈ ರಾಶಿಯ ಮಧ್ಯಭಾಗದಲ್ಲಿ 2 ಲಿಂಗಗಳನ್ನು ಕಾಣಬಹುದು. ಈ ಲಿಂಗಗಳು ಶಿವ ಪಾರ್ವತಿಯರ ಲಿಂಗಗಳಾಗಿವೆ.

ಮಹರ್ಷಿಯ ತಪೋಭೂಮಿ
ಹಲವಾರು ವರ್ಷಗಳ ಹಿಂದೆ ಭೃಗು ಮಹರ್ಷಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಆತನ ತಪಕ್ಕೆ ಒಲಿದು ಈಶ್ವರ ಪಾರ್ವತಿಯರು ಪ್ರತ್ಯಕ್ಷರಾದರು. ಮುಂದೆ ಆ ಸ್ಥಳದಲ್ಲಿ ಶಿವ- ಪಾರ್ವತಿಯರ ಲಿಂಗಗಳು ಉದ್ಭವವಾದವು ಎಂದು ಅಲ್ಲಿನ ಸ್ಥಳಪುರಾಣ ಹೇಳುತ್ತದೆ. ಈ ಲಿಂಗಗಳ ಸಮೀಪದಲ್ಲಿ ಎರಡು ಪಾದಗಳಿದ್ದು, ಅವು ಭೃಗು ಮಹರ್ಷಿಯದು ಎಂದು ಹೇಳುತ್ತಾರೆ. ಕಾಲಾಂತರದಲ್ಲಿ ಬನದಲ್ಲಿದ್ದ ದೇವತಾ ಸಾನ್ನಿಧ್ಯ ಸ್ಥಾನಾಂತರಗೊಂಡು ಈಗ ಕಾಣುವ ದೇವಸ್ಥಾನದಲ್ಲಿ ನೆಲೆಗೊಂಡು ಬಳಿಕ ಅದಕ್ಕೊಂದು ದೇವಸ್ಥಾನದ ರೂಪ ಬಂತೆಂದು ಹೇಳಲಾಗಿದೆ. ಇನ್ನೊಂದು ಸ್ಥಳ ಪುರಾಣ ಪ್ರಕಾರ ದೇವಳದೆದುರಿನ `ದೇವರಗುಡ್ಡ'ದಿಂದ ಈಗಿನ ಸ್ಥಳಕ್ಕೆ ದೇವರು ಬಂದರೆಂಬ ನಂಬಿಕೆಯೂ ಇದೆ.

ದೇವಸ್ಥಾನ ನಿರ್ಮಾಣ
ಶ್ರೀಕ್ಷೇತ್ರದ ಮೂಲದೈವವಾದ ಶ್ರೀ ಸದಾಶಿವ ರುದ್ರ ದೇವರ ಪ್ರತಿಷ್ಠಾಪನೆ ಸುಮಾರು 1 ಸಾವಿರ ವರ್ಷ ಹಿಂದೆ ಮಾಡಲಾಗಿದೆ ಎಂದು ತಿಳಿದುಬರುತ್ತದೆ. ಆದರೆ, ಆ ಬಗ್ಗೆ ದೇವಳದಲ್ಲಿ ಯಾವುದೇ ಸ್ಪಷ್ಟ ದಾಖಲೆ, ಪುರಾವೆಗಳಿಲ್ಲ. ದೇವರ ಸನ್ನಿಧಿಯ ತೀರ್ಥಮಂಟಪದಲ್ಲಿರುವ ನಂದಿ ಮೂರ್ತಿಯನ್ನು ಕ್ರಿ. ಶ. 1497ರಲ್ಲಿ ಪ್ರತಿಷ್ಠಾಪಿಸಲಾಯಿತೆಂಬ ಶಿಲಾಲೇಖನವಿದೆ. ಈ ಶಿಲಾ ಲೇಖನದಲ್ಲಿ ಲಕ್ಷ್ಮಪ್ಪ ಅರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿ ಸಂಕಪ್ಪ ಅತಿಕಾರಿ ಮಗ ನಾರಾಯಣ ಸೇನ ಬೊವಾ ಎಂಬಾತ ಸುರ್ಯ ದೇವರ ಸನ್ನಿಧಿಯಲ್ಲಿ ನಂದಿಕೇಶ್ವರ ಪ್ರತಿಷ್ಠಾಪಿಸಿದರೆಂದು ಬರೆಯಲಾಗಿದೆ. ಅಮೃತ ಪಡಿ ನೈವೇದ್ಯಕ್ಕಾಗಿ ಇಮ್ಮಡಿ ಲಕ್ಷ್ಮಪ್ಪ ಬಂಗ ಒಡೆಯ 32 ಮುಡಿ ಹುಟ್ಟುವಳಿ ಗದ್ದೆ ಉಂಬಳಿ ಬಿಟ್ಟ ಬಗ್ಗೆ ಉಡುಪಿ ಪೇಜಾವರ ಮಠದಲ್ಲಿ ತಾಮ್ರ ಶಾಸನ ಇದೆ ಎಂದು ತಿಳಿದುಬಂದಿದೆ.

ಮಣ್ಣಿನ ಹರಕೆ
ದೇವಳದೆದುರಿನ ಬನ ಹರಕೆ ಬನವೆಂದೇ ಪ್ರಸಿದ್ಧ. ಅರಿಕೆಗಾಗಿ ಕ್ಷೇತ್ರಕ್ಕೆ ಬರುವ ಭಕ್ತರು ಮೊದಲಿಗೆ ಬನಕ್ಕೆ ತೆರಳಿ ಅಲ್ಲಿ ಅರಿಕೆ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯಬೇಕೆಂಬುದು ಇಲ್ಲಿನ ನಿಯಮ. ಮಣ್ಣಿನ ಮೂರ್ತಿ ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ. ನೂರಾರು ವರ್ಷಗಳಿಂದ ಜನರು ಇಲ್ಲಿ ಸಲ್ಲಿಸಿದ ಹರಕೆಗಳ ರಾಶಿ ಬಹು ಎತ್ತರಕ್ಕೆ ಬೆಳೆದಿದೆ. ವೈವಿಧ್ಯಪೂರ್ಣವಾದ ಮಣ್ಣಿನ ಮೂರ್ತಿಗಳನ್ನಿಲ್ಲಿ ಕಾಣಬಹುದು. ನಾನಾ ವಿಧದ ಕಷ್ಟಕಾರ್ಪಣ್ಯಗಳಿಗೆ ಒಳಗಾದ ಜನ ಇಲ್ಲಿಗೆ ಬಂದು ಮೌನವಾಗಿ ಭಕ್ತಿಯಿಂದ ತಮ್ಮ ಸಮಸ್ಯೆಗಳನ್ನು ಭಗವಂತನಲ್ಲಿ ನಿವೇದಿಸಿ ಇದರ ಪರಿಹಾರವಾದೊಡನೆ ಅದಕ್ಕೆ ಸಂಬಂಧಿಸಿದ ಮಣ್ಣಿನ ಮೂರ್ತಿಯನ್ನು ಈ ಬನದಲ್ಲಿ ತಂದೊಪ್ಪಿಸುತ್ತಾರೆ. ಇದರ ವಿಧಿ ವಿಧಾನಗಳು ಬಲು ಸರಳ. ತಮ್ಮ ಊರಿನ ಕುಂಬಾರರಲ್ಲಿ ಅಪೇಕ್ಷಿತ ಮೂರ್ತಿ ಮಾಡಿಸಿ ತಂದು ಹಾಕಬಹುದು. ಅಥವಾ ತಾವೇ ತಮ್ಮಿಷ್ಟದ ಪ್ರಕಾರ ಬೊಂಬೆ ತಯಾರಿಸಿ ತಂದು ಹಾಕುವವರೂ ಇದ್ದಾರೆ. ಎರಡು ವಾರ ಮುಂಚಿತವಾಗಿ ದೇವಸ್ಥಾನದ ಆಫೀಸಿನಲ್ಲಿ ತಿಳಿಸಿದರೆ ಅಪೇಕ್ಷಿತ ವಿಗ್ರಹ ತಯಾರಿಸಿ ಒದಗಿಸುವ ವ್ಯವಸ್ಥೆ ಇದೆ.

ಮಣ್ಣಿನ ಮೂರ್ತಿಗಳ ವಿರಾಟ್ಸ್ವರೂಪ
ಸುರ್ಯ ಸದಾಶಿವ ರುದ್ರ ಪ್ರಸಿದ್ಧವಾಗಿರುವುದೇ ಇಲ್ಲಿನ ಮಣ್ಣಿನ ಮೂರ್ತಿಗಳಿಂದ. ಆತ ದುರ್ಬಲರ ದೇವತೆ. ಈತನನ್ನು ಪ್ರಾರ್ಥಿಸಿಕೊಂಡರೆ ಅಭೀಷ್ಟ ಈಡೇರುವುದು ಗ್ಯಾರಂಟಿ ಎಂಬುದು ಅಲ್ಲಿನ ಭಕ್ತಾದಿಗಳ ನಂಬುಗೆ. ಹರಕೆ ಹಾಕುವ ಬನದಲ್ಲಿ ಕಾಣುವ ನೋಟವೇ ಅದಕ್ಕೆ ಸಾಕ್ಷಿ. ವೈವಿಧ್ಯಮಯ ಮೂರ್ತಿಗಳ ಬ್ರಹ್ಮಾಂಡದ ವಿರಾಟ್ದರ್ಶನವೇ ಅಲ್ಲಿ ನೋಡುಗರಿಗಾಗುತ್ತದೆ. ಜೀವಂತ ಪ್ರಾಣಿಗಳ ಹಾಗೂ ನಿರ್ಜೀವ ವಸ್ತುಗಳ ಮಣ್ಣಿನ ಪ್ರತಿಕೃತಿಗಳು ಅಲ್ಲಿ ಕಾಣಸಿಗುತ್ತವೆ. ಅದು ಮನುಷ್ಯನ ಅಂಗಾಂಗಗಳಿರಬಹುದು, ಮನೆ ಇತ್ಯಾದಿ ಕಟ್ಟಡಗಳಿರಬಹುದು, ಕಚೇರಿ, ನೌಕರಿಯನ್ನು ಪ್ರತಿನಿಧಿಸುವ ಪೆನ್ನು- ಟೇಬಲ್- ಕುರ್ಚಿಗಳು, ಮಕ್ಕಳಾಗುವ ಬಯಕೆಯ ಅರಿಕೆ ಮಾಡಿ ಹರಕೆ ತೀರಿಸಿದ ತೊಟ್ಟಿಲು- ಮಗು ಪ್ರತಿಕೃತಿಗಳು ಕಂಡುಬರುತ್ತವೆ. ಈಚೆಗಷ್ಟೇ ಅಲ್ಲಿ ಮೊಬೈಲ್ನ ಪ್ರತಿಕೃತಿಯೊಂದನ್ನು ಹರಕೆ ತೀರಿಸಲು ತಂದಿದ್ದರು. ಕಳೆದುಹೋಗಿದ್ದ ತಮ್ಮ ಮೊಬೈಲ್ ಬೊಂಬೆಯಂತೆ ಅದು. ಹರಕೆಯ ಮಟ್ಟ ಆ ಪರಿ ತಲುಪಿದೆ!

(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ: ಜೂ. 15, 2008)

ಉಡುಪಿ ಪರ್ಯಾಯ ನಾಡಹಬ್ಬ ಮೆರುಗಿನ ಸಾಂಸ್ಕೃತಿಕ ಉತ್ಸವ


ಶ್ರೀಕೃಷ್ಣ, ಕಲಿಯುಗದ ಹೆದ್ದೈವ. `ನನ್ನ ಭಕ್ತರು ಎಂದೂ ನಿರಾಶರಾಗುವುದಿಲ್ಲ' ಎಂದು ಭಕ್ತನಾದ ಅರ್ಜುನನಿಂದ ಪ್ರತಿಜ್ಞೆ ಮಾಡಿಸಿದ ಕರುಣಾಳು ಆತ. ಅವನಿಗೆ ಬಲ್ಲಿದ ಭೀಷ್ಮಾಚಾರ್ಯರೂ, ಬಡವ ಸುದಾಮನೂ ಸಮಾನ. ಅದಕ್ಕಾಗಿಯೇ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಉಡುಪಿಯ ಶ್ರೀಕೃಷ್ಣ, ವಿಶ್ವಕರ್ಮ ಕೆತ್ತಿದ ರುಕ್ಮಿಣೀ ಕರಾರ್ಚಿತನಾದ ಪವಿತ್ರ ಪ್ರತಿಮೆ. ಅದರಲ್ಲಿ ಶ್ರೀಮದಾಚಾರ್ಯರ ಭಕ್ತಿಯ ಕರೆಗೆ ಓಗೊಟ್ಟು ಶ್ರೀಕೃಷ್ಣ ನೆಲೆ ನಿಂತಿದ್ದಾನೆ. ಅದಕ್ಕೆ ಶ್ರೀ ವಾದಿರಾಜರು, ಕನಕ- ಪುರಂದರರು ಸಾಕ್ಷಿ. ಆದ್ದರಿಂದಲೇ ಇಲ್ಲಿ ಮಾಡಿದ ಪ್ರಾರ್ಥನೆ ಶ್ರೀಕೃಷ್ಣನ ಕಿವಿಗೆ ಮುಟ್ಟುತ್ತದೆ; ನೀಡಿದ ಸೇವೆ ಕೃಷ್ಣಾರ್ಪಣವಾಗುತ್ತದೆ ಎಂಬ ನಂಬಿಕೆ ಇದೆ.
ರೂಪ್ಯ ಪೀಠಂ ಕುಮಾರಾದ್ರಿಃ ಕುಂಭಾಶಿ ಚ ಧ್ವಜೇಶ್ವರಃ /
ಕ್ರೋಢ ಗೋಕರ್ಣ ಮೂಕಾಂಬಾಃ ಸಪ್ತೈತೇ ಮೋಕ್ಷದಾಯಿಕಾಃ //

ಪರಶುರಾಮ ಸೃಷ್ಟಿಯ ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಕೊಲ್ಲೂರು, ಗೋಕರ್ಣ- ಈ ಸಪ್ತಕ್ಷೇತ್ರಗಳು ಪುಣ್ಯಕ್ಷೇತ್ರಗಳು. ಅವುಗಳಲ್ಲಿ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಗೋಕರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಉಳಿದ ಐದು ಪುಣ್ಯತಮ ತಾಣಗಳಿರುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯನ್ನು ರೂಪ್ಯಪೀಠ ಎಂದೂ, ರಜತಪೀಠ ಎಂದೂ ಕರೆಯುತ್ತಿದ್ದರು. ತುಳುವಿನಲ್ಲಿ ಉಡುಪಿಯನ್ನು ಒಡಿಪು ಎಂದೂ ಕರೆಯುತ್ತಾರೆ. ಉಡುಪಿಯಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿರುವ ಪಾಜಕದಲ್ಲಿ ಜನಿಸಿ, ದ್ವೈತಮತ ಸ್ಥಾಪಿಸಿದ ಆಚಾರ್ಯ ಮಧ್ವರಿಂದ ಉಡುಪಿ ಮತ್ತಷ್ಟು ಖ್ಯಾತಿಯನ್ನು ಪಡೆಯಿತು. ಅವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಈ ಕುರಿತು ಅನೇಕ ಕಥೆಗಳಿವೆ. ಅವುಗಳಲ್ಲಿ ಪ್ರಖ್ಯಾತವಾಗಿರುವುದು ಈ ಕಥೆ.

ಉಡುಪಿ ಕೃಷ್ಣನ ಕಥೆ:
ಸರಕು ಸಾಗಿಸುವ ಹಡಗು ಸಮುದ್ರದಲ್ಲಿ ಕಲ್ಲುಬಂಡೆಗೆ ಬಡಿಯುವ ಆಘಾತಕಾರಿ ಸನ್ನಿವೇಶದಿಂದ ಪಾರುಮಾಡಿದ ಆಚಾರ್ಯ ಮಧ್ವರಿಗೆ ಅವರ ಇಚ್ಛೆಯಂತೆ ನೀಡಿದ ಗೋಪಿಚಂದನದ ಎರಡು ಹೆಂಟೆ (ಮುದ್ದೆ)ಯೊಳಗೆ ಕೃಷ್ಣ- ಬಲರಾಮರ ವಿಗ್ರಹಗಳಿದ್ದು, ಅವುಗಳಲ್ಲಿ ಒಂದನ್ನು (ಬಲರಾಮ) ವಡಭಾಂಡೇಶ್ವರದಲ್ಲಿ ಪ್ರತಿಷ್ಠಾಪಿಸಿ, ಮತ್ತೊಂದನ್ನು ಉಡುಪಿಗೆ ತಂದು ಜಲಾಧಿವಾಸ ಮಾಡಿ, ವಿಧಿವತ್ತಾಗಿ ಆಚಾರ್ಯ ಮಧ್ವರು ಈಗಿರುವ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಶ್ರೀಕೃಷ್ಣನ ಪೂಜೆಗೆ ಉಡುಪಿ ಸುತ್ತಲಿನ ಎಂಟು ಊರುಗಳಾದ ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು, ಪೇಜಾವರ, ಪಲಿಮಾರು, ಕೃಷ್ಣಾಪುರ ಮತ್ತು ಶೀರೂರುಗಳಿಂದ ಬಾಲ ಸನ್ಯಾಸಿಗಳನ್ನು ಆರಿಸಿಕೊಂಡು ಅವರಿಗೆ ಶ್ರೀಕೃಷ್ಣಪೂಜೆಯ ದೀಕ್ಷೆಯಿತ್ತು ತಮ್ಮ ಆಧ್ಯಾತ್ಮ ಅಮೃತವನ್ನು ಹಂಚಿದರು.

ಪರ್ಯಾಯ ಪದ್ಧತಿ:
ಎಂಟು ಮಂದಿ ಯತಿಗಳು ಶ್ರೀಕೃಷ್ಣ ಪೂಜೆಯನ್ನು ಅನುಕ್ರಮವಾಗಿ ಮಾಡಲು ಅನುಕೂಲವಾಗುವಂತೆ ಒಂದು ವಿಶಿಷ್ಟ ಅವಧಿಯ ತನಕ ಒಬ್ಬೊಬ್ಬರು ಶ್ರೀಕೃಷ್ಣ ಪೂಜೆಯ ಹೊಣೆಯನ್ನು ವಹಿಸಿಕೊಳ್ಳುವ ಪದ್ಧತಿಯೇ ಪರ್ಯಾಯ. ಪೂಜೆಯ ಹೊಣೆ ಸ್ವೀಕರಿಸುವ ಸ್ವಾಮಿಗಳು ಪರ್ಯಾಯ ಯತಿಗಳು, ಮತ್ತವರ ಮಠ ಪರ್ಯಾಯ ಮಠ ಎಂದೆನಿಸಿಕೊಳ್ಳುತ್ತದೆ. ಯಾರ ಪೂಜೆಯ ಅವಧಿಯೋ ಅದು ಅವರ ಪರ್ಯಾಯ ಕಾಲ. ಪೂಜೆಯನ್ನು ಆರಂಭಿಸುವ ದಿನ ನಡೆಯುವ ಜಾತ್ರೆಯೇ ಪರ್ಯಾಯ ಮಹೋತ್ಸವ. ಶ್ರೀ ವಾದಿರಾಜರ ಕಾಲದ ತನಕ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು ಎಂದು ತಿಳಿದುಬರುತ್ತದೆ. ಆನಂತರ ವಾದಿರಾಜರು ಎರಡು ವರ್ಷಗಳ ಅವಧಿಯ ಪರ್ಯಾಯ ಪದ್ಧತಿಯನ್ನು ರೂಢಿಗೆ ತಂದರು. ನಂತರದ ದಿನಗಳಲ್ಲಿ ಈ ಮಹೋತ್ಸವಕ್ಕೆ ನಾಡಹಬ್ಬದ ಮೆರುಗು ಬಂತು.
ಪರ್ಯಾಯದ ಪೂರ್ವಭಾವಿ ಚಟುವಟಿಕೆಗಳು ಪರ್ಯಾಯೋತ್ಸವಕ್ಕಿಂತ ಒಂದು ವರ್ಷ ಮೊದಲೇ ಆರಂಭವಾಗುತ್ತದೆ. ಈ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಮುಖ್ಯವಾದವು ನಾಲ್ಕು. ಅವುಗಳೆಂದರೆ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ. ಪರ್ಯಾಯಕ್ಕೆ ಇನ್ನೂ ಒಂದು ವರ್ಷವಿದೆ ಎನ್ನುವಾಗ ಒಂದು ಶುಭದಿನದಂದು, ಶುಭ ಮುಹೂರ್ತದಲ್ಲಿ ಬಾಳೆ ಮುಹೂರ್ತ ನಡೆಯುತ್ತದೆ. ತುಲಸಿ ಮತ್ತು ಬಾಳೆಯ ತೋಟಗಳನ್ನು ಬೆಳೆಸುವ ಸನ್ನಾಹ ಈ ಕಾರ್ಯಕ್ರಮದಿಂದ ಆರಂಭವಾಗುತ್ತದೆ. ಕೃಷ್ಣಾರ್ಚನೆಗೆ ದಿನವೂ ತುಲಸಿ ಲಭ್ಯತೆ ಹಾಗೂ ಅನ್ನದಾನಕ್ಕೆ ಹೇರಳ ಬಾಳೆಎಲೆ, ಸಮರ್ಪಣೆಗೆ ಬಾಳೆಹಣ್ಣು ಈ ವಿಧಿಯ ಹಿಂದಿನ ಆಶಯ. ಬಾಳೆ ಮುಹೂರ್ತ ನಡೆದ ಎರಡು ತಿಂಗಳಲ್ಲಿ ಅಕ್ಕಿಮುಹೂರ್ತ ನಡೆಯುತ್ತದೆ. ಪರ್ಯಾಯ ಕಾಲದಲ್ಲಿ ದಿನವೂ ನಡೆಯುವ ಸಹಸ್ರಾರು ಜನರ ಅನ್ನಸಂತರ್ಪಣೆಗಾಗಿ ಸಾಕಷ್ಟು ಅಕ್ಕಿ ಸಂಗ್ರಹಿಸುವುದಕ್ಕಾಗಿ ಈ ಮುಹೂರ್ತ. ನಂತರದ್ದು ಕಟ್ಟಿಗೆ ಮುಹೂರ್ತ. ಪರ್ಯಾಯಕ್ಕೆ ಇನ್ನು ಆರೇಳು ತಿಂಗಳುಗಳಿವೆ ಎನ್ನುವಾಗ ಈ ಮುಹೂರ್ತ ನಡೆಯುತ್ತದೆ. ಸಂತರ್ಪಣೆಗೆ ಅಕ್ಕಿ ಸಂಗ್ರಹಿಸಿದ್ದಾಯಿತು, ಅದನ್ನು ಬೇಯಿಸಲು ಉರುವಲು ಬೇಕು. ಅದಕ್ಕಾಗಿ ಈ ಮುಹೂರ್ತ. ಮಧ್ವಸರೋವರ ಪಾರ್ಶ್ವಭಾಗದಲ್ಲಿ (ಗೋಶಾಲೆಯ ಹಿಂಬದಿ) ಕಟ್ಟಿಗೆಯನ್ನು ಕ್ರಮಬದ್ಧವಾಗಿ ಒಟ್ಟಿ 50 ಅಡಿ ಎತ್ತರದ ಮೋಹಕ ಕಟ್ಟಿಗೆ ರಥ ನಿರ್ಮಿಸುತ್ತಾರೆ. ಮುಂದಿನ ಪರ್ಯಾಯದ ಸ್ವಲ್ಪ ಸಮಯದ ಮುನ್ನ ಈ ರಥವನ್ನು ಬಿಚ್ಚಿ ಉರುವಲನ್ನು ಸಂತರ್ಪಣೆಗೆ ಬಳಸುತ್ತಾರೆ. ಪರ್ಯಾಯಪೂರ್ವ ವಿಧಿಗಳಲ್ಲಿ ಕೊನೆಯದಾದ ಮುಹೂರ್ತವೇ ಭತ್ತ ಮುಹೂರ್ತ. ಪರ್ಯಾಯಕ್ಕೆ ಏಳೆಂಟು ವಾರಗಳಿರುವಾಗ ಈ ಮುಹೂರ್ತ ನಡೆಸಲಾಗುತ್ತದೆ. ಪರ್ಯಾಯದ ಮೊದಲು ಹೊಸ ಕೊಯ್ಲಿನ ಭತ್ತವನ್ನು ಮುಂದಿನ ಅಕ್ಕಿಗಾಗಿ ಇದನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ಮುಹೂರ್ತಗಳು ಅನ್ನದಾನದ ವ್ಯವಸ್ಥೆಗಾಗಿ ಇದೆ ಎನ್ನುವುದು ಗಮನಾರ್ಹ. ಅನ್ನಬ್ರಹ್ಮ ಎಂದೇ ಖ್ಯಾತಿ ಪಡೆದ ಉಡುಪಿ ಕೃಷ್ಣನ ಕೃಪಾರ್ಥವಾಗಿ ಈ ಎಲ್ಲಾ ಮುಹೂರ್ತಗಳ ಆಚರಣೆ.
ಪರ್ಯಾಯ ಪೀಠವೇರುವ ಸ್ವಾಮೀಜಿ ಪರ್ಯಾಯ ಮಹೋತ್ಸವಕ್ಕೆ ಇನ್ನು ಆರೇಳು ತಿಂಗಳಿರುವಾಗ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಡುತ್ತಾರೆ. ಅದೇ ಪರ್ಯಾಯಪೂರ್ವ ಸಂಚಾರ ಅಥವಾ ಪರ್ಯಾಯ ಸಂಚಾರ. ಭಾವಿ ಪರ್ಯಾಯ ಸ್ವಾಮಿಗಳು ಪರ್ಯಾಯ ಸ್ವೀಕರಿಸಿದ ಬಳಿಕ ಎರಡು ವರ್ಷ ಕಾಲ ಉಡುಪಿ ಕೃಷ್ಣಮಠ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಅವರ ಚಟುವಟಿಕೆಗಳೇನಿದ್ದರೂ ರಥಬೀದಿಯೊಳಗೆ ಮಾತ್ರ ಸೀಮಿತ!
ಹೀಗೆ ಪರ್ಯಾಯಪೂರ್ವ ಸಂಚಾರ ಪೂರೈಸಿ, ತಮ್ಮ ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಿ ಆಗಮಿಸುವ ಯತಿಗಳನ್ನು ಉಡುಪಿ ಜೋಡುಕಟ್ಟೆ ಬಳಿ ಸ್ವಾಗತಿಸಲಾಗುವುದು. ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗುವುದು. ಅದೇ ಪುರಪ್ರವೇಶ. ಇದು ಪರ್ಯಾಯ ಮಹೋತ್ಸವಕ್ಕೆ ಸುಮಾರು 2- 3 ವಾರಗಳಿಗೆ ಮುನ್ನ ನಡೆಯುತ್ತದೆ. ಆ ಬಳಿಕ ಪರ್ಯಾಯ ಶ್ರೀಗಳು ತಮ್ಮ ಮಠದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಆ ಬಳಿಕ ಪರ್ಯಾಯ ಮಹೋತ್ಸವದ ತಯಾರಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಪರ್ಯಾಯ ಸ್ವಾಮೀಜಿಯವರಲ್ಲಿ ಆಚಾರ್ಯ ಮಧ್ವರ ಸನ್ನಿಹಿತವಾಗಿದೆ ಎಂದೇ ಪರಿಭಾವಿಸುವ ಭಕ್ತಗಡಣ ಅವರನ್ನು ಪಾದಪೂಜೆಗೆ ಆಹ್ವಾನಿಸುತ್ತಾರೆ. ಪರ್ಯಾಯ ಮಹೋತ್ಸವದ ಯಶಸ್ಸಿಗಾಗಿ ಹೊರೆಕಾಣಿಕೆ ಸಮರ್ಪಿಸುತ್ತಾರೆ. ಅಡುಗೆಗೆ ಬೇಕಾದ ದವಸ ಧಾನ್ಯಗಳು, ತರಕಾರಿಗಳು, ಬಾಳೆಎಲೆ ಇತ್ಯಾದಿಗಳನ್ನು ಹೊರೆಗಳ ಮೂಲಕ ಮಠಕ್ಕೆ ಕಳಿಸುತ್ತಾರೆ. ವಾದಿರಾಜ ಕೃಪೆಯಿಂದ ಹುಲುಸಾಗಿ ಬೆಳೆಯುತ್ತದೆ ಎಂಬ ಪ್ರತೀತಿ ಇರುವ ಮಟ್ಟಿ ಗುಳ್ಳ ಬುಟ್ಟಿಗಳ ಸಂಖ್ಯೆಯಲ್ಲಿ ಕೃಷ್ಣ ಸನ್ನಿಧಿಗೆ ಆಗಮಿಸುತ್ತದೆ. ಪರ್ಯಾಯ ಮಹೋತ್ಸವ ಸಂತರ್ಪಣೆಯಲ್ಲಿ ಮಟ್ಟು ಗುಳ್ಳ ಸಾಂಬಾರು ವಿಶೇಷ.

ಸಂಭ್ರಮದ ಪರ್ಯಾಯ ಮಹೋತ್ಸವ:
ಮಕರ ಸಂಕ್ರಮಣದ ಮಾರನೆಯ ದಿನ ಚೂರ್ಣೋತ್ಸವ. ಅದರ ಮುಂದಿನ ಒಂದು ದಿನ ಉತ್ಸವಗಳಿಗೆ ವಿಶ್ರಾಂತಿ. ಮೂರನೆಯ ದಿನ ಪರ್ಯಾಯ ಪೀಠವನ್ನು ಬಿಟ್ಟೇಳುವ ಯತಿಗಳಿಂದ ಶ್ರೀಕೃಷ್ಣನಿಗೆ ಕೊನೆಯ ಪೂಜೆ. ಮಕರ ಸಂಕ್ರಮಣದ ನಾಲ್ಕನೆಯ ದಿನ ಪರ್ಯಾಯ ಮಹೋತ್ಸವ. ಇದು ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಉಡುಪಿಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಅಲಿಖಿತ ಸಂವಿಧಾನ.
ಪರ್ಯಾಯ ಪೀಠವನ್ನೇರುವ ಶ್ರೀಪಾದರು ಪರ್ಯಾಯ ಮಹೋತ್ಸವದ ಮುಂಚಿನ ದಿನ ರಾತ್ರಿ (ಜ. 17) ಉಡುಪಿಯಿಂದ ಸುಮಾರು 10 ಕಿ. ಮೀ. ದೂರದಲ್ಲಿನ ಕಾಪು ದಂಡತೀರ್ಥ ಎಂಬಲ್ಲಿ ಆಚಾರ್ಯ ಮಧ್ವರಿಂದ ಸೃಜಿಸಲ್ಪಟ್ಟ ಕೆರೆಯ ಪುಣ್ಯಜಲದಲ್ಲಿ ಮಿಂದು ಮಧ್ಯರಾತ್ರಿ ಕಳೆದ ಸುಮಾರು 3 ಗಂಟೆ ವೇಳೆಗೆ ಉಡುಪಿಗೆ ಆಗಮಿಸುತ್ತಾರೆ. 4 ಗಂಟೆ ವೇಳೆಗೆ ಉಡುಪಿಯ ಸಮಸ್ತ ಜನತೆ ಜೋಡುಕಟ್ಟೆ ಬಳಿ ತೆರಳಿ, ಶ್ರೀಪಾದರನ್ನು ಸ್ವಾಗತಿಸಲು ನೆರೆದಿರುತ್ತಾರೆ. ಅಷ್ಟರಲ್ಲಿ ಇತರ ಯತಿಗಳೂ ಅಲ್ಲಿಗೆ ಆಗಮಿಸುತ್ತಾರೆ. ಪರ್ಯಾಯ ಬಿಟ್ಟೇಳುವ ಯತಿಗಳು ಮಾತ್ರ ಕೃಷ್ಣಮಠದಲ್ಲೇ ಇದ್ದು, ಶ್ರೀಕೃಷ್ಣ ಅರ್ಚನೆಯಲ್ಲಿ ನಿರತರಾಗಿರುತ್ತಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿ ಸಹಿತ ಎಲ್ಲಾ ಯತಿಗಳು ವಿಶೇಷವಾದ ರಾಜೋಪಚಾರದ ದಿರಿಸಿನಲ್ಲಿದ್ದು ಅವರನ್ನು ವಿಶೇಷ ಮೇನೆಯಲ್ಲಿ ಕುಳ್ಳಿರಿಸಿ, ಮಠದ ಪಟ್ಟದ ದೇವರ ಸಹಿತ ಮಕರ ತೋರಣ, ಪೂರ್ಣಕುಂಭ, ಜಾನಪದ ತಂಡಗಳು, ಟ್ಯಾಬ್ಲೊಗಳ ಸಹಿತ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ರಥಬೀದಿ ತಲುಪುತ್ತಲೇ ಎಲ್ಲಾ ಯತಿಗಳು ಮೇನೆಯಿಂದ ಕೆಳಗಿಳಿದು, ಅದಾಗಲೇ ನೆಲದಲ್ಲಿ ಹಾಸಿದ್ದ ಬಿಳಿಹಾಸಿನ ಮೇಲೆ ನಡೆಯ ಅಡಿಯಿಟ್ಟು ಪ್ರದಕ್ಷಿಣೆಯಾಗಿ ಎಲ್ಲಾ ಯತಿಗಳು ಆಗಮಿಸುತ್ತಾರೆ. ಕನಕ ಗೋಪುರ ಬಳಿ ಆಗಮಿಸಿ, ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನಗೈದು, ಅಲ್ಲೇ ಪುರೋಹಿತರು ನವಗ್ರಹ ಪ್ರಾರ್ಥನೆ ಮಾಡಿ ದಾನ ಕೊಡಿಸುತ್ತಾರೆ. ಬಳಿಕ ಚಂದ್ರೇಶ್ವರ- ಅನಂತೇಶ್ವರ ದೇವಳ ಸಂದರ್ಶನ, ಪ್ರಾರ್ಥನೆ ನೆರವೇರುತ್ತದೆ. ಕೃಷ್ಣಮಠದ ಬಾಗಿಲಲ್ಲಿ ಪ್ರಸಕ್ತ ಪರ್ಯಾಯ ಶ್ರೀಪಾದರು ಆಗಾಮಿ ಶ್ರೀಪಾದರನ್ನು ಹಸ್ತಲಾಘವವಿತ್ತು, ಸ್ವಾಗತಿಸಿ ಕರೆದೊಯ್ಯುತ್ತಾರೆ. ಅಲ್ಲಿಂದ ಮಧ್ವಸರೋವರದಲ್ಲಿ ಕಾಲು ತೊಳೆದ ಬಳಿಕ ಶ್ರೀಕೃಷ್ಣ ಮಠ ಪ್ರವೇಶ. ಪ್ರಸಕ್ತ ಮತ್ತು ಆಗಾಮಿ ಪರ್ಯಾಯ ಶ್ರೀಪಾದರು ಕೃಷ್ಣ ಮಂದಿರದೊಳಗೆ ಹೋಗುತ್ತಿದ್ದಂತೆಯೇ ಇತರ ಶ್ರೀಪಾದರು ಬಡಗು ಮಾಳಿಗೆಗೆ ತೆರಳಿ, ಅಲ್ಲಿ ಸಿದ್ಧಗೊಳಿಸಿದ ಅಲಂಕೃತ ಅರಳು ಗದ್ದಿಗೆಯಲ್ಲಿ ಪರ್ಯಾಯ ದೀಕ್ಷೆ ಪಡೆದಿರುವ ಯತಿಗಳ ನಿರೀಕ್ಷೆಯಲ್ಲಿದ್ದು ಆಸೀನರಾಗಿರುತ್ತಾರೆ. ಈಮಧ್ಯೆ, ಪರ್ಯಾಯ ಬಿಟ್ಟೇಳುವ ಶ್ರೀಪಾದರು ಪರ್ಯಾಯ ವಹಿಸುವ ಶ್ರೀಪಾದರನ್ನು ಕೃಷ್ಣ ಗರ್ಭಗುಡಿಗೆ ಕರೆದೊಯ್ದು ಕೃಷ್ಣನ ಅಂತರಂಗದ ದರ್ಶನ ಮಾಡಿಸಿ, ಮಧ್ವಾಚಾರ್ಯರು ನೀಡಿದ್ದ ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಬೀಗದ ಕೀಲಿಕೈ ಹಸ್ತಾಂತರ ಇತ್ಯಾದಿ ಪ್ರಕ್ರಿಯೆಗಳು ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ನಡೆದು, ಮುಖ್ಯಪ್ರಾಣ ದರ್ಶನದ ಬಳಿಕ, ಆಗಾಮಿ ಯತಿಗಳನ್ನು ಪರ್ಯಾಯ ಶ್ರೀಪಾದರು ಸರ್ವಜ್ಞಪೀಠದಲ್ಲಿ ಕುಳ್ಳಿರಿಸುತ್ತಾರೆ. ಮಾಲಿಕಾ ಮಂಗಳಾರತಿ, ಗಂಧಾಕ್ಷತೆ ಸಮಪರ್ಪಣೆ ಇತ್ಯಾದಿ ನಡೆಯುತ್ತದೆ. ಬಡಗು ಮಾಳಿಗೆಯಲ್ಲಿ ಸಿದ್ಧಗೊಂಡ ಅರಳು ಗದ್ದುಗೆಯಲ್ಲಿ ಗಂದಾದ್ಯುಪಚಾರ ನಡೆಯುತ್ತದೆ. ವಾದಿರಾಜರ ಕಾಲದಲ್ಲಿ ಪರ್ಯಾಯ ಸಭೆ ನಡೆಯುತ್ತಿದ್ದ ತಾಣ ಇದು ಎನ್ನುವ ಸಂಕೇತವಾಗಿ ಈ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ. ಈ ರಾಜವೈಭವದ ಕಾರ್ಯಕ್ರಮಗಳ ಸರಮಾಲೆಯ ಕೊನೆಯ ಮಜಲು ರಾಜಾಂಗಣದ ದರ್ಬಾರು ಸಭೆ. ಅಲ್ಲಿ ಎಲ್ಲಾ ಶ್ರೀಪಾದರು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸುಮಾರು ಮುಂಜಾನೆ 7ರ ಸಮಯಕ್ಕೆ ರಾಜಾಂಗಣದ ಬೃಹತ್ ಸಭಾಭವನವನ್ನು ಪ್ರವೇಶಿಸುತ್ತಾರೆ. ಅದಾಗಲೇ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ರಾಜಾಂಗಣದಲ್ಲಿ ಆಸೀನರಾಗಿರುತ್ತಾರೆ. ಪರ್ಯಾಯ ವಿದಾಯ ಭಾಷಣ, ಪರ್ಯಾಯ ಶ್ರೀಪಾದರಿಂದ ಉದ್ದೇಶಿತ ಯೋಜನೆಗಳ ಪ್ರಕಟಣೆ, ಪರ್ಯಾಯ ಸಂದೇಶ, ಪ್ರಮುಖರಿಂದ ಅಭಿನಂದನೆ, ಪರ್ಯಾಯ ಪ್ರಶಸ್ತಿ ಪ್ರದಾನ ಇತ್ಯಾದಿಗಳು ನಡೆಯುತ್ತವೆ.
ಬಳಿಕ ನೆರೆದ ಅಸಂಖ್ಯ ಭಕ್ತರಿಗೆ ಷಡ್ರಸೋಪೇತವಾದ ಪಂಚಭಕ್ಷ್ಯ ಸಹಿತ ಭೋಜನ ಪ್ರಸಾದ ಸಮರ್ಪಣೆಯಾಗುತ್ತದೆ.

ಪೊಡವಿಗೊಡೆಯಗೆ ಚತುರ್ದಶ ಪೂಜೆಗಳು
ಉಡುಪಿ ಶ್ರೀಕೃಷ್ಣನಿಗೆ ಯತಿಗಳಿಂದಲೇ ಪೂಜೆ ನಡೆಸಲ್ಪಡುವುದು ವಿಶೇಷ. ಅಷ್ಟಮಠಗಳ ಯತಿಗಳನ್ನು ಹೊರತುಪಡಿಸಿ ಇತರ ಯಾರಿಗೂ ಕೃಷ್ಣ ಮೂರ್ತಿಯನ್ನು ಮುಟ್ಟಿ ಅರ್ಚಿಸುವ ಅಧಿಕಾರವಿಲ್ಲ. ಯತಿ ಕರಾರ್ಚಿತ ಕೃಷ್ಣನಿಗೆ ಪ್ರತಿದಿನ 14 ವಿಧದ ಪೂಜೆಗಳು ನಡೆಯುತ್ತವೆ. ಅವುಗಳೆಂದರೆ, 1. ನಿರ್ಮಾಲ್ಯ ವಿಸರ್ಜನ ಪೂಜೆ, 2. ಉಷ:ಕಾಲ ಪೂಜೆ, 3. ಅಕ್ಷಯ ಪಾತ್ರೆ- ಗೋಪೂಜೆ, 4. ಪಂಚಾಮೃತ ಅಭಿಷೇಕ ಪೂಜೆ, 5. ಉಧ್ವರ್ತನ ಪೂಜೆ, 6. ಕಲಶ ಪೂಜೆ, 7. ತೀರ್ಥ ಪೂಜೆ, 8. ಅಲಂಕಾರ ಪೂಜೆ, 9. ಅವಸರ ಸನಕಾದಿ ಪೂಜೆ, 10. ಮಹಾಪೂಜೆ, 11. ಚಾಮರ ಸೇವಾ ಪೂಜೆ, 12. ರಾತ್ರಿ ಪೂಜೆ, 13. ಮಂಟಪ ಪೂಜೆ, 14. ಶಯನೋತ್ಸವ ಪೂಜೆ.
ಅವುಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ನಡೆಯುವ ಪೂಜೆಗಳು 10. ಸಂಜೆ ಬಳಿಕ 4 ಪೂಜೆಗಳು ನಡೆಯುತ್ತವೆ. ಹೀಗೆ, ಚತುರ್ದಶ ಭುವನಗಳ ಒಡೆಯನಾದ ಭಗವಂತನ ಸನ್ನಿಧಿಯಲ್ಲಿ ಅನುದಿನವೂ ಚತುರ್ದಶ ಪೂಜೆಗಳು ನಡೆಯುತ್ತವೆ.

(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ: 13.01.2008)

ಜುಲೈ 21, 2010

ಉಡುಪಿ ಯುವಕನ ಕೈಹಿಡಿದ ಜರ್ಮನಿ ಗೃಹಿಣಿ!

ಪ್ರೀತಿ- ಪ್ರೇಮಕ್ಕೆ ಜಾತಿ, ಅಂತಸ್ತು, ದೇಶಕಾಲ ಯಾವುದೂ ಅಡ್ಡಿಯಾಗದು ಎಂಬ ಮಾತಿನೊಂದಿಗೆ ಹರೆಯವೂ ತೊಡಕಾಗದು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅದಕ್ಕೆ ಉಡುಪಿಯಲ್ಲಿ ನಡೆದ ಮದುವೆ ಪೂರಕವಾಗಿದೆ. ಜರ್ಮನಿಯ ಗೃಹಿಣಿಯೋರ್ವಳು ಉಡುಪಿ ಯುವಕನನ್ನು ಮೋಹಿಸಿ ಮದುವೆಯಾಗಿದ್ದಾಳೆ. 52ರ ಹರೆಯದ ಗ್ಯಾಬ್ರಿಯಲ್ ಮಾರ್ತಾ ಎಂಬಾಕೆ ಉಡುಪಿ ಬನ್ನಂಜೆ ನಿವಾಸಿ ಪ್ರಾಣೇಶ ಶೇಟ್ ಎಂಬ 38ರ ಯುವಕನ ಕೈಹಿಡಿದಿದ್ದಾಳೆ! ಹಿಂದೂ ಸಂಪ್ರದಾಯ ಪ್ರಕಾರ ಉಡುಪಿ ರಥಬೀದಿಯ ರಾಘವೇಂದ್ರ ಸ್ವಾಮಿ ಮಠದ ಮಂತ್ರಾಲಯ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆದಿದ್ದು, ವಧೂ- ವರರ ಕಡೆಯವರೀರ್ವರೂ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಜರ್ಮನಿಯಲ್ಲಿ ರೆಸಾರ್ಟ್ವೊಂದರ ಒಡತಿಯಾಗಿರುವ ಗ್ಯಾಬ್ರಿಯಲ್, 2005ರ ಡಿಸೆಂಬರ್ನಲ್ಲಿ ಉಡುಪಿಗಾಗಮಿಸಿದ್ದಳು. ಉಡುಪಿಯಲ್ಲಿ ಪ್ರವಾಸಿಗರ ಮಾಹಿತಿದಾರ (ಟೂರಿಸ್ಟ್ ಗೈಡ್) ಆಗಿರುವ ಪ್ರಾಣೇಶ ಶೇಟ್ನ ಪರಿಚಯವಾಗಿ, ಕ್ರಮೇಣ ಪರಿಚಯ ಪ್ರೇಮಕ್ಕೆ ತಿರುಗಿತು. ಬಳಿಕ 5- 6 ಬಾರಿ ಉಡುಪಿಗಾಗಮಿಸಿದ್ದ ಆಕೆ, ಪ್ರಾಣೇಶನ ಮನೆಗೂ ಬಂದಿದ್ದಳು. ಅವರಿಬ್ಬರೂ ರಿಜಿಸ್ಟರ್ಡ್ ಮದುವೆ ಆಗಿದ್ದರು.
ಆದರೂ, ಹಿಂದೂ ಸಂಪ್ರದಾಯ ಪ್ರಕಾರ ಮದುವೆಯಾಗಬೇಕೆಂಬ ಉತ್ಕಟ ಇಚ್ಛೆ ಈರ್ವರಿಗೂ ಇದ್ದ ಕಾರಣ ರಾಘವೇಂದ್ರ ಮಠದಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಶ್ರೀನಿವಾಸ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮದುವೆ ನಡೆಸಲಾಯಿತು. ಮದುವೆಗೆ ವಧೂ- ವರರ ಕಡೆಯಿಂದ ತಲಾ ಸುಮಾರು 20- 25 ಮಂದಿ ಆಗಮಿಸಿದ್ದರು. ವರನ ಕಡೆಯವರೇ ವಧುವನ್ನು ಧಾರೆ ಎರೆದುಕೊಡುವ ಸಂಪ್ರದಾಯ ನಡೆಸಿದರು. ಗ್ಯಾಬ್ರಿಯಲ್ ಮಾರ್ತಾ- ಪ್ರಾಣೇಶ ಸತಿ- ಪತಿಯರಾಗಿ ಸಪ್ತಪದಿ ತುಳಿದರು. ವರ ಪ್ರಾಣೇಶನ ತಾಯಿ, ತಂಗಿ, ಭಾವ, ತಮ್ಮ ಸೇರಿದಂತೆ ಸಂಬಂಧಿಗಳು, ಮಿತ್ರರು ಭಾಗವಹಿಸಿದ್ದರು. ಗ್ಯಾಬ್ರಿಯಲ್ ವಿದೇಶಿ ಮಿತ್ರರೂ ಆಗಮಿಸಿದ್ದರು.
ಗ್ಯಾಬ್ರಿಯಲ್ ವಿವಾಹಿತೆಯಾಗಿದ್ದು, ಆಕೆಗೆ 25ರ ಹರೆಯದ ಮಗನೊಬ್ಬನಿದ್ದಾನೆ. ಆದರೆ, ಆಕೆ ಈಗ ವಿಚ್ಛೇದಿತೆ. ಆಕೆಗೆ ಈರ್ವರು ಸಹೋದರಿಯರು ಮತ್ತು ಓರ್ವ ಸೋದರ ಇದ್ದಾರೆ. ಅವಿವಾಹಿತನಾಗಿರುವ ಪ್ರಾಣೇಶ ಶೇಟ್ಗೆ ಓರ್ವ ತಮ್ಮ ಮತ್ತು ಒಬ್ಬಾಕೆ ತಂಗಿ ಇದ್ದಾರೆ. ತಂಗಿಗೆ ಮದುವೆ ಆಗಿದೆ.
ಗ್ಯಾಬ್ರಿಯಲ್ ಪುತ್ರ ಜರ್ಮನಿಯಿಂದ ತಾಯಿಗೆ ಫೋನಾಯಿಸಿ, ಶುಭಾಶಯ ಕೋರಿದ್ದ ಎಂದು ಗ್ಯಾಬ್ರಿಯಲ್ ಮಾರ್ತಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದಳು. ಇನ್ನು ಪ್ರಾಣೇಶನೊಂದಿಗೆ ಬಾಳುವುದಾಗಿ ತಿಳಿಸಿದ ಆಕೆ, 6 ತಿಂಗಳು ಉಡುಪಿಯಲ್ಲಿ ಹಾಗೂ ಇನ್ನುಳಿದ 6 ತಿಂಗಳು ಜರ್ಮನಿಯಲ್ಲಿರುವುದಾಗಿ ತಿಳಿಸಿದಳು. ಪ್ರಾಣೇಶನನ್ನು ಜರ್ಮನಿಗೆ ಕರೆದೊಯ್ಯುವುದಾಗಿ ತಿಳಿಸಲು ಮರೆಯಲಿಲ್ಲ.
ಜರ್ಮನಿ ಗೃಹಿಣಿಯ ಯಾವ ಮೋಹ ಉಡುಪಿಯ ಯುವಕನನ್ನು ಮೋಡಿ ಮಾಡಿತೋ? ಎಂದು ಮದುವೆಗಾಗಮಿಸಿದವರು ತಮ್ಮ ತಮ್ಮಲ್ಲೇ ಗುಸುಗುಡುತ್ತಿದ್ದರು!

(ಸಂಯುಕ್ತ ಕರ್ನಾಟಕ: ಡಿ. 2, 2009)

ಹರಿ- ಹರರಲ್ಲಿ ಬೇಧವಿಲ್ಲವೆಂದಿನಿಪ ಕ್ಷೇತ್ರ: ಕ್ರೋಡಾಶ್ರಮ

              ಶೂಲ ಸುದರ್ಶನ ಸುರುಚಿಂ ಫಾಲೇಂದೂಜ್ವಲ ಕಿರೀಟ ಶೋಭಿತ ಶಿರಸಂ/
               ಪಂಕಜ ಮುಖಕರ ಚರಣಂ ಶ್ರೀ ಶಂಕರ ನಾರಾಯಣಂ ವಂದೇ//

ಉಡುಪಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕರಾವಳಿ ತೀರ ಸಮೀಪದ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಕ್ರೋಡಾಶ್ರಮ. ಇಂದ್ರಾಳೀ ನದೀ ತೀರದಲ್ಲಿರುವ, ಪಡುದಿಕ್ಕಿನಲ್ಲಿ ಮುನ್ನೂರು ಬ್ರಾಹ್ಮಣ ಕುಲಗಳಿದ್ದ ಪಡುಮನ್ನೂರೆಂಬ ಈ ಕ್ಷೇತ್ರ ಕೊಡವೂರು ಎಂದೇ ಪ್ರಸಿದ್ದವಾಗಿದೆ.
ಹಿಂದೆ ಭೂಲೋಕದ ಜನರಲ್ಲಿ ಕೆಲವರು ವಿಷ್ಣುವನ್ನು, ಇನ್ನೂ ಕೆಲವರು ಶಿವನನ್ನೂ ಪೂಜಿಸುತ್ತಾ ತಮ್ಮ ತಮ್ಮ ದೇವರೇ ಮೇಲೆಂದು ಪರಸ್ಪರ ಕಚ್ಚಾಡುತ್ತಿದ್ದಾಗ, ತ್ಯಾಗಿಯೂ ದೈವಾರಾಧಕನೂ ಆದ ಕ್ರೋಡನೆಂಬ ಮುನಿ ಪುಂಗವ ದ್ವೈತಾದ್ವೈತಗಳ ಉದ್ದೇಶ ಸಾರ್ಥಕವಾಗುವಂತೆ ಶಂಕರ ಹಾಗೂ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಭಕ್ತರಿಗೆ ದರ್ಶನವೀಯುವಂತಾಗಬೇಕು ಎಂದು ತಪಸ್ಸಿಗೆ ಕುಳಿತರು.
ಅದೇ ಸಂದರ್ಭದಲ್ಲಿ ದಾನವರೀರ್ವರು ಶಿವ ಮತ್ತು ವಿಷ್ಣು ಒಂದೇ ರೂಪದಲ್ಲಿ ಬಂದು ಕೊಲ್ಲುವುದಿದ್ದರೆ ನಮಗೆ ಮರಣ ಬರಲಿ ಎಂದು ಶಿವನಿಂದ ವರ ಪಡೆದಿದ್ದರು. ಆ ದಾನವರೀರ್ವರೂ ದೇವಲೋಕಕ್ಕೆ ದಾಳಿ ಮಾಡಿ ದೇವೇಂದ್ರನನ್ನು ಓಡಿಸಿ ದೇವತೆಗಳನ್ನು ಸಂಕಷ್ಟಕ್ಕೀಡುಮಾಡಿದರು. ದೇವತೆಗಳೆಲ್ಲ ಬ್ರಹ್ಮನ ಆಜ್ಞೆಯಂತೆ ಶಂಕರ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಬಂದು ದಾನವರನ್ನು ಸಂಹರಿಸಲು ಪ್ರಾರ್ಥಿಸಿದರು.
ಇತ್ತ, ಕ್ರೋಡ ಮುನಿಯ ಘೋರ ತಪಸ್ಸಿಗೆ ಒಲಿದ ಶಂಕರ-ನಾರಾಯಣರಿಬ್ಬರೂ ಒಂದಾಗಿ ಬಲಭಾಗದಲ್ಲಿ ಶಂಕರನೂ ಎಡಭಾಗದಲ್ಲಿ ನಾರಾಯಣನೂ ಒಟ್ಟಾಗಿ ಕಾಣಿಸಿಕೊಂಡು ತಮ್ಮೊಳಗೆ ಬೇಧವಿಲ್ಲ ಎಂದೂ, ದ್ವೈತಾದ್ವೈತಿಗಳು ಹೊಡೆದಾಡಬಾರದೆಂದು ನುಡಿದು ಮುನಿಯ ಪ್ರಾರ್ಥನೆಯಂತೆ ಶಾಶ್ವತವಾಗಿ ಅಲ್ಲೇ ನೆಲೆ ನಿಂತರು. ಕ್ರೋಡಮುನಿಯ ಉದ್ದೇಶ ಹಾಗೂ ಕಾರ್ಯಗಳು ಜನಕ್ಕೆ ಆದರ್ಶವಾಗಿದ್ದು, ಮುಂದೆ ಈ ಕ್ಷೇತ್ರ `ಕ್ರೋಡಾಶ್ರಮ' ಎಂದು ಪ್ರಸಿದ್ಧಿ ಆಗಲೆಂದು ಹರಸಿದರು.
ಅತ್ತ ದೇವತೆಗಳ ಪ್ರಾರ್ಥನೆಯಂತೆ ಶಂಕರ ನಾರಾಯಣರು ಒಂದಾಗಿ ಒಂದೇ ದೇಹ ಧರಿಸಿ ಆಯುಧ ಪಾಣಿಯಾಗಿ ದಾನವರನ್ನು ಯುದ್ದದಲ್ಲಿ ಸೋಲಿಸಿ ಮೋಕ್ಷ ಕರುಣಿಸಿದರು. ಕ್ರೋಡಾಶ್ರಮದಲ್ಲಿ ಶಂಕರ ನಾರಾಯಣನೊಂದಿಗೆ ಎಲ್ಲ ದೇವತೆಗಳೂ, ಭೂತ ಗಣಗಳೂ ನೆಲೆ ನಿಂತರು. ಎಡಬದಿಯಲ್ಲಿ ದುರ್ಗೆ, ನಂದಿಕೇಶ್ವರ, ಕ್ಷೇತ್ರಪಾಲ, ಬ್ರಹ್ಮಶಾಸ್ತಾರ. ಬಲಬದಿಯಲ್ಲಿ ಗಣಪತಿ, ಮುಖ್ಯಪ್ರಾಣ.
ದೇವಸ್ಥಾನದ ತುಸು ದೂರದಲ್ಲಿ ಬೊಬ್ಬರ್ಯ, ಕಂಗಣಬೆಟ್ಟು ಪಂಜುರ್ಲಿ, ಭಗವತಿ ಮಾರಿಯಮ್ಮ ದೇವಾಲಯ, ಕೆರೆಮಠ- ಕಲ್ಲಮಠ- ಕಂಬಳಕಟ್ಟದ ಮಾಣಿ ದೇವಾಲಯ, ಬೆಳ್ಕೆಳೆ ಮಹಾಲಿಂಗೇಶ್ವರ, ಕಾನಂಗಿ ಮದರಂಗಿ ಬೆಟ್ಟು ರಕ್ತೇಶ್ವರಿ, ವಡಭಾಂಡೇಶ್ವರದ ಬಲರಾಮ, ಮಂಡೆ ಚಾವಡಿ ಮಠ ಮುಂತಾದ ಹತ್ತು ಹಲವು ದೇವಸ್ಥಾನ- ಮಠಗಳಿರುವ ಈ ಕ್ಷೇತ್ರ ನಿಜಕ್ಕೂ ಆಸ್ತಿಕರ ಆಸಕ್ತಿ ಕೆರಳಿಸುತ್ತದೆ.
ಇಲ್ಲಿಯ ದೇವಸ್ಥಾನದ ಗರ್ಭಗುಡಿಯಲ್ಲಿ ಮೂಲಸ್ಥಾನ ದೇವತೆಯಾಗಿ ಆರಾಧಿಸುವ ಶಂಕರ ನಾರಾಯಣ ದೇವರು ಲಿಂಗಾಕಾರದಲ್ಲಿದ್ದು, ಪಾಣಿಪೀಠಕ್ಕಿಂತ ತಗ್ಗಿನಲ್ಲಿ ಒಂದಕ್ಕೊಂದು ಆಲಂಗಿಸಿಕೊಂಡಿದ್ದು, ತಳದಲ್ಲಿ ಎರಡೂ ಲಿಂಗಗಳು ಒಂದೇ ಆಗಿದ್ದು, ಮೇಲಕ್ಕೆ ಎರಡು ಪಾಲಾಗಿದೆ. ಬಲಿ ದೇವತಾಮೂರ್ತಿಯಾಗಿ ಆರಾಧಿಸುವ ಕಂಚಿನ ಶಂಕರ ನಾರಾಯಣ ವಿಗ್ರಹ ಆಕರ್ಷಕವಾಗಿದೆ. ಕೆರೆಕಟ್ಟೆಯ ಮೂಡುಗಣಪತಿ ಇಷ್ಟಾರ್ಥ ಸಿದ್ದಿಗಾಗಿ ನೆಲೆನಿಂತು ತನ್ನ ವಿಶೇಷ ಕಾರಣೀಕದಿಂದ ಪ್ರಸಿದ್ದಿಯಾಗಿದೆ.
ಗುರು ರಾಘವೇಂದ್ರ ರಾಯರ ವೃಂದಾವನ, ಮಲ್ಲಿಕಾರ್ಜುನ ದೇವರು ಹಾಗೂ ನಾಗಬನಗಳಿಂದ ಕೂಡಿದ ಈ ದೇವಸ್ಥಾನದಲ್ಲಿ ಹಿಂದೂಗಳ ಬಹುತೇಕ ಹಬ್ಬ ಹರಿದಿನಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷ ದೀಪೋತ್ಸವ, ರಾಯರ ಆರಾಧನೆ, ಶಿವರಾತ್ರಿ, ನವರಾತ್ರಿಗಳ ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

(ಸಂಯುಕ್ತ ಕರ್ನಾಟಕ: ಜ. 10, 2009)

ಜುಲೈ 15, 2010

ಅಪೂರ್ವ ಸೊಬಗಿನ ಕಟ್ಟಿಗೆ ರಥ

ಉಡುಪಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಶ್ರೀಕೃಷ್ಣ ಮಠ, ಅಷ್ಟ ಮಠಗಳು. ಮಠದೊಳಗಿನ ಸೊಬಗು, ಕೃಪಾಸಾಗರ ಆಚಾರ್ಯ ಮಧ್ವ ಪ್ರತಿಷ್ಠಾಪಿತ, ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಮೂರ್ತಿ. ಬಾಯಿ ನೀರೂರಿಸುವ ಘಮಘಮಿಸುವ ಊಟ!
ಇವಿಷ್ಟೇ ಅಲ್ಲ. ಉಡುಪಿಯಲ್ಲಿ ಇನ್ನೂ ಇದೆ. ಚತುರ್ದಶ ಭುವನದೊಡೆಯನ ಸಂಭ್ರಮಕ್ಕಾಗಿ ಚಿನ್ನ- ಬೆಳ್ಳಿ ರಥಗಳ ಹೊರತಾಗಿಯೂ ಮೂರು ತೇರುಗಳಿವೆ. ಇವೆಲ್ಲವೂ ಕೃಷ್ಣಮೂರ್ತಿಯನ್ನಿಟ್ಟು ಉತ್ಸವವನ್ನಾಚರಿಸಿ ಸಂಭ್ರಮಿಸಲು. ಆದರೆ, ಉಡುಪಿಯಲ್ಲಿ ಇನ್ನೂ ಒಂದು ರಥವಿದೆ. ಅದೇ ಕಟ್ಟಿಗೆ ರಥ!
ಅನ್ನಬ್ರಹ್ಮ ಎಂದೇ ಕರೆಯಲ್ಪಡುವ ಕೃಷ್ಣ ಸನ್ನಿಧಿಗೆ ಬರುವ ಲಕ್ಷಾಂತರ ಮಂದಿ ಭಕ್ತರ ಅಶನ ಸಮಸ್ಯೆಯನ್ನು ತಣಿಸಿ, ಘಡ್ರಸೋಪೇತವಾದ ಭೋಜನ ನಿರಾತಂಕವಾಗಿ ನಡೆಸಲು ಪೂರಕವಾದ ಉರುವಲು ವ್ಯವಸ್ಥೆಗೆ ಸುಗಮವನ್ನಾಗಿಸಲು ಈ ರಥ! ಸಣ್ಣ ವಿಚಾರವಾದರೂ ಆ ಕುರಿತು ಚಿಂತಿಸಿ, ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಷ ನೀಡಿದ ಆ ಮಹೋದಯನಿಗೆ ನಮೋ ನಮ: ಎನ್ನೋಣವೇ?
ಕೃಷ್ಣಮಠದೆದುರಿನ ಮಧ್ವಸರೋವರದ ಪಾರ್ಶ್ವಭಾಗದಲ್ಲಿ ಕಟ್ಟಿಗೆ ರಥದ ಶಾಶ್ವತ ಸ್ಥಾನ. ಅಲ್ಲಿಯೇ ಸಮೀಪ ಅನ್ನಬ್ರಹ್ಮನ ನೈವೇದ್ಯ ಸಿದ್ಧಗೊಳ್ಳುವ ಪಾಕಶಾಲೆ. ಅದಕ್ಕೆ ಹೊಂದಿಕೊಂಡಂತೆ ಕಟ್ಟಿಗೆ ರಥಕ್ಕೊಂದು ನೆಲೆಯನ್ನು ಒದಗಿಸಲಾಗಿದೆ. ನಿರಂತರ ಅನ್ನದಾನಕ್ಕೆ ಉರುವಲು ಸಮಸ್ಯೆಯಾಗದಿರಲಿ ಎಂಬ ಸದಾಶಯದಿಂದ ಕಟ್ಟಿಗೆ ರಥ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು, ಅದನ್ನು ಪರ್ಯಾಯಪೂರ್ವ ವಿಧಿಗಳಲ್ಲಿ ಒಂದಾಗಿಸಿದ್ದಾರೆ. ಈ ಕ್ರಮವನ್ನು ಜಾರಿಗೆ ತಂದವರು ಪ್ರಾಯಶ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ನಾಡಹಬ್ಬದ ರೂಪಕೊಟ್ಟ ವಾದಿರಾಜ ಸಾರ್ವಭೌಮರೇ ಇರಬೇಕು.
ಪರ್ಯಾಯ ವಹಿಸಿ ಕೃಷ್ಣಪೂಜಾ ದೀಕ್ಷೆ ವಹಿಸಿಕೊಳ್ಳುವ ಅಷ್ಟಮಠಗಳ ಯತಿಗಳು ಕಟ್ಟಿಗೆ ಮುಹೂರ್ತ ಅಂದರೆ, ಕಟ್ಟಿಗೆ ಒಟ್ಟುವ ಕಾರ್ಯವನ್ನು ಮಾಡಲೇಬೇಕು. ಪರ್ಯಾಯಪೂರ್ವ ವಿಧಿಗಳಲ್ಲಿ ಬಾಳೆ ಮುಹೂರ್ತ (ಬಾಳೆಗಿಡ ನೆಡುವುದು) ಪ್ರಥಮದ್ದಾದರೆ, ಕಟ್ಟಿಗೆ ಮುಹೂರ್ತ ಎರಡನೆಯದು. ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಯವರು ತಮ್ಮ ಮುಂದಿನ 2 ವರ್ಷಗಳಿಗೆ ಬೇಕಾಗುವಷ್ಟು ಉರುವಲನ್ನು ಸಂಗ್ರಹಿಸಿ, ರಥದ ಮಾದರಿಯಲ್ಲಿ ಒಟ್ಟುಮಾಡುತ್ತಾರೆ. ತಮ್ಮ ಪರ್ಯಾಯ ಕಾಲದಲ್ಲಿ ಒಟ್ಟಿಟ್ಟಿರುವ ಆ ಕಟ್ಟಿಗೆಯನ್ನು ಬಳಸಬಹದು. ಮುಂದಿನ ರಥ ನಿಮರ್ಾಣ ಭಾವೀ ಪರ್ಯಾಯ ಶ್ರೀಗಳಿದ್ದು. ಈ ಚಕ್ರ ಮುಂದುವರಿಯುತ್ತಲೇ ಇರುತ್ತದೆ. ಇದುವರೆಗೆ ಅನೂಚಾನವಾಗಿ ನಡೆದುಬಂದಿದೆ.
ಈಗ ಅನಿಲಾಧಾರಿತ ಅಡುಗೆ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕಟ್ಟಿಗೆ ಮುಹೂರ್ತ ಕೈಬಿಟ್ಟಿಲ್ಲ. ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕೃಷ್ಣಮಠ ಪ್ರಾಂಗಣ ಪರಿಸರದಲ್ಲಿ ಕಟ್ಟಿಗೆ ರಥಕ್ಕೊಂದು ಶೋಭೆ ಇದೆ.

(ಸಂಯುಕ್ತ ಕರ್ನಾಟಕ: ನ. 9, 2008)

ಜುಲೈ 13, 2010

ನವರಾತ್ರಿಯಲಿ ಉಡುಪಿ ಕೃಷ್ಣ ಸ್ತ್ರೀವೇಷಧಾರಿ!

ಶಕ್ತಿ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿ ದಿನಗಳಲ್ಲಿ ಉಡುಪಿ ಕೃಷ್ಣನನ್ನು ಕಾಣುವುದೇ ಕಣ್ಣಿಗೆ ಹಬ್ಬ. ಶಾಲಗ್ರಾಮ ಶಿಲೆಯ ಕೃಷ್ಣಮೂರ್ತಿ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಸ್ತ್ರೀವೇಷಧಾರಿ! ಈ ದಿನಗಳಲ್ಲಿ ಕೃಷ್ಣನಿಗೆ ಹೆಣ್ಣುರೂಪದ ಅಲಂಕಾರ ಮಾಡಲಾಗುತ್ತದೆ. ಶಕ್ತಿಗೆ ಸ್ಪೂರ್ತಿಯ ಸೆಲೆಯಾದ ಪುರುಷರೂಪಿ ಭಗವಂತನಿಗೆ ದೇವಿ ಅಲಂಕಾರ ಮಾಡಲಾಗುತ್ತದೆ ಎಂದು ವಿದ್ವಾಂಸ ಗೋಪಾಲಾಚಾರ್ ಅಭಿಪ್ರಾಯಪಡುತ್ತಾರೆ.
ಈ ತೆರನ ಪದ್ಧತಿ ಬಲು ಹಿಂದಿನಿಂದಲೂ ಉಡುಪಿ ಕೃಷ್ಣಮಠದಲ್ಲಿ ಜಾರಿಗೆ ಬಂದಿದೆ. ಭಗವತಿ, ಕೃಷ್ಣನ ತಂಗಿ ಎಂದೇ ವೈಷ್ಣವರು ನಂಬುತ್ತಾರೆ. ಮಾತ್ರವಲ್ಲದೇ ಕಳೆದ ಆಷಾಢ ಏಕಾದಶಿಯಿಂದ ಮುಂದಿನ ಉತ್ಥಾನ ದ್ವಾದಶಿ ವರೆಗೆ ಶಯನದಲ್ಲಿರುವ ಮಹಾವಿಷ್ಣು ಲಕ್ಷ್ಮೀ ಅಂತರ್ಗತನಾಗಿರುತ್ತಾನೆ ಎಂಬ ನಂಬಿಕೆಯೂ ಇದೆ. ಜಗನ್ನಿಯಾಮಕ ಭಗವಂತನನ್ನು ನಿದ್ರೆಯಿಂದೆಬ್ಬಿಸಲು ಲಕ್ಷ್ಮೀ ಒಲುಮೆ ಗಳಿಸಿಕೊಳ್ಳುವುದು ಅಗತ್ಯ. ಹಾಗಾಗಿ ರಮಾಂತರ್ಗತ ರಮಾರಮಣ ಶ್ರೀಕೃಷ್ಣನಿಗೆ ಹೆಣ್ಣುರೂಪ. ದೇವಿ, ಕೃಷ್ಣನ ಅನುಜೆ ಎಂದು ತಿಳಿಹೇಳಲೂ ಈ ರೂಪ. ಕೃಷ್ಣನ ವಿಶೇಷ ಸನ್ನಿಧಾನದಲ್ಲಿ ಭಾಮೆಯನ್ನು ಕಂಡು ಪುಳಕಗೊಳ್ಳಲು ಇದು ಸುಸಂದರ್ಭ. ಪರಶುರಾಮ ಸೃಷ್ಟಿಯಲ್ಲಿ ಶಕ್ತಿ ಆರಾಧನೆ ವಿಶೇಷವಾಗಿರುವ ಹಿನ್ನೆಲೆಯೂ ಕೃಷ್ಣನ ಸ್ತ್ರೀವೇಷಕ್ಕೆ ಪೂರಕ.
ಮಾತ್ರವಲ್ಲದೇ ಕೃಷ್ಣ ತ್ರಿಗುಣ ಸ್ವರೂಪಿ. ಸತ್ವ, ರಜ ಮತ್ತು ತಮೋಗುಣಗಳಿಗೆ ಒಡೆಯ. ತ್ರಿಗುಣಗಳಿಗೆ ಅನುಕ್ರಮವಾಗಿ ಶ್ರೀ, ಭೂ ಮತ್ತು ದುರ್ಗೆ ಅಧಿದೇವತೆಗಳು. ಅದನ್ನೇ ಪುರಂದರದಾಸರು `ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಮರಳು ಮಾಡಿಕೊಂಡೆಯಲ್ಲ.... ಮಾಯಾದೇವಿಯೇ' ಎಂದು ಭಾಮೆರೂಪಿ ಕೃಷ್ಣನನ್ನು ಸ್ತುತಿಸಿದ್ದು!
ವಾದಿರಾಜರ ಕಾಲದಿಂದಲೂ ಉಡುಪಿ ಕೃಷ್ಣನಿಗೆ ನವರಾತ್ರಿ ದಿನಗಳಲ್ಲಿ ಸ್ತ್ರೀರೂಪಿ ಅಲಂಕಾರ ಹಾಗೂ ಪ್ರತೀ ಶುಕ್ರವಾರಗಳಂದು ಮೋಹಿನಿ ರೂಪದಲ್ಲಿ ಅಲಂಕರಿಸುವ ವಾಡಿಕೆ ಇತ್ತು. ಅವರು ತಮ್ಮ ಕೀರ್ತನೆಯೊಂದರಲ್ಲಿ ` ಲಾವಣ್ಯದಿಂದ ಮೆರೆವ ನಿಜಸತಿಯ ಹೆಣ್ಣು ರೂಪದಿ ಕಾಂಬ ಮಹಾಲಕುಮಿ ಇವಗಿನ್ಯಾರು ಯಾಕೆ' ಎಂದು ಕೃಷ್ಣನ ಹೆಣ್ಣು ರೂಪವನ್ನು ಕಂಡು ಬೆರಗಾಗಿ ಸ್ವತ: ಹೆಣ್ಣಾಗಿರುವ ಕೃಷ್ಣನಿಗೆ ಅನ್ಯ ಹೆಣ್ಣುಗಳು ಯಾಕೆ ಮತ್ತು ಕೃಷ್ಣನಿಗಿಂತ ಮಿಗಿಲಾದ ಹೆಣ್ಣುಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂತೂ ನವರಾತ್ರಿಯ ಈ ದಿನಗಳಲ್ಲಿ ಕೃಷ್ಣನನ್ನು ಸತ್ಯಭಾಮೆ, ಮೋಹಿನಿ, ಪದ್ಮಾವತಿ, ವೀಣಾಪಾಣಿ... ಹೀಗೆ ನವವಿಧ ರೂಪಗಳಿಂದ ಕಾಣುವ ಸುಯೋಗ.

(ಸಂಯುಕ್ತ ಕರ್ನಾಟಕ: ಅ. 6, 2008)

ಜೂನ್ 9, 2010

ಅಪೂರ್ವ ದ್ವಿಭುಜ ಗಣಪತಿ ಆಲಯ

ಸಾಮಾನ್ಯವಾಗಿ ಗೌರಿತನಯ ವಿನಾಯಕ ಚತುಃಹಸ್ತ, ನಾಲ್ಕು ಕೈಗಳುಳ್ಳವ. ಅಪೂರ್ವವಾಗಿ ಕೆಲವೆಡೆಗಳಲ್ಲಿ ಆತ ದ್ವಿಬಾಹು ಉಳ್ಳವನಾಗಿಯೂ ಕಂಡುಬರುತ್ತಾನೆ. ಇಡಗುಂಜಿ ವಿನಾಯಕ, ಗೋಕರ್ಣದ ಗಣಪ ಮೊದಲಾದ ಗಣೇಶಾಲಯಗಳಲ್ಲಿನ ವಿಗ್ರಹಗಳು ಎರಡು ಕೈಗಳುಳ್ಳವುಗಳು. ಉಡುಪಿ ಜಿಲ್ಲೆಯಲ್ಲಿಯೂ ದ್ವಿಬಾಹು ಗಣಪನ ವಿಗ್ರಹಗಳಿರುವ ಅಪೂರ್ವ ತಾಣಗಳಿವೆ. ಅವುಗಳಲ್ಲಿ ಒಂದು ಆನೆಗುಡ್ಡೆ ಕುಂಭಾಶಿಯಲ್ಲಿದ್ದರೆ, ಇನ್ನೊಂದು ಹಟ್ಟಿಯಂಗಡಿಯಲ್ಲಿದೆ. ಆನೆಗುಡ್ಡೆ ಗಣಪತಿ ನಿಂತ ಭಂಗಿಯಲ್ಲಿದ್ದರೆ, ಹಟ್ಟಿಯಂಗಡಿ ಗಣೇಶ ಕುಳಿತ ವಿಶಿಷ್ಟ ಭಂಗಿಯಲ್ಲಿದೆ. ದ್ವಿಭುಜ ಗಣಪತಿ ಕ್ಷಿಪ್ರ ಫಲದಾಯಕ ಎಂಬುದು ಆಸ್ತಿಕರ ನಂಬುಗೆ. ಈ ಎರಡೂ ಕಾರಣೀಕ ಕ್ಷೇತ್ರಗಳು ಕುಂದಾಪುರ ತಾಲ್ಲೂಕಿನಲ್ಲಿವೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿ- ಕುಂದಾಪುರ ನಡುವೆ ರಸ್ತೆಯಿಂದ ಸುಮಾರು ಒಂದು ಕಿ. ಮೀ. ಪೂರ್ವದಲ್ಲಿ ಆನೆಗುಡ್ಡೆ ಎಂಬ ಕ್ಷೇತ್ರವಿದೆ. ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇದೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧು ಕಾನನ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರ ಎಂದೂ ಕರೆಯುತ್ತಿದ್ದು ಈಗಿನ ಕಲಿಯುಗದಲ್ಲಿ ಕುಂಭಾಶಿ ಎಂದು ಕರೆಯಲಾಗುತ್ತಿದೆ. ಹಿಂದೊಮ್ಮೆ ಅನಾವೃಷ್ಟಿಯಾಗಿದ್ದಾಗ ಗೌತಮ ಮುನಿಗಳು ಈ ಕ್ಷೇತ್ರದಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದ್ದರು. ಹೀಗೆ ಈ ಕ್ಷೇತ್ರ ಯುಗಾಂತರಗಳಿಂದಲೂ ಪವಿತ್ರವಾದುದು, ಪ್ರಸಿದ್ಧವಾದುದುದು ಎಂಬುದು ಪುರಾಣಗಳ ಉಲ್ಲೇಖ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿ ನಿತ್ಯಾಹ್ನಿಕಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾಗಿದ್ದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮರಾಜನಲ್ಲಿ ಕುಂಭಾಸುರನ ಪೀಡೆಯ ಕುರಿತು ಅರುಹಿದಾಗ, ಲೋಕಕಂಠಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಧರ್ಮಜ ಅಪ್ಪಣೆ ಕೊಟ್ಟ. ಕೂಡಲೇ ಭೀಮ ಯುದ್ಧ ಸನ್ನದ್ಧನಾದ. ಭೀಮ- ಕುಂಭರೊಳಗೆ ಘನಘೋರ ಯುದ್ಧ ನಡೆಯಿತಾದರೂ, ಯುದ್ಧದಲ್ಲಿ ಕುಂಭಾಸುರ ಅವಧ್ಯನಾಗಿಯೇ ಉಳಿದ. ಅವನನ್ನು ಸಂಹರಿಸುವ ಪರಿ ಬಗೆಗೆ ಚಿಂತಿಸುತ್ತಾ ಭೀಮಸೇನ ಶಿಬಿರಕ್ಕೆ ಹಿಂದಿರುಗುತ್ತಲೇ ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ಕುಂಭನ ವಧೆ ಸಾಧ್ಯ ಎಂಬ ಅಶರೀರವಾಣಿ ಕೇಳಿಸಿತು.
ಭೀಮಸೇನ ವಿಶ್ವಂಭರ ರೂಪಿ ವಿನಾಯಕನನ್ನು ಧ್ಯಾನಿಸಿದ. ಆನೆ ರೂಪದಲ್ಲಿ ಭಗವಂತ ಪ್ರತ್ಯಕ್ಷನಾಗಿ ಕತ್ತಿಯೊಂದನ್ನು ದಯಪಾಲಿಸಿದ. ಅದರಿಂದಲೇ ಭೀಮಸೇನ ಕುಂಭಾಸುರನನ್ನು ಸಂಹರಿಸಿದ ಎಂಬುದು ಕುಂಭಾಸಿ ಸ್ಥಳಪುರಾಣ ತಿಳಿಸುವ ಕ್ಷೇತ್ರದ ಕಥೆ. ಅದನ್ನೇ ವಾದಿರಾಜ ಯತಿವರೇಣ್ಯರು ತಮ್ಮ `ತೀರ್ಥ ಪ್ರಬಂಧ'ದಲ್ಲಿ ಭೀಮಸೇನ ಕುಂಭಾಸುರನನ್ನು ಅಸಿ (ಕತ್ತಿ)ಯಿಂದ ಸಂಹರಿಸಿದುದರಿಂದಲೇ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ. ಮುಂದಕ್ಕೆ ಅಪಭ್ರಂಶವಾಗಿ ಕುಂಭಾಶಿ ಎಂಬ ಹೆಸರೂ ಆ ಊರಿಗೆ ಬಂತು. ಈ ಪ್ರದೇಶಕ್ಕೆ ನಾಗಾಚಲ ಎಂಬ ಹೆಸರೂ ಇತ್ತು. ಗಣಪತಿ ಆನೆರೂಪದಲ್ಲಿ ಭೀಮನಿಗೆ ಕಂಡು ಕತ್ತಿ ಅನುಗ್ರಹಿಸಿದ ಪ್ರದೇಶದಲ್ಲಿ ಗಣಪತಿ ಉದ್ಭವಿಸಿದ. ಸೊಂಡಿಲಿನ ಆಕಾರವಿರುವ ಮುಖಕ್ಕೆ ಮಾತ್ರ ಅಲ್ಲಿ ನಿತ್ಯ ಪೂಜಾದಿ ವಿನಿಯೋಗಗಳು ನಡೆಯುತ್ತವೆ. ಉಳಿದ ಭಾಗ ಗೋಡೆಯಿಂದ ಆವೃತವಾಗಿದೆ. ಆನೆ ರೂಪದಿಂದ ಪ್ರತ್ಯಕ್ಷನಾದ ಗಣಪತಿ ಭಕ್ತಾಭೀಷ್ಟ ಪ್ರದಾತ ಎಂಬುದು ನಂಬಿಕೆ.
ಸುಮಾರು ಏಳು ತಲೆಮಾರಿನಿಂದ ಶಿವಳ್ಳಿ ಬ್ರಾಹ್ಮಣ ಪಂಗಡದ ಉಪಾಧ್ಯಾಯ ಎಂಬ ವರ್ಗಕ್ಕೆ ಇಲ್ಲಿನ ಪೂಜೆ, ಆಡಳಿತ ಇದೆ. ದೇವಳದ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರು ಹಾಗೂ ಭಜಕರ ನೆರವಿನೊಂದಿಗೆ ಈ ವರ್ಗ ಮಾಡಿದೆ. ಪಂಚಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ಗಣಹೋಮ ಇತ್ಯಾದಿಗಳು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು. ಇಲ್ಲಿನ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

ವಾರಾಹಿ ನದಿಯ ಉತ್ತರ ದಂಡೆಯ ಮೇಲಿರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ಸ್ಥಳ ಪ್ರಾಚೀನ ರಾಜಧಾನಿಯಾಗಿ, ಹಲವು ಧರ್ಮಗಳ ನೆಲೆಯಾಗಿ ಕಲೆ- ಸಾಹಿತ್ಯ ಸಂಸ್ಕೃತಿಗಳ ತವರೂರಾಗಿಯೂ ಪ್ರಸಿದ್ಧ. ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 45 ಕಿ. ಮೀ., ಕುಂದಾಪುರದಿಂದ ಈಶಾನ್ಯಕ್ಕೆ 8 ಕಿ. ಮೀ. ದೂರದಲ್ಲಿರುವ ಹಟ್ಟಿಯಂಗಡಿಯ ಪ್ರಮುಖ ಆಕರ್ಷಣೆ ಇಲ್ಲಿನ ವಿನಾಯಕ ದೇವಸ್ಥಾನ.
ಪಟ್ಟಿ, ಹಟ್ಟಿ ನಗರ ಎಂದೆಲ್ಲಾ ಕರೆದುಕೊಳ್ಳುತ್ತಿದ್ದ ಹಟ್ಟಿಯಂಗಡಿ, ತುಳುನಾಡನ್ನು ಆಳಿದ ಅಳುಪರ ರಾಜಧಾನಿ. ಇಲ್ಲಿನ ಗಣಪತಿ ದೇವಾಲಯದ ವಿನಾಯಕ ಮೂರ್ತಿ ಕರ್ನಾಟಕದ ಪ್ರಾಚೀನ ಗಣಪತಿ ಮೂರ್ತಿಗಳಲ್ಲಿ ಎರಡನೆಯದು. (ಮೊದಲನೆಯದು ಗೋಕರ್ಣ ಗಣಪತಿ). ಗಾಣಪತ್ಯರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ಈ ದೇವಳದ ಉಗಮವಾಯಿತೆಂದು ಇತಿಹಾಸಜ್ಞ ಡಾ. ಪಿ. ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಇಲ್ಲಿನ ವಿನಾಯಕ ವಿಗ್ರಹ ಸುಮಾರು 5- 6ನೇ ಶತಮಾನಕ್ಕೆ ಸೇರಿದುದು. ಸುಮಾರು ಒಂದು ಸಾವಿರದ ಐನೂರು ವರ್ಷಗಳಿಂದ ಭಕ್ತರಿಂದ ಪೂಜೆಗೊಂಡ ವಿಗ್ರಹ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ವಿನಾಯಕ ದೇವಾಲಯ ಚತುರಸ್ರ ಆಕಾರದಲ್ಲಿದೆ. ಗರ್ಭಗೃಹದಲ್ಲಿರುವ ವಿನಾಯಕ ದ್ವಿಬಾಹು. ಕೃಷ್ಣಶಿಲಾ ವಿಗ್ರಹ. ಬಾಲಗಣೇಶನ ವಿಗ್ರಹ ಇದಾಗಿದೆ ಎಂಬುದು ವಿಗ್ರಹ ತಜ್ಞರ ಅಭಿಪ್ರಾಯ. ಕುಳಿತ ಭಂಗಿಯ ಅಪೂರ್ವ ವಿಗ್ರಹವಿದು. ಪಾಣಿಪೀಠದ ಮೇಲ್ಘಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆಯಿದೆ. ಆಗಮ ತಂತ್ರ ವೈದಿಕ ವಿಧಾನದಂತೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಿತ್ಯ ಅಷ್ಟದ್ರವ್ಯ ಗಣಪತಿ ಹವನ ಇಲ್ಲಿನ ವಿಶೇಷ. ಗಣಪತಿ ಇಷ್ಟಪ್ರದಾಯಕ ಎಂದೇ ಪ್ರಸಿದ್ಧಿ. ಭಕ್ತರ ಪ್ರಾರ್ಥನೆಗೆ ಹೂ ಪ್ರಸಾದ ನೀಡುವುದು ಈ ದೇವಳದ ವಿಶೇಷ. ದೇವಳದ ಆಡಳಿತ ಮೊಕ್ತೇಸರ ಎಚ್. ರಾಮಚಂದ್ರ ಭಟ್ಟ ದೇವಳದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

(ಸಂಯುಕ್ತ ಕರ್ನಾಟಕ: ಆ. 30, 2008)

ಜೂನ್ 7, 2010

ವರುಣ ಕೃಪೆಗೆ ಮಂಡೂಕ ಪರಿಣಯ!

ಕಿವಿಗಡಚಿಕ್ಕುವ ಬ್ಯಾಂಡ್- ವಾದ್ಯಗಳ ಸದ್ದು, ನಭವನ್ನು ಬೇಧಿಸುವ ತೆರದಿ ಸಿಡಿಯುವ ಪಟಾಕಿ ಸದ್ದು, ಹರ್ಷಚಿತ್ತ ಮಂದಿಯ ಸಾಲು ಸಾಲು.... ಸಾಲಂಕೃತ ಮಂಟಪದಲ್ಲಿ ಸಾಗಿಬರುತ್ತಿರುವ ವಧೂ-ವರರು!
ಇದು ಉಡುಪಿಯಲ್ಲಿ ನಡೆದ ವಿವಾಹ ಸಂಭ್ರಮದ ದೃಶ್ಯ. ಇದು ಅಂತಿಂಥ ಮದುವೆಯಲ್ಲ. ಸಾಕ್ಷಾತ್ ಮಂಡೂಕ ಪರಿಣಯ! ರಟ್ಟಿನ ಪೆಟ್ಟಿಗೆಯೊಳಗೆ ಬಂಧಿತವಾಗಿದ್ದ ಹೆಣ್ಣು ಕಪ್ಪೆಯೊಂದು ಅಂಥದೇ ಇನ್ನೊಂದು ಪೆಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ ಗಂಡು ಕಪ್ಪೆಯನ್ನು ಕಾಣುವ (ನೆಗೆಯುವ!) ತವಕ! ಈ ಅಪೂರ್ವ ಸನ್ನಿವೇಶವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಅನೇಕ ಮಂದಿಗೆ ಕುತೂಹಲ.
ವೈಶಾಖವನ್ನು ಹೋಲುವ ಬಿಸಿಲು ಹಾಗೂ ಸೆಖೆ ಆಷಾಢ ಮಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಮಳೆಗಾಗಿ ವರುಣನಿಗಾಗಿ ಮೊರೆಯಿಡುವ ವಿನೂತನ ಮಾದರಿಯಾಗಿ ಮಂಡೂಕ ಪರಿಣಯ (ಕಪ್ಪೆಗಳ ಮದುವೆ)ವನ್ನು ಏರ್ಪಡಿಸಲಾಯಿತು. ಸದಾ ಹೊಸತೇನನ್ನಾದರೂ ಮಾಡಿ ತನ್ಮೂಲಕ ಪ್ರಚಾರ ಪಡೆಯುವ ವಿಚಿತ್ರ ಮನೋಭಾವದ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯಲ್ಲೇ ಪ್ರಥಮದ್ದಾದ ಹಾಗೂ ವಿನೂತನವಾದ ಕಪ್ಪೆಗಳ ವಿವಾಹವನ್ನು ಏರ್ಪಡಿಸುವುದರೊಂದಿಗೆ ಹಲವರ ಗಮನ ಸೆಳೆದರು.
ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡರ ತಲಾಷೆಗಾಗಿ ಸಾಕಷ್ಟು ಪರಿಶ್ರಮ ಪಡಲಾಯಿತು. ಕೊನೆಗೂ ಗಣೇಶರಾಜ್ ಸರಳೇಬೆಟ್ಟು ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡನ್ನು ತಂದು (ಪ್ರಾಣಿಶಾಸ್ತ್ರಜ್ಞರಿಂದ ದೃಢೀಕರಿಸಿ?) ಅವುಗಳನ್ನು ಪ್ರತ್ಯೇಕವಾದ ರಟ್ಟಿನ ಪೆಟ್ಟಿಗೆಯಲ್ಲಿಟ್ಟು, ತಳ್ಳುಗಾಡಿಯಲ್ಲಿ ಸಾಲಂಕೃತ ಮಂಟಪವೊಂದನ್ನು ನಿರ್ಮಿಸಿ, ಇಲ್ಲಿನ ಡಯಾನಾ ವೃತ್ತದಿಂದಾರಂಭಿಸಿ, ಬಸ್ ನಿಲ್ದಾಣ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ವಾದ್ಯ, ಧ್ವನಿವರ್ಧಕ, ಗರ್ನಾಲು (ಪಟಾಕಿ), ಸಾಲದೆಂಬಂತೆ ಕಪ್ಪೆಗಳ ಮದುವೆಗಾಗಿಯೇ ಬಂದ ಕೆಲವರಿಂದ ಕೇಕೇ ನೃತ್ಯ ಇತ್ಯಾದಿ ಎಲ್ಲವೂ ಇತ್ತು. ಮದುವೆ ಸುಸಾಂಗವಾಗಿ ನಡೆಯಲು ಆರಕ್ಷಕರ ರಕ್ಷಣೆಯೂ ದೊರಕಿತ್ತು!
ಬಸ್ ನಿಲ್ದಾಣವೇ ಮದುವೆ ಮಂಟಪವಾಗಿ ರೂಪುಗೊಂಡು ನಿತ್ಯಾನಂದ ಒಳಕಾಡು ಗಂಡು ಕಪ್ಪೆಯ ಪರವಾಗಿ ಹೆಣ್ಣು ಕಪ್ಪೆಯ ಕಾಲಿಗೆ ಕಾಲುಂಗುರ ತೊಡಿಸಿ, ಮಾಂಗಲ್ಯ ಬಿಗಿದರು. ಅರಿಶಿಣ- ಕುಂಕುಮ, ಸೇಸೆ ಹಾಕಲಾಯಿತು. ಅಕ್ಷತಾರೋಪಣವೂ ನಡೆಯಿತು. ಹೂಹಾರ ಹಾಕಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಅಲ್ಲಿ ನೆರೆದಿದ್ದವರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಾಲ ನಡೆದ ಕಪ್ಪೆ ಮದುವೆ ಕಾರ್ಯಕ್ರಮ ನಡೆಯಿತು. ಮದುವೆ ಊಟ ಎಲ್ಲಿ ಎಂದು ಅಲ್ಲಿ ನೆರೆದಿದ್ದವರೋರ್ವರು ದೊಡ್ಡ ದನಿಯಲ್ಲಿ ಕೇಳಿದ್ದು ಕುಚೋದ್ಯವಾಗಿತ್ತು!
ಇದೆಲ್ಲವೂ ನಡೆದದ್ದು ಮಳೆಗಾಗಿ. ಈ ಮೊರೆ ವರುಣನಿಗೆ ಕೇಳಿಸೀತೇ ಎಂದು ಕಾದುನೋಡಬೇಕಷ್ಟೇ!!

(ಸಂಯುಕ್ತ ಕರ್ನಾಟಕ: ಜು. 16, 2008)

ಉದ್ವಾರ್ಚನೆ: ಇದು ಕೃಷ್ಣಮಠದ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ

ಉದ್ವಾರ್ಚನೆ- ಇದು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ. ಯತಿಗಳಿಂದಲೇ ಈ ಅಪೂರ್ವ ಕಾರ್ಯಕ್ರಮಕ್ಕೆ ಚಾಲನೆ.
ವಜ್ರ ಕವಚಧಾರಿಯಾಗಿ, ಬಾಲಕೃಷ್ಣನಾಗಿ ಕಂಗೊಳಿಪ ಪೊಡವಿಗೊಡೆಯ ರುಕ್ಮಿಣೀಕರಾರ್ಚಿತ ಉಡುಪಿ ಶ್ರೀಕೃಷ್ಣ ಮೂರುತಿ ಬೊಳ್ಗೊಡೆ (ತಾಳೆಗರಿ ಕೊಡೆ) ಸಹಿತ ಈಚಲು ಚಾಪೆ ಧರಿಸಿ ಬೆಚ್ಚನೆ ಕುಳಿತಿದ್ದಾನೆ. ಆತನ ದರ್ಶನಾಕಾಂಕ್ಷಿಗಳಾಗಿ ಬಂದ ಭಕ್ತರಿಗೆ ತನ್ನ ಮುಖವನ್ನೂ ಆತ ತೋರಿಸಲೊಲ್ಲ!
ಇದು ಉಡುಪಿ ಕೃಷ್ಣ ಕೋಪಾವಿಷ್ಟನಾದ ಸಂದರ್ಭ ಎಂದರೆ ಅದು ತಪ್ಪಾಗುತ್ತದೆ. ಇದು ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಕಲೆತು ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಉತ್ಸವಪ್ರಿಯ ಶ್ರೀಕೃಷ್ಣನಿಗೆ ನಿತ್ಯವೂ ವಿವಿಧ ಉತ್ಸವಗಳು. ಸಾಲದಂತೆ ಚತುರ್ದಶ ಭುವನದೊಡೆಯನಿಗೆ ದಿನವೂ 14 ಬಗೆಯ ಪೂಜೆಗಳು. ಬಹುವಿಧ ಪೂಜೆಗಳು, ಆಗಮಿಸುವ ಭಕ್ತಾದಿಗಳಿಗೆ ಆಶೀರ್ವಾದ ಇತ್ಯಾದಿಗಳಿಂದ ಸದಾ ಬ್ಯುಸಿಯಾಗಿರುವ ಪರ್ಯಾಯ ಪೀಠಸ್ಥ ಯತಿಗಳಿಗೆ ದೇವಳ ಗರ್ಭಗುಡಿ ಸಹಿತ ದೇವಳದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ ಮತ್ತು ಸಮಯವೂ ಕಮ್ಮಿ. ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಉದ್ವಾರ್ಚನೆ ಎಂಬ ವಿಶಿಷ್ಟ, ಸಾಮುದಾಯಿಕ ಕಾರ್ಯಕ್ರಮ ಜಾರಿಗೆ ಬಂದಿರಬೇಕು. ಶ್ರೀಸಾಮಾನ್ಯನೂ ಯತಿಗಳೊಂದಿಗೆ ಸೇರಿಕೊಂಡು ಈ ವಿಶಿಷ್ಟ ಸೇವೆಯಲ್ಲಿ ಭಾಗಿಯಾಗಲು ಸುವರ್ಣಾವಕಾಶ.
ಮಾತ್ರವಲ್ಲದೇ ಪ್ರಥಮೈಕಾದಶಿ ಬಳಿಕ ಶ್ರೀಕೃಷ್ಣ ಪವಡಿಸುತ್ತಾನೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ವಿಶೇಷ ಉತ್ಸವಾದಿಗಳಿಲ್ಲ. ಈ ಸಮಯದಲ್ಲಿ ಬರುವ ಗೌಜಿಯ ಉತ್ಸವ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ ಮಾತ್ರ. ಇನ್ನು ಭಗವಂತ ನಿದ್ದೆಯಿಂದೇಳುವುದು ಉತ್ಥಾನ ಏಕಾದಶಿಗೆ. ಅಲ್ಲಿಯ ವರೆಗೆ ಕೃಷ್ಣನ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರಕ್ಕೆ ಕೊಂಡೊಯ್ಯುವಂತೆಯೂ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣನ ನಿದ್ರೆಗೆ ಭಂಗವಾಗಬಾರದಲ್ಲಾ, ಆತನ ಶಯನಾಗೃಹ ಶುಚಿಯಾಗಿರಬೇಕಲ್ಲಾ? ಅದಕ್ಕೇ ಈ ಉದ್ವಾರ್ಚನೆ.
ಪುತ್ತಿಗೆ ಪರ್ಯಾಯ ಸಂದರ್ಭ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಅದಮಾರು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತೀರ್ಥಹಳ್ಳಿ ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯತಿಗಳೆಲ್ಲ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಗಳಾದರು. ಭಕ್ತರೂ ಅದರಲ್ಲಿ ಪಾಲ್ಗೊಂಡರು. ಬಳಿಕ ಮಧ್ವಸರೋವರದಲ್ಲಿ ಸ್ನಾನಗೈದು ಉದ್ವಾರ್ಚನೆಯನ್ನು ಕೃಷ್ಣಾರ್ಪಣಗೈದರು.

(ಸಂಯುಕ್ತ ಕರ್ನಾಟಕ: ಜು. 9, 2008)

ಇವರು ಉಡುಪಿ ಜಿಲ್ಲೆಯ ಪತ್ರಿಕೋದ್ಯಮಿಗಳು

ಉಡುಪಿ ಜಿಲ್ಲೆಯೂ ಸೇರಿಕೊಂಡಂತೆ ಅವಿಭಜಿತ ದ. ಕ. ಜಿಲ್ಲೆಯ ಪತ್ರಿಕೋದ್ಯಮಕ್ಕೆ ಸುಮಾರು 150 ವರ್ಷಗಳ ದೀರ್ಘ ಇತಿಹಾಸವಿದೆ. ಜಿಲ್ಲೆಯಲ್ಲಿ ಧೀಮಂತ ಪತ್ರಕರ್ತರಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇತಿಹಾಸ ಸೇರಿದವರು ನೂರಾರು ಮಂದಿ. ಈ ಕ್ಷೇತ್ರದಲ್ಲಿ ದುಡಿದು ನಿವೃತ್ತರಾದವರು, ಈಗ ಕಾರ್ಯಪ್ರವೃತ್ತರಾಗಿರುವವರ ಸಂಖ್ಯೆಯೂ ಅಪಾರ. ಇಲ್ಲಿನ ಪತ್ರಿಕೋದ್ಯಮದ ಇತಿಹಾಸವೂ ರೋಚಕ.
ಹುರುಳಿ ಭೀಮರಾಯರು ಪತ್ರಿಕಾ ಕ್ಷೇತ್ರದ ಮೊದಲ ತಲೆಮಾರಿನವರು. `ನವಯುಗ'ದ ಕೆ. ಹೊನ್ನಯ್ಯ ಶೆಟ್ಟಿ, `ಪ್ರಭಾತ'ದ ಕುಡ್ಪಿ ವಾಸುದೇವ ಶೆಣೈ, `ನವಭಾರತ'ದ ವಿ. ಎಸ್. ಕುಡ್ವ, `ಪಂಚ್ಕದಾಯಿ'ಯ ಬಿ. ವಿ. ಬಾಳಿಗ, `ಸುಪ್ರಭಾತ'ದ ಸರಸ್ವತಿಬಾಯಿ ರಾಜವಾಡೆ, `ಕಸ್ತೂರಿ'ಯ ಪಾ. ವೆಂ. ಆಚಾರ್ಯ, ಬೆ. ಸು. ನಾ. ಮಲ್ಯ ನಂತರದ ತಲೆಮಾರಿನವರು.
ಇದೀಗ ನಮ್ಮೊಡನಿರುವ ಧೀಮಂತ ಪತ್ರಕರ್ತರೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ವ್ಯವಸಾಯ ಕಡಿಮೆ ಏನಲ್ಲ.

ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಮಾಧವ ವಿಠಲ ಕಾಮತ್ ಪತ್ರಿಕಾರಂಗದಲ್ಲಿ ಜನಮನದಲ್ಲಿ ನೆಲೆನಿಲ್ಲಬಲ್ಲ ಕೆಲವೇ ಕೆಲವು ಪತ್ರಿಕೋದ್ಯಮಿಗಳಲ್ಲಿ ಒಬ್ಬರು. `ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಪ್ರಮುಖ ವರದಿಗಾರರಾಗಿ ಸುಮಾರು 3 ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ಪತ್ರಿಕಾ ರಂಗದ ಒಳಹೊರಗುಗಳ ಖಚಿತಾನುಭವ ಪಡೆದು `ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ'ದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. 12ಕ್ಕೂ ಅಧಿಕ ಪತ್ರಿಕೆಗಳಿಗೆ ಅಂಕಣಕಾರರಾದ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ತಿಲಕ್ ಮೊಹರ್ರಿ ಪತ್ರಿಕೋದ್ಯಮ ಪ್ರಶಸ್ತಿ, ವಿದ್ಯಾಧಿರಾಜ ಪ್ರಶಸ್ತಿ, ಸಮಾಜ ಭೂಷಣ ಪ್ರಶಸ್ತಿಯಂತಹ ಹೆಮ್ಮೆಯ ಪುರಸ್ಕಾರ ಪಡೆದು ನಾಡಿಗೇ ಹೆಮ್ಮೆ ಎನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಇತಿಹಾಸ, ಜೀವನ ಚರಿತ್ರೆ, ಪತ್ರಿಕಾರಂಗ ಹಾಗೂ ಸೃಜನಶೀಲ ಸಾಹಿತ್ಯ ಕುರಿತು 40ಕ್ಕೂ ಅಧಿಕ ಪುಸ್ತಕಗಳನ್ನು ಡಾ. ಎಂ. ವಿ. ಕಾಮತ್ ಬರೆದಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ನ ಆಡಳಿತ ಮಂಡಳಿ ಸದಸ್ಯರಾಗಿ ಮಣಿಪಾಲದಲ್ಲೇ ಡಾ. ಕಾಮತ್ ನೆಲೆಸಿದ್ದಾರೆ.

ಬನ್ನಂಜೆ ರಾಮಾಚಾರ್ಯ ಹಿರಿಯ ಪತ್ರಿಕೋದ್ಯಮಿ. ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆ ಜೊತೆಗಿದ್ದ ರಾಮಾಚಾರ್ಯ ಸುಮಾರು 15 ವರ್ಷಗಳ ಕಾಲ ಸಂಪಾದಕರೂ ಆಗಿದ್ದರು. ಅದಕ್ಕೂ ಮುಂಚೆ ನವ ಭಾರತ ಪತ್ರಿಕೆಯಲ್ಲಿ ಸುಮಾರು ಒಂದು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು. ಉತ್ತಮ ಬರೆಹಗಾರರೂ ಅಗಿದ್ದ ಅವರು, ಅನೇಕ ಮಂದಿ ಉದಯೋನ್ಮುಖರಿಗೆ ಮಾರ್ಗದರ್ಶಕರಾಗಿದ್ದರು. ಉಡುಪಿಯಲ್ಲಿ ಅವರ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ ಏರ್ಪಟ್ಟಿತ್ತು.
ಅವರು 2010ರ ಫೆ. 6ರಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

`ವಿದ್ಯಾವಾಚಸ್ಪತಿ' ಬಿರುದಾಂಕಿತ ಬನ್ನಂಜೆ ಗೋವಿಂದಾಚಾರ್ಯ ಕೂಡಾ ಪತ್ರಕರ್ತರಾಗಿದ್ದವರು. ಉದಯವಾಣಿ ಆರಂಭದ ದಿನಗಳಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದ ಅವರು, ಸಪ್ತಾಹಿಕ ಪುರವಣಿಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಏಕಪಾಠಿಯಾಗಿರುವ ಅವರಿಗೆ ಯಾವುದೇ ವಿಷಯ ಕುರಿತು ತಕ್ಷಣದಲ್ಲಿ ಗ್ರಹಿಸುವ ಶಕ್ತಿ ಇದೆ. ಶಾಲೆಯಲ್ಲಿ ಅವರು ಕಲಿತದ್ದು ಬಹಳ ಕಡಿಮೆ. ಆದರೆ, ಸ್ವತ: ಅಧ್ಯಯನ ನಡೆಸಿ ಪ್ರಬುದ್ಧರಾಗಿರುವುದು ಅವರ ವಿಶೇಷತೆ. ಕನ್ನಡ, ಸಂಸ್ಕೃತಗಳ ಜೊತೆಗೆ ಆಂಗ್ಲಭಾಷೆಯಲ್ಲೂ ಅವರು ಪ್ರಭುತ್ವ ಸಾಧಿಸಿದ್ದಾರೆ. ಪ್ರವಚನಕಾರರಾಗಿ, ಲೇಖಕರಾಗಿ ನಮ್ಮ ನಡುವಿರುವ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯ ಪತ್ರಿಕೋದ್ಯಮದಲ್ಲಿ ಒಂದು ದಂತಕತೆ.

1972ರ ಸುಮಾರಿಗೆ ಉದಯವಾಣಿ ಸೇರಿದ ಎ. ಈಶ್ವರಯ್ಯ, ಆಂಗ್ಲಭಾಷೆಯಲ್ಲಿ ಬಿ. ಎ. ಪದವೀಧರರು. ಉದಯವಾಣಿ ಸಾಪ್ತಾಹಿಕ ವಿಭಾಗದ ಸಂಪಾದಕತ್ವವನ್ನು ವಹಿಸಿದ ಅವರು ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಪ್ರಚಾರ ಮತ್ತು ಪ್ರಸಾರಕ್ಕೆ ಸಲ್ಲಿಸಿದ ಕೊಡುಗೆ ಮನನೀಯ. ಲಲಿತ ರಂಗಗಳ ವಿಮರ್ಶೆಗೆ ವೇದಿಕೆ ಒದಗಿಸಿಕೊಟ್ಟ ಈಶ್ವರಯ್ಯ ಮೊದಲ ಬಾರಿಗೆ ಧ್ವನಿಮುದ್ರಿಕೆಗಳ ಬಗ್ಗೆ ವಿಮರ್ಶೆ ಬರೆದವರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 1973ರಲ್ಲಿ ತುಷಾರ ಮಾಸ ಪತ್ರಿಕೆ ಸ್ಥಾಪಕ ಸಂಪಾದಕರಾಗಿ, ಕನ್ನಡ ಚಿತ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದವರು. ಫೋಕಲ್ ಫೋಟೊ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಬೆಂಗಳೂರು, ಸಾಗರ, ಮುಂಬೈ ಮೊದಲಾದೆಡೆಗಳಲ್ಲಿ 50ಕ್ಕೂ ಹೆಚ್ಚು ಛಾಯಾಗ್ರಹಣ ತರಬೇತಿ ನೀಡಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಗೌರವ ಉಪನ್ಯಾಸಕರೂ ಆಗಿದ್ದಾರೆ.
ಸಂಗೀತ ವಿಮರ್ಶಕರೂ ಆಗಿರುವ ಈಶ್ವರಯ್ಯ, ಮಂಗಳೂರಿನ ಸಂಗೀತ ಪ್ರತಿಷ್ಠಾನ ಅಧ್ಯಕ್ಷ. ಸಣ್ಣ ಕತೆಗಳು, ವಿಮರ್ಶೆ, ಲಲಿತ ಪ್ರಬಂಧ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪೊಲ್ಯ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಂಗ ವಾಚಸ್ಪತಿ ಪ್ರಶಸ್ತಿ, ಪರಶುರಾಮ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.

ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಎನ್. ಗುರುರಾಜ್, ಪತ್ರಿಕೆ ಸಂಪಾದಕರೂ ಆಗಿದ್ದರು. ಪ್ರಸ್ತುತ ಸದ್ರಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ಪತ್ರಿಕೆಯ ಪುಟ ಕಟ್ಟುವಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ತಮ ನಾಟಕಕಾರ, ದಿಗ್ದರ್ಶಕ, ಲೇಖಕರಾಗಿರುವ ಎನ್. ಗುರುರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು ಪ್ರಾಪ್ತವಾಗಿವೆ. ನಿಗರ್ವಿ, ಸ್ನೇಹಜೀವಿಯಾಗಿರುವ ಗುರುರಾಜ್ ಅನೇಕ ಮಂದಿ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ.

ಕರ್ನಾಟಕದಿಂದ ದೂರದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಬಾ. ಸಾಮಗ ಅಲ್ಲಿಯೂ ಕನ್ನಡ ಪತ್ರಿಕೋದ್ಯಮ ನಡೆಸುತ್ತಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ಸಾಮಗ, ತನ್ನ ವಿದ್ಯೆಗೆ ಸೂಕ್ತವಾದ ಉದ್ಯೋಗ ಸಿಗದಿದ್ದಾಗ ಸ್ವತಂತ್ರ ಕಾಯಕ ಕೈಗೊಳ್ಳುವ ದಿಟ್ಟತನ ಮೆರೆದವರು. ಅದಕ್ಕೆ ಅವರು ಆಯ್ದುಕೊಂಡದ್ದು ಪತ್ರಿಕೋದ್ಯಮ!
ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಸನ್ಮಾನಿಸುವುದು, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ಕನ್ನಡ ಸೇನಾನಿಗಳ ಸಂಸ್ಮರಣೆ ಇತ್ಯಾದಿಗಳನ್ನು ದೆಹಲಿಯಲ್ಲಿ ನಿರ್ವಹಿಸುವ ಅವರಿಗೆ ಸಾಕಷ್ಟು ಪ್ರಶಂಸೆಯೂ ಲಭಿಸಿದೆ. ಕಳೆದ 25 ವರ್ಷಗಳ ಹಿಂದೆ `ದೆಹಲಿ ಕನ್ನಡಿಗ' ಎಂಬ ಪತ್ರಿಕೆ ಆರಂಭಿಸಿರುವ ಸಾಮಗ, ಇಂದಿಗೂ ಅವಿಚ್ಛಿನ್ನವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. `ತುಳುವೆರ್' ತುಳು ಪತ್ರಿಕೆ ದೆಹಲಿ ಕನ್ನಡಿಗ ಪತ್ರಿಕೆಯ ಸಂಗಾತಿ.
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಶಂಕರನಾರಾಯಣ ಸಾಮಗ ಅವರ ಪುತ್ರರಾಗಿರುವ ಬಾಲಕೃಷ್ಣ ಸಾಮಗ, ತಮ್ಮ ತಂದೆಯವರ ಕುರಿತ ಪುಸ್ತಕವೊಂದನ್ನು ಪ್ರಕಟಿಸುವ ಇಚ್ಛೆ ಹೊಂದಿದ್ದಾರೆ.

(ಸಂಯುಕ್ತ ಕರ್ನಾಟಕ: ಜು. 1, 2008)

ಜೂನ್ 6, 2010

ಹಾಸ್ಯಪ್ರಿಯರಿಗೆ ಮುದನೀಡುವ `ಸುಹಾಸ': ಕು. ಗೋ.

ಕನ್ನಡಿಗರಿಗೆ ಬಿಡಿ, ಉಡುಪಿಯವರಿಗೇ ಹೆರ್ಗ ಗೋಪಾಲ ಭಟ್ಟರೆಂದರೆ ಯಾರಿಗೂ ತಿಳಿಯುವುದಿಲ್ಲ. ಆದರೆ, ಕು. ಗೋ. ಎಲ್ಲರಿಗೂ ಸುಪರಿಚಿತ. ಎಲ್ಲೇ ಸಾಹಿತ್ಯಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಕು. ಗೋ. ಹಾಜರ್. ಮಾತ್ರವಲ್ಲದೇ ಆ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ತನ್ನದೇ ಸ್ವಂತ ಕಾರ್ಯಕ್ರಮ ಎಂಬಷ್ಟು ಮಟ್ಟಿಗೆ ತಾದಾತ್ಮ್ಯತೆಯನ್ನು ಪಡೆದುಕೊಳ್ಳುವವರು. ಕಪ್ಪು ಫ್ರೇಮಿನ ಕನ್ನಡಕಧಾರಿ, ಬಿಳುಪಿಗೆ ಮಾಗಿದ ಕೂದಲಿನ ತೆಳ್ಳನೆಯ ಶರೀರದ ಎಚ್. ಗೋಪಾಲ ಭಟ್ಟ ಹೆಚ್ಚಾಗಿ ಕಪ್ಪು ಪ್ಯಾಂಟ್, ಚೆಕ್ಸ್ ಅಂಗಿ ಧರಿಸುವುದೇ ಹೆಚ್ಚು. ಆದರೆ, ಅವರ ಬಗಲಲ್ಲಿ ಜೋಳಿಗೆಯೊಂದು ತಪ್ಪಿದ್ದಲ್ಲ. ಅದರಲ್ಲಿ ಪುಸ್ತಕಗಳ ರಾಶಿಯೇ ಇರುತ್ತದೆ. ಯಾರಾದರೂ ಸಿಕ್ಕಿದರೆ ಜೋಳಿಗೆಯೊಳಗಿಂದ ಪುಸ್ತಕವೊಂದು ಹೊರಬಂದು ತನ್ನ ಎದುರಿಗಿರುವ ವ್ಯಕ್ತಿಯ ಕೈಗೆ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಹಣ ಕೊಟ್ಟರೂ ಸೈ, ಇಲ್ಲವಾದರೂ ಜೈ. ಪುಸ್ತಕ ಹಂಚುವುದು ಅವರಿಗೆ ಒಂದು ಹುಚ್ಚು! ಇದು ಕು. ಗೋ. ಅವರ ಪಾರ್ಶ್ವ ಪರಿಚಯವಷ್ಟೇ!
ಕು. ಗೋ. ಜೊತೆಯಲ್ಲಿದ್ದರೆ ನಗುವಿಗೆ ಕೊರತೆ ಇಲ್ಲ. ಖುಷಿಯ ಗಳಿಗೆಗಳಿಗೆ ಮೋಸವಿಲ್ಲ. ಅವರು ನಗುತ್ತಾ, ನಗಿಸುತ್ತಾ ನ್ಮನ್ನು ಆಕ್ರಮಿಸಿಬಿಡುತ್ತಾರೆ. ಮಗುವಿನ ಮನಸ್ಸಿನ ಕು. ಗೋ. ಅವರಿಗೆ ನಗಿಸುವುದೇ ಹವ್ಯಾಸ. ಅವರು ತನ್ನ ಸ್ವಂತ ಬದುಕಿನಲ್ಲಿ ಅದೆಷ್ಟೋ ನೋವನ್ನುಂಡರೂ ಇತರರನ್ನು ನಗಿಸುತ್ತಲೇ ಇರುತ್ತಾರೆ, ತಮ್ಮ ಅಳು ನುಂಗಿ. ಸ್ವತ: ಸಾಹಿತಿ, ಲಘು ಹಾಸ್ಯ, ಪ್ರಬಂಧಗಳ ಬರೆಹಗಾರ. ಅವರೋರ್ವ ಸಾಹಿತ್ಯ ಪರಿಚಾರಕ.
ಎಲ್ಐಸಿಯಲ್ಲಿ ಉದ್ಯೋಗಿಯಾಗಿದ್ದ ಅವರು, ಸುಮಾರು 38 ವರ್ಷಗಳ ಸುಧೀರ್ಘ ಸೇವೆಯ ಬಳಿಕ ಸ್ವಯಂ ನಿವೃತ್ತಿ ಪಡೆದವರು. ಆ ಬಳಿಕ ಅವರ ಜೀವನವೆಲ್ಲಾ ಬರಿಯ ಸಾಹಿತ್ಯ ಮತ್ತು ಸಾಹಿತ್ಯ ಪರಿಚಾರಿಕೆಯಲ್ಲಿ. ಉಡುಪಿಯಲ್ಲಿ `ಸುಹಾಸ' ಎಂಬ ಹಾಸ್ಯಪ್ರಿಯರ ಸಂಘಟನೆಯೊಂದನ್ನು ಕಟ್ಟಿ ಅವರು ಅದರ ಕಾರ್ಯದರ್ಶಿಯಾಗಿದ್ದಾರೆ. ನಡುಮನೆ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ನವಿರು ಹಾಸ್ಯದ ಕು. ಗೋ. ಅವರ ಲೇಖನಗಳು ಅಪ್ಪಟ ಹರಟೆಗಾರನ ಜೊತೆ ನಡೆಸುವ ಸಂಭಾಷಣೆಯಂತಿರುತ್ತವೆ.
ಅವರ `ಲೊಳಲೊಳಾಯಿ' ಕೃತಿಗೆ 2002ರಲ್ಲಿ ಗೋರೂರು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೇರಳ ಸರಕಾರದ 8ನೇ ತರಗತಿಗೆ ಅದು ಪಠ್ಯವಾಗಿದೆ. 2003ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಹಾಸ್ಯದ ಚಿಲುಮೆಯಂತಿರುವ ಕು. ಗೋ. ನೂರ್ಕಾಲ ಬಾಳಲಿ. ಅವರ ನಗುವಿನ ಒರತೆ ಎಂದಿಗೂ ಬತ್ತದಿರಲಿ.

(ಸಂಯುಕ್ತ ಕರ್ನಾಟಕ: ಜೂ. 2, 2008)

ಮೇ 29, 2010

`ಸ್ಟೇಟ್ಹೋಂ' ಯುವತಿಯರ ಕೈಹಿಡಿದ ಬ್ರಾಹ್ಮಣ ಯುವಕರು!

ಇಲ್ಲಿ ಬಾಯಾರಿ ಬಂದವರಿಗೆ ಪಾನಕದ ವ್ಯವಸ್ಥೆಯಿತ್ತು. ನಗುಮೊಗದ ಸ್ವಾಗತವಿತ್ತು. ವಾದ್ಯಘೋಷ ಮೊಳಗುತ್ತಿತ್ತು. ಮಂತ್ರ ಪಠಣವೂ ಕೇಳಿಬರುತ್ತಿತ್ತು.
ಉಡುಪಿ ಸ್ಟೇಟ್ಹೋಂ (ಸ್ತ್ರೀನಿಕೇತನ) ಮದುವೆ ಮಂಟಪವಾಗಿತ್ತು. ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ನಿರ್ಗತಿಕ ಹೆಣ್ಣುಮಕ್ಕಳಿಗೆ ಆಸರೆ ನೀಡುವ ಸ್ತ್ರೀನಿಕೇತನ ಕಲ್ಯಾಣ ಮಂಟಪವಾಗಿತ್ತು! ಎಲ್ಲಿಂದಲೋ ಬಂದು ಇಲ್ಲಿನವರೇ ಆದ ನಾಲ್ವರು ತರುಣಿಯರಿಗೆ ಕಂಕಣಭಾಗ್ಯ ಒಲಿದುಬಂದಿತ್ತು. ಅವರ ಪಾಣಿಗ್ರಹಣಕ್ಕಾಗಿ ನಾಲ್ವರು ಯುವಕರು, ಅದರಲ್ಲೂ ಸುಸ್ಥಿತಿಯ ಬ್ರಾಹ್ಮಣ ತರುಣರು ಅಭಿಜಿನ್ ಸುಮೂರ್ತಕ್ಕಾಗಿ ಇದಿರುನೋಡುತ್ತಿದ್ದರು!
ಇದು ಉಡುಪಿ ನಿಟ್ಟೂರು ಬಳಿಯ ಸ್ಟೇಟ್ಹೋಂನಲ್ಲಿ ನಡೆದ ಅಪೂರ್ವ ವಿವಾಹ ಮಹೋತ್ಸವದ ಸಂಭ್ರಮದ ನೋಟ.
ವಿವಾಹ ಸ್ವರ್ಗದಲ್ಲಿ ನಡೆಯುತ್ತದೆ ಎಂಬ ಮಾತಿದೆ. ಈಚಿನ ದಿನಗಳಲ್ಲಿ ಮಹಿಳೆ ಹಾಗೂ ಪುರುಷರ ಜನನ ಪ್ರಮಾಣದಲ್ಲಿನ ಅಂತರ ಬಹಳಷ್ಟಿದ್ದು, ವಧುಗಳ ಕೊರತೆ ತರುಣರನ್ನು ಕಾಡುತ್ತಿದೆ. ಈ ಸಮಸ್ಯೆ ಎಲ್ಲಾ ವರ್ಗಗಳವರಲ್ಲಿದ್ದರೂ ಬ್ರಾಹ್ಮಣರಲ್ಲಿ ಅದು ಹೆಚ್ಚಿದೆ. ಅದಕ್ಕೆ ಕಾರಣ 1970ರ ದಶಕದಲ್ಲಿ ಆರಂಭವಾದ ಭ್ರೂಣಪತ್ತೆಯ ಅಲ್ಟ್ರಾಸ್ಕ್ಯಾನಿಂಗ್ ಎಂಬ ಅಂದಿನ ಅನಿಷ್ಟ ಪದ್ಧತಿಯನ್ನು ಇತರರಿಗಿಂತ ಬ್ರಾಹ್ಮಣರು ಬೇಗನೇ ನೆಚ್ಚಿಕೊಂಡ ಪರಿಣಾಮವೋ, ಅಥವಾ ಕುಟುಂಬ ಯೋಜನೆ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡ ಫಲವೋ ಅಂತೂ ಈಗ ಮದುವೆಗೆ ವಯಸ್ಸಾದ, ವಯಸ್ಸು ಮೀರಿದ ಯುವಕರಿಗೆ ಯುವತಿಯರಿಲ್ಲ. ಜೊತೆಗೆ ಕೃಷಿಕರು, ಪೌರೋಹಿತ್ಯ ಮಾಡುವವರು, ಹಳ್ಳಿತೋಟದ ಮನೆಯವರು, ಹೋಟೆಲ್ನವರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಷರತ್ತು ವಿಧಿಸುತ್ತಿರುವ ಹೆಣ್ಣು ಹೆತ್ತವರ ಪರಿ ವಿವಾಹಾಪೇಕ್ಷಿ ತರುಣರಿಗೆ ಕಂಠಕಪ್ರಾಯವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ವಧುಗಳ ಕೊರತೆಯಿಂದ ತತ್ತರಿಸಿಹೋಗಿರುವ, ಸಾಕಷ್ಟು ಸ್ಥಿತಿವಂತರಾಗಿರುವ ನಾಲ್ವರು ಬ್ರಾಹ್ಮಣ ವರರು ವಧೂನ್ವೇಷಣೆಗಾಗಿ ಇಲ್ಲಿನ ಸ್ಟೇಟ್ಹೋಂಗೆ ಆಗಮಿಸಿ, ತಮ್ಮ ಮನದನ್ನೆಯರನ್ನು ಆರಿಸಿಕೊಂಡರು. ಹಾಗಂತ ಸ್ಟೇಟ್ಹೋಂನ ತರುಣಿಯರು ಅಷ್ಟೇನೂ ಸುಂದರವಾಗಿಲ್ಲ, ವಿದ್ಯಾವಂತರೂ ಅಲ್ಲ. ಅಂಥವರನ್ನು ಕೈಹಿಡಿಯಲು ಮುಂದೆಬಂದ ಈ ತರುಣರು ಸರ್ವರ ದೃಷ್ಟಿಯಲ್ಲಿ ಎತ್ತರಕ್ಕೇರಿದ್ದಾರೆ!
ಉಡುಪಿ ಮಟ್ಟು ರಾಮಕೃಷ್ಣ ರಾವ್ ಎಂಬವರ ಪುತ್ರ ರಾಜೇಶ ರಾವ್, ವೃತ್ತಿಯಲ್ಲಿ ಖಾಸಗಿ ಬಸ್ ನಿರ್ವಾಹಕ. ಆತ ಕರ್ಕು ಎಂಬವರ ಪುತ್ರಿ ಚೋಂದು ಯಾನೆ ಚಂದನಾ ಎಂಬಾಕೆಯ ಕೈಹಿಡಿದಿದ್ದರೆ, ದ. ಕ. ಜಿಲ್ಲೆಯ ಮೂಲ್ಕಿ ದಿ. ರಾಘವ ರಾವ್ ಮಾಂಟ್ರಡಿ ಎಂಬವರ ಪುತ್ರ ಶಂಕರನಾರಾಯಣ ಕೂಸಪ್ಪ ಆಚಾರಿ ಪುತ್ರಿ ಶಶಿಕಲಾಳ ಪಾಣಿಗ್ರಹಣ ಮಾಡಿದ್ದಾರೆ. ಅವರು ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಪರಿಚಾರಕ. ಉ. ಕ. ಜಿಲ್ಲೆಯ ನಡಿಮನೆ ವೆಂಕಟರಮಣ ಹೆಗಡೆ ಅವರ ಪುತ್ರ ವಿನಾಯಕ ವೆಂ. ಹೆಗಡೆ ದಿ. ಬಂಡೆಪ್ಪನವರ ಪುತ್ರಿ ಕಾವ್ಯ ಅವರನ್ನು ಹಾಗೂ ಹಾಸನ ಶೆಟ್ಟಿಹಳ್ಳಿ ಹಿರಗನಹಳ್ಳಿ ಎಚ್. ಎಲ್. ಅನಂತಮೂತರ್ಿ ಪುತ್ರ ಶ್ರೀನಿವಾಸಮೂತರ್ಿ ದಿ. ಬೊಳ್ಳಿ ಅವರ ಪುತ್ರಿ ಕಾವೇರಿಯನ್ನು ಮದುವೆಯಾಗಿದ್ದಾರೆ. ಅವರೀರ್ವರೂ ವೃತ್ತಿಯಲ್ಲಿ ಕೃಷಿಕರು.

ಜಿಲ್ಲಾಧಿಕಾರಿಯಿಂದ ಧಾರೆ: ಮಧ್ಯಾಹ್ನ 12.10ರ ಅಭಿಜಿನ್ ಮುಹೂರ್ತದಲ್ಲಿ ವೈದಿಕರ ಮಂತ್ರಘೋಷ ನಡೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್ ಧಾರೆ ಎರೆದು ವಿವಾಹ ನೆರವೇರಿಸಿದರು. ಇಲಾಖಾಧಿಕಾರಿಗಳು, ವರರ ಕಡೆಯಿಂದ ಆಗಮಿಸಿದ ನೂರಾರು ಬಂಧುಮಿತ್ರರು, ಸ್ಟೇಟ್ಹೋಂ ನಿವಾಸಿಗಳು ಈ ವಿವಾಹಮಹೋತ್ಸವಕ್ಕೆ ಸಾಕ್ಷಿಗಳಾದರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದವರು ಸುಗ್ರಾಸ ಭೋಜನದ ವ್ಯವಸ್ಥೆ ಮಾಡಿದ್ದರೆ, ಕೃಷ್ಣಮಠದವರು ಪೆಂಡಾಲ್ ಹಾಕಿಸಿದ್ದರು.
ಅನಾಥಾಲಯಗಳಿಗೆ ಹೋಗಿ ಮದುವೆಯಾಗುವುದು, ಅಂತರ್ಜಾತೀಯ ವಿವಾಹ ಇತ್ಯಾದಿಗಳೇ ದೊಡ್ಡ ಸುದ್ದಿಯಾಗುತ್ತಿದ್ದ ದಿನಗಳು ಸರಿದು ಇದೀಗ ಸ್ಟೇಟ್ಹೋಂಗಳಿಗೆ ವಧುಗಳಿಗೆ ತಡಕಾಡುವ ಕಾಲ ಬಂದಿದೆ. ವಧುಗಳನ್ನು ವಿಚಾರಿಸಿ ದಿನವಹಿ ಸರ್ವೇ ಸಾಧಾರಣ 5- 6 ದೂರವಾಣಿ ಕರೆಗಳು ಸ್ಟೇಟ್ಹೋಂಗೆ ಬರುತ್ತಿವೆ. ಅವುಗಳಲ್ಲಿ ಬ್ರಾಹ್ಮಣ ಯುವಕರ ಕರೆಗಳೂ ಇರುತ್ತವೆ. ಹುಡುಗಿಯರನ್ನು ಕೇಳಿಕೊಂಡುಬಂದವರಿಗೆ ತಮ್ಮ ಮೇಲಧಿಕಾರಿಗಳ ಸಮ್ಮತಿ ಪಡೆದು, ರಕ್ತ ಪರೀಕ್ಷೆ ಇತ್ಯಾದಿಗಳನ್ನು ನೆರವೇರಿಸಿದ ಬಳಿಕವಷ್ಟೇ ವಿವಾಹ ನೋಂದಣಿ ಮಾಡಿಸಿ ಅಧಿಕೃತವಾಗಿ ವರನಿಗೊಪ್ಪಿಸಲಾಗುತ್ತದೆ. ಈ ರೀತಿ ಮದುವೆಯಾಗುವವರಿಗೆ ತಲಾ 20 ಸಾವಿರ ನಗದು, ವಧುವಿಗೆ ತಾಳಿ, ಸೀರೆ, ವರನಿಗೆ ಪ್ಯಾಂಟ್-ಶರ್ಟ್ ನೀಡಲಾಗುವುದು. ಸ್ಟೇಟ್ಹೋಂನಲ್ಲೇ ಮದುವೆಯಾಗುವುದಿದ್ದರೆ ದಾನಿಗಳ ಸಹಕಾರದಿಂದ ಯಥೋಚಿತ ವಿವಾಹ ಸಮಾರಂಭ ಸಂಘಟಿಸಲಾಗುವುದು ಎಂದು ಸ್ಟೇಟ್ಹೋಂನ ಸೂಪರಿಂಟೆಂಡೆಂಟ್ ಕುಸುಮಾ ಹೇಳಿದರು.

(ಸಂಯುಕ್ತ ಕರ್ನಾಟಕ, ಮಾ. 31, 2008)

ಉಡುಪಿ ನಗರಕ್ಕೊಂದೇ ಪಾರ್ಕ್- ಅದೇ ಭುಜಂಗ ಪಾರ್ಕ್


ಬೆಳೆಯುತ್ತಿರುವ ನಗರ ಉಡುಪಿಯಲ್ಲಿ ಆರಾಮದಾಯಕ ವಿಹಾರ ತಾಣ ಕಡಿಮೆ. ಆಧ್ಯಾತ್ಮಿಕತೆಯ ಒಲವುಳ್ಳವರು ಶ್ರೀಕೃಷ್ಣ ಮಠಕ್ಕೆ ಹೋಗಬೇಕು. ನೈಸರ್ಗಿಕ ಆಕರ್ಷಣೆಯುಳ್ಳವರು ದೂರದ ಮಲ್ಪೆ ಅಥವಾ ಕಾಪು ಕಡಲತೀರಕ್ಕೆ ತೆರಳಬೇಕು. ಪ್ರಕೃತಿಯೊಂದಿಗೆ ಸಮ್ಮಿಳಿತವಾಗಿ ಕೊಂಚ ಹೊತ್ತು ಆರಾಮದಾಯಕ ವೇಳೆ ಕಳೆಯಲು ಉಡುಪಿಯಲ್ಲಿ ಅವಕಾಶಗಳು ಕಡಿಮೆ. ಆದರೆ, ಇಲ್ಲವೇ ಇಲ್ಲವೆಂದಲ್ಲ; ಇದೆ. ಅದೇ ಭುಜಂಗ ಪಾರ್ಕ್. ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಜಿಲ್ಲಾ ಕೇಂದ್ರ ಕ್ರೀಡಾಂಗಣ ಬಳಿ ಸದ್ರಿ ಪಾರ್ಕ್ ಇದೆ.
ಭುಜಂಗ ಪಾರ್ಕ್ ಸುಮಾರು 9 ಎಕರೆ ವಿಸ್ತೀರ್ಣ ಹೊಂದಿದೆ. ಅಲ್ಲೇ ಸನಿಹದಲ್ಲಿ ಗಾಂಧಿಕಟ್ಟೆ, ಮುನಿಯಾಲು ಆಯುರ್ವೇದ ಕಾಲೇಜಿನವರ ಆಯುರ್ವೇದ ವನ, ಅದಕ್ಕೆ ಹೊಂದಿಕೊಂಡಂತೆ ಪಾರ್ಕ್. ಎಲ್ಲವೂ ಒಟ್ಟಾಗಿ ಭುಜಂಗ ಪಾರ್ಕ್ ಎಂದೇ ಜನಜನಿತ.
ಸಂಗೀತ ಶಿಕ್ಷಕರಾಗಿದ್ದ ಭುಜಂಗರಾಯರ ಸ್ಮರಣಾರ್ಥವಾಗಿ ಅವರ ಪುತ್ರ ನಿರ್ಮಿಸಿರುವ ಪಾರ್ಕ್ ಭುಜಂಗ ಪಾರ್ಕ್ ಎಂದೇ ಹೆಸರಾಯಿತು. ಇದೀಗ ಅಲ್ಲಿ ಕೊಂಚಮಟ್ಟಿನ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಶ್ರಮಿಸಲಾಗುತ್ತಿದೆ. ಪಾರ್ಕ್ ಅಭಿವೃದ್ಧಿಗಾಗಿ ಸ್ಥಳೀಯರನ್ನೊಳಗೊಂಡ ಸಮಿತಿಯೊಂದಿದೆ. ಪಾರ್ಕನ್ನು ಅಭಿವೃದ್ಧಿಪಡಿಸಲು ಸಮಿತಿ ಶ್ರಮಿಸುತ್ತಿದೆ.
ಇದೀಗ ವಿವಿಧ ಜಾತಿಯ ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯ, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆ ಇದೆ.
ಈ ಪಾರ್ಕಿಗೆ ಹೊಂದಿಕೊಂಡಂತಿರುವ ಒಂದಷ್ಟು ಜಾಗವನ್ನು ಮಣಿಪಾಲ ಸಮೀಪದ ಮುನಿಯಾಲು ಆಯುರ್ವೇದ ಕಾಲೇಜಿನವರು ಆಯುರ್ವೇದ ವನವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ವಿವಿಧ ನಕ್ಷತ್ರ ವನ, ರಾಶಿ ವನ, ನವಗ್ರಹ ವನ ಇತ್ಯಾದಿ ಮಾಡಲಾಗಿದ್ದು, ಅಳಿಯುತ್ತಿರುವ ಸಸ್ಯಗಳಿಗೆ ಕಾಯಕಲ್ಪ ನೀಡಲಾಗಿದೆ. ಭುಜಂಗರಾಯರ ಸಂಗೀತಪ್ರೇಮಕ್ಕೆ ಪೂರಕವಾಗಿ ಆಗಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದೂ ಇದೆ.
ಇದೇ ಪಾರ್ಕ್ ಪ್ರದೇಶಕ್ಕೆ ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಬಂದಿದ್ದರು! ಅವರು ಕುಳಿದ ಬಂಡೆಗಲ್ಲೊಂದು ಇಂದಿಗೂ ಇದ್ದು, ಅದನ್ನು ಗಾಂಧಿಕಟ್ಟೆ ಎಂದು ಕರೆಯಲಾಗುತ್ತಿದೆ. ರೇಡಿಯೋ ಟವರ್ ಕೂಡಾ ಇಂದು ಕಾಣಬಹುದು. ಉಡುಪಿಗೆ ಗಾಂಧಿ ಬಂದ ಕುರುಹಾಗಿ ಅವೆಲ್ಲವೂ ಇವೆ.
ಒಟ್ಟು ಭುಜಂಗ ಪಾರ್ಕ್ ಸಾರ್ವಜನಿಕರಿಗೆ ಮುಕ್ತವಾಗಿದೆ. ಮಕ್ಕಳು, ವಯೋವೃದ್ಧರನ್ನು ಸಂಜೆ ವೇಳೆ ಅಲ್ಲಿ ಕಾಣಬಹುದು. ಆದರೆ, ಸಂತಸದ ಸಂಗತಿ ಎಂದರೆ ಇತರ ಪಾರ್ಕುಗಳಂತೆ ಇಲ್ಲಿ ಪ್ರೇಮಿಗಳ ಹಾವಳಿ ಇಲ್ಲ!
ಭುಜಂಗ ಪಾರ್ಕ್ ಜೊತೆಗೆ ಪಾರ್ಕ್ ಎಂದು ಹೇಳಿಕೊಳ್ಳಬಹುದಾದ ನಾಯರ್ಕೆರೆ ಪಾರ್ಕ್, ಮಣಿಪಾಲದಲ್ಲಿ ಇದೀಗ ಅಭಿವೃದ್ಧಿಪಡಿಸಲಾಗುತ್ತಿರುವ ಪೀಕಾಕ್ ಪಾಯಿಂಟ್ ಇತ್ಯಾದಿಗಳಿವೆ. ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ ಮಣಿಪಾಲ ಪೈ ಬಂಧುಗಳ ಒಡೆತನದಲ್ಲಿರುವ ಖಾಸಗಿ ಪಾರ್ಕುಗಳು ಮಣಿಪಾಲದ ತುಂಬೆಲ್ಲಾ ಇವೆ. ಅವು `ನಾಯಿ ಮೊಲೆಯಲ್ಲಿ ಹಾಲಿದ್ದಂತೆ' ಇವೆ! .

(ಸಂಯುಕ್ತ ಕರ್ನಾಟಕ: ಮಾ. 15, 2008)

ಏಪ್ರಿಲ್ 17, 2010

ಕೋಟದಲ್ಲಿ ಪತ್ತೆಯಾದ ಅಪೂರ್ವ ಗಣಪ

ಕುಂದಾಪುರ ತಾಲ್ಲೂಕಿನ ಕೋಟದಲ್ಲಿ ಅಪೂರ್ವವಾದ ಗಣಪತಿಯ ವಿಗ್ರಹವೊಂದು ಪತ್ತೆಯಾಗಿದೆ. ಅದು 17ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂಬುದು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಪುರಾತತ್ವ ವಿಭಾಗ ಉಪನ್ಯಾಸಕ ಪ್ರೊ. ಟಿ. ಮುರುಗೇಶಿ ಅಭಿಪ್ರಾಯ.
ಕೇವಲ ಒಂದು ಅಡಿ ಎತ್ತರವಿರುವ ಚತುರ್ಭುಜ ಗಣಪತಿ ವಿಗ್ರಹ ಕುಳಿತ ಭಂಗಿಯಲ್ಲಿದೆ. ಸರಳವಾದ ಕರಂಡಕ ಮುಕುಟ ಮತ್ತು ಪ್ರಭಾವಳಿ ಇದೆ. ವಿಶೇಷವೆಂದರೆ ಈ ವಿಗ್ರಹಕ್ಕೆ 3 ಎಳೆಯ ಪವಿತ್ರ ಜನಿವಾರವಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಎಳೆಯ ಜನಿವಾರ ಶಿಲ್ಪಗಳಲ್ಲಿ ಕಂಡುಬರುತ್ತದೆ. 3 ಎಳೆಯ ಜನಿವಾರ ಅತ್ಯಂತ ಅಪರೂಪ.
ಎಡಮುರಿ ಶೈಲಿಯಲ್ಲಿರುವ ಈ ಗಣಪತಿ ವಿಗ್ರಹ, ತನ್ನ ಬಲ ಮುಂದಿನ ಕೈಯಲ್ಲಿ ಮುರಿದ ದಂತ ಹಿಡಿದಿದೆ. ಬಲ ಹಿಂದಿನ ಕೈಯಲ್ಲಿ ಅಂಕುಶ ಇದೆ. ಎಡ ಮುಂದಿನ ಕೈಯಲ್ಲಿ ಮೋದಕ ಉಂಟು. ಎಡ ಹಿಂದಿನ ಕೈಯಲ್ಲಿ ಪಾಶವಿದೆ.

ಸಂಯುಕ್ತ ಕರ್ನಾಟಕ: ಏ. 14, 2010

ಮಾರ್ಚ್ 18, 2010

ಉದಿಯಾವರದ ಸಿದ್ಧಿವಿನಾಯಕ ಕ್ಷಿಪ್ರಫಲದಾಯಕ


ದೇವಾಲಯಗಳು ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯ ಸಂಗಮ. ನಮ್ಮ ಸಂಸ್ಕೃತಿಯ ಕೇಂದ್ರಬಿಂದು. ದಿವ್ಯತೆಯ ಅರಿವನ್ನುಂಟುಮಾಡಿ, ಬದುಕಿಗೆ ಚೈತನ್ಯವನ್ನು, ಪ್ರೇರಣೆಯನ್ನು, ಜೀವನೋತ್ಸಾಹವನ್ನು ತಂದೀಯುವ ದಿವ್ಯ ತಾಣ. ಪರಶುಧರ ಸೃಷ್ಟಿಯೆಂದೇ ಪರಿಗಣಿತವಾದ ಉಡುಪಿ ಜಿಲ್ಲೆ ಅನೇಕ ಕಾರಣೀಕ ದೇವಸ್ಥಾನಗಳಿಂದ ಮಹಾಕ್ಷೇತ್ರವೆಂದು ಪ್ರಸಿದ್ಧಿ. ಅಂಥವುಗಳಲ್ಲಿ ಅಳುಪರ ರಾಜಧಾನಿಯಾಗಿ ಮೆರೆದ ಉದಿಯಾವರ ಅಥವಾ ಉದ್ಯಾವರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಈ ಪರಿಸರದ ಪ್ರಾಚೀನ ಕಾರಣೀಕ ದಿವ್ಯಸಾನ್ನಿಧ್ಯಗಳಲ್ಲೊಂದು.

ವಾಗೀಶಾದ್ಯ: ಸುಮನಸ: ಸವರ್ಾರ್ಥಾನುಮುಪಕ್ರಮೇ /
ಯಂ ನತ್ವಾ ಕೃತಕೃತ್ಯಾಸ್ಸ್ಯು: ತಂ ನಮಾಮಿ ಗಜಾನನಂ //

ಸುಮಾರು 7-8ನೇ ಶತಮಾನಕ್ಕೆ ಸೇರಿದ ಅತ್ಯಂತ ವಿರಳವಾದ ದ್ವಿಬಾಹು ಗಣಪತಿಯ ಮೂರ್ತಿಯಿರುವ ದೇವಳ ಇದಾಗಿದ್ದು, ಇತಿಹಾಸ ಸಂಶೋಧಕ ದಿ. ಡಾ. ಪಿ. ಗುರುರಾಜ ಭಟ್ ಪ್ರಕಾರ, ಇದು ಅಳುಪರ ಕಾಲದ ಆಲಯ. ಜೈನ- ಹಿಂದೂ ಧರ್ಮಗಳ ಮಿಶ್ರಿತ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಅದರ ಕುರುಹಾಗಿ ದೇವಳದೆದುರಿನ ಧ್ವಜಸ್ತಂಭದ ಬಳಿ ಇರುವ ಮಾನಸ್ತಂಭವನ್ನು ಹೋಲುವ ಕಲ್ಲುಗಂಬ ಸಾಕ್ಷಿಯಾಗಿದೆ.
15ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ದೇವಳಕ್ಕೆ ಉಂಬಳಿ ನೀಡಿದ, ಕದಂಬ ವಂಶಜ ಮಯೂರವರ್ಮನ ಆಳ್ವಿಕೆಗೊಳಪಟ್ಟಿರುವ ಬಗೆಗೆ ಶಾಸನಗಳು ದಾಖಲೆ ನೀಡುತ್ತವೆ. ಈ ದೇವಳ ಪ್ರಾಚೀನ ರಾಜರುಗಳ ಆಳ್ವಿಕೆಗೊಳಪಟ್ಟು ರಾಜಾಶ್ರಯದಲ್ಲಿ ನಡೆದಿರುವ ಕುರಿತು ದೃಢಪಡಿಸುತ್ತವೆ.
ಉದ್ಯಾವರ, ಕುತ್ಪಾಡಿ, ನಿಡಂಬೂರು, ಕಿದಿಯೂರು, ಅಂಬಲಪಾಡಿ, ಕನ್ನರ್ಪಾಡಿ, ಮಟ್ಟು, ಕಟಪಾಡಿಗಳೆಂಬ ಅಷ್ಟಗ್ರಾಮಗಳ ಅಧಿದೇವತೆಯಾದ ಉದಿಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಶಿಥಿಲಗೊಂಡಿದ್ದು, ಅದರ ನವೀಕರಣ ಮಾಡಲಾಗಿದೆ.
ಈ ದೇವಳದಲ್ಲಿ ವಿವಿಧ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ದೋಣಿ ಪಂಚಕಜ್ಜಾಯ ಇಲ್ಲಿನ ವಿಶೇಷ ಸೇವೆ. ದೋಣಿಯಾಕಾರದ ಲೋಹಪಾತ್ರೆಯಲ್ಲಿ ಪಂಚಕಜ್ಜಾಯ ಸಮರ್ಪಣೆ ಇದರ ವಿಶೇಷ. ಇದು ಕೃಷಿ, ಮೀನುಗಾರಿಕೆಯನ್ನು ಬಿಂಬಿಸುವ ದ್ಯೋತಕ. ವರ್ಷಂಪ್ರತಿ ಲಕ್ಷದೀಪೋತ್ಸವ, ವಿವಿಧ ಹಬ್ಬಹರಿದಿನಗಳ ಆಚರಣೆ ಇತ್ಯಾದಿಗಳೂ ನಡೆಯುತ್ತವೆ.

ಕಾಡಾನೆಯಲ್ಲವಿದು, ಕರು!

ಉಡುಪಿ ಬಳಿಯ ಕೆಳಾರ್ಕಳಬೆಟ್ಟು ನಿವಾಸಿ ಸರಸ್ವತಿ ಎಂಬವರ ಮನೆಯಲ್ಲಿ ವಿಚಿತ್ರ ಕರುವೊಂದು ಜನಿಸಿದೆ. ನೋಡುಗರಿಗೆ ಇದು ಕರುವೋ ಅಥವಾ ಕಾಡಾನೆಯೋ ಎಂಬ ಗುಮಾನಿ ಮೂಡುವಂತಿದೆ.
ಹಾಲ್ಸ್ಟಿನ್ ತಳಿಯ ಈ ಗಂಡು ಕರುವಿನ ಮುಖದಲ್ಲಿ ದೊಡ್ಡ ಗುಳ್ಳೆಯಿದ್ದು ಮೂಗಿನ ಬಳಿ ಒತ್ತಿಕೊಂಡಂತಿದೆ. ಪಾಪ, ಕರುವಿಗೆ ಉಸಿರಾಡಲೂ ಕಷ್ಟಕರವಾಗಿದೆ. ನವಜಾತ ಕರುವಿನ ಉಸಿರಾಟದ ಸ್ಥಿತಿ ನೋಡಿದ ಬಳಿಕವಷ್ಟೇ ಅದರ ಆಯುಷ್ಯ ಹೇಳಬಹುದಷ್ಟೇ ಎಂದು ತಮ್ಮ ಸೇವಾವಧಿಯಲ್ಲೇ ಪ್ರಥಮ ಬಾರಿಗೆ ಇಂಥ ಕರುವನ್ನು ಕಂಡಿರುವ ಮಲ್ಪೆ ಪಶುವೈದ್ಯಾಧಿಕಾರಿ ಡಾ. ಸಂದೀಪ್ ನುಡಿ.
ಪರಿಸರದ ನೂರಾರು ಮಂದಿ ಈ ವಿಚಿತ್ರ ಕರುವನ್ನು ನೋಡಲು ಬರುತ್ತಿದ್ದಾರೆ.

ಸಂಯುಕ್ತ ಕರ್ನಾಟಕ: ಫೆ. 19, 2008

ಕಡಲ ತಡಿಯ ರಕ್ಷಕ- ಕಾಂಡ್ಲಾ

ಉಪ್ಪುನೀರಲ್ಲಿ ಬೆಳೆಯುವ ಕಾಂಡ್ಲಾ ಸಸ್ಯ ಪ್ರವಾಹ ಕಾಲಕ್ಕೆ ನುಗ್ಗಿಬರುವ ನೀರನ್ನು ತಡೆಯುವ, ಭೂ ಸವಕಳಿಯನ್ನು ಸಂರಕ್ಷಿಸುವ ವಿಶಿಷ್ಟ ಸಸ್ಯ. ವಿವಿಧ ಜಾತಿಯ ಹಕ್ಕಿಗಳಿಗೆ ಆಸರೆ ನೀಡುವ, ಜಲಚರಗಳಿಗೆ ರಕ್ಷಣೆ ಒದಗಿಸುವ ಈ ಸಸ್ಯವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಬೆಳೆಸಲು ಇಲಾಖೆ ಯೋಜನೆ ರೂಪಿಸಿದೆ.
ಅರಣ್ಯ ಇಲಾಖೆ ಕುಂದಾಪುರ ಉಪ ವಿಭಾಗ ವತಿಯಿಂದ ಉಡುಪಿ ಹಾಗೂ ದ. ಕ. ಜಿಲ್ಲೆಯ ಕಡಲತೀರದ ಹಿನ್ನೀರು ಪ್ರದೇಶದಲ್ಲಿ ಕಾಂಡ್ಲಾ ಸಸ್ಯ ಬೆಳೆಯಲು ಒಂದು ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
ಭಾರತದ ಪಶ್ಚಿಮ ಬಂಗಾಲದ ಸುಂದರ ಬನದಲ್ಲಿ ವಿವಿಧ ಜಾತಿಯ ಕಾಂಡ್ಲಾ ಸಸ್ಯಗಳಿವೆ. ಆ ಬಳಿಕ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ವಿಪುಲವಾಗಿ ಈ ಸಸ್ಯಗಳನ್ನು ಕಾಣಬಹುದು. ಉಡುಪಿ ಹಾಗೂ ದ. ಕ. ಜಿಲ್ಲೆಗಳಲ್ಲಿ ಸುಮಾರು 14 ವಿಧದ ಕಾಂಡ್ಲಾ ಸಸ್ಯಗಳನ್ನು ಕಾಣಬಹುದಾಗಿದೆ. ಅರಣ್ಯ ಇಲಾಖೆಯ ಕುಂದಾಪುರ, ಮಂಗಳೂರು, ಹೊನ್ನಾವರ ಮತ್ತು ಕಾರವಾರ ವಿಭಾಗಗಳ ಪೈಕಿ ಕಾರವಾರ ವಿಭಾಗದಲ್ಲಿ ಈಗಾಗಲೇ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಬೆಳೆಸಲಾಗಿದ್ದು, ಕುಂದಾಪುರ ವಿಭಾಗದಲ್ಲಿಯೂ 300 ಹೆಕ್ಟೇರ್ ಪ್ರದೇಶದಲ್ಲಿ ಈ ಸಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಸುಮಾರು 900 ಹೆಕ್ಟೇರ್ ಪ್ರದೇಶದಲ್ಲಿ ಈ ವಿಶಿಷ್ಟ ತಳಿಯಿದೆ ಎಂಬುದು ಇಲಾಖೆ ಅಂಬೋಣ.
ಉಡುಪಿ ಜಿಲ್ಲೆಯ ಹೆಮ್ಮಾಡಿ ಗ್ರಾಮದ ಜಾಲಾಡಿಯಲ್ಲಿ ರಾಜ್ಯದಲ್ಲೇ ಪ್ರಥಮದ್ದಾದ ಕಾಂಡ್ಲಾ ಸಂಶೋಧನಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಖಾಸಗಿಯವರಿಗೂ ಈ ಅಪೂರ್ವ ಸಸಿ ಬೆಳೆಸಲು ಉತ್ತೇಜನ ನೀಡಲಾಗುತ್ತಿದ್ದು, ಅಂಥವರಿಗೂ ಸಹಾಯ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.

ಸಂಯುಕ್ತ ಕರ್ನಾಟಕ: ಫೆ. 6, 2008